ನವದೆಹಲಿ: ಲೋಕಸಭೆಗೆ ನಡೆಯುತ್ತಿರುವ ಆರನೇ ಹಂತದ ಮತದಾನದ ವೇಳೆ ನವದೆಹಲಿಯ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ರಾಹುಲ್ ಗಾಂಧಿ ಮತ ಚಲಾಯಿಸಿದ್ದಾರೆ.
ಈ ವೇಳೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಅರ್ಹ ಮತದಾರರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದಾರೆ.
ಮತದಾನದ ಬಳಿಕ ತಾಯಿ ಸೋನಿಯಾ ಗಾಂಧಿ ಅವರೊಂದಿಗೆ ರಾಹುಲ್ ಗಾಂಧಿ ಸೆಲ್ಫಿ ಕ್ಲಿಕ್ಕಿಸಿದ್ದಾರೆ.
'ಮೊದಲ ಐದು ಹಂತದ ಮತದಾನದಲ್ಲಿ ದೇಶದ ಜನರು ಸುಳ್ಳು, ದ್ವೇಷ ಮತ್ತು ಅಪಪ್ರಚಾರವನ್ನು ತಿರಸ್ಕರಿಸಿದ್ದಾರೆ. ಬದುಕಿಗೆ ಸಂಬಂಧಿಸಿದ ತಳಮಟ್ಟದ ನೈಜ ಸಮಸ್ಯೆಗಳಿಗೆ ಆದತ್ಯೆ ನೀಡಿದ್ದಾರೆ' ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
'ನಿಮ್ಮ ಮತವು ಬದುಕನ್ನು ಸುಧಾರಿಸುವುದಲ್ಲದೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ರಕ್ಷಣೆ ಮಾಡುತ್ತದೆ' ಎಂದು ಅವರು ಉಲ್ಲೇಖ ಮಾಡಿದ್ದಾರೆ.
'ಇಂದು ಆರನೇ ಹಂತದ ಮತದಾನ ನಡೆಯುತ್ತಿದೆ. ನಿಮ್ಮ ಮತದಾನದ ಮೂಲಕ, ಖಾಲಿ ಇರುವ 30 ಲಕ್ಷ ಸರ್ಕಾರಿ ಉದ್ಯೋಗದ ಭರ್ತಿ, ಯುಜನತೆಗೆ ವರ್ಷಕ್ಕೆ ₹1 ಲಕ್ಷ ಉದ್ಯೋಗ ಖಾತರಿ ಯೋಜನೆ, ಬಡ ಕುಟುಂಬದ ಮಹಿಳೆಯರ ಖಾತೆಗೆ ತಿಂಗಳಿಗೆ ₹8,500, ರೈತರು ಸಾಲಮುಕ್ತರಾಗಲಿದ್ದು, ತಮ್ಮ ಬೆಳೆಗಳಿಗೆ ಸರಿಯಾದ ಎಂಎಸ್ಪಿ ಪಡೆಯಲಿದ್ದಾರೆ. ಕಾರ್ಮಿಕರಿಗೆ ₹400 ದಿನಗೂಲಿ ಲಭಿಸಲಿದೆ' ಎಂದು ಹೇಳಿದ್ದಾರೆ.