ಅಮರೋಹ (ಉ.ಪ್ರದೇಶ): ನೆರೆಯ ಪಾಕಿಸ್ತಾನ ಹಸಿವಿನ ವಿರುದ್ಧ ಹೋರಾಡುತ್ತಿದೆ. ಇನ್ನೊಂದೆಡೆ ಭಾರತದಲ್ಲಿ 80 ಕೋಟಿಗೂ ಹೆಚ್ಚು ಜನರು ಉಚಿತ ಪಡಿತರ ಪಡೆಯುತ್ತಿದ್ದಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ಹೇಳಿದ್ದಾರೆ.
ಉತ್ತರ ಪ್ರದೇಶದ ಅಮರೋಹದಲ್ಲಿ ಬಿಜೆಪಿಯ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, 'ಫಿರ್ ಏಕ್ ಬಾರ್ ಮೋದಿ ಸರ್ಕಾರ್' (ಮತ್ತೊಂದು ಬಾರಿ ಮೋದಿ ಸರ್ಕಾರ) ಘೋಷವಾಕ್ಯ ದೇಶದೆಲ್ಲೆಡೆ ವ್ಯಾಪಿಸಿದೆ ಎಂದು ಹೇಳಿದರು.
1947ರ ವಿಭಜನೆಯ ನಂತರ ರೂಪುಗೊಂಡಿರುವ ಪಾಕಿಸ್ತಾನವು 23ರಿಂದ 24 ಕೋಟಿ ಜನಸಂಖ್ಯೆಯನ್ನು ಹೊಂದಿದ್ದು, ಇಂದು ಹಸಿವಿನಿಂದ ಬಳಲುತ್ತಿದೆ. ಇದೊಂದು ಉದಾಹರಣೆ ಮಾತ್ರವಾಗಿದೆ. ಒಂದು ಕಡೆ ಪಾಕಿಸ್ತಾನ, ಮತ್ತೊಂದು ಕಡೆ ಭಾರತದಲ್ಲಿ 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಪಡಿತರ ವಿತರಣೆಯ ಭರವಸೆಯಾಗಿದೆ ಎಂದು ಹೇಳಿದರು.
ಮುಂದಿನ ಐದು ವರ್ಷಗಳವರೆಗೆ ದೇಶದ 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಪಡಿತರ ವಿತರಿಸುವ ಭರವಸೆಯನ್ನು ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದೆ ಎಂದು ಅವರು ಉಲ್ಲೇಖಿಸಿದರು.