ಬೆಂಗಳೂರು: ಶಾಸಕ ಡಾ. ಜಿ. ಪರಮೇಶ್ವರ ಅವರಿಗೆ ಇಂದು ಕೊರಟಗೆರೆಯಲ್ಲಿ ಪ್ರಚಾರದ ವೇಳೆ ಕಲ್ಲಿನೇಟು ಬಿದ್ದಿರುವುದಕ್ಕೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ರಾಜ್ಯದಲ್ಲಿ ಆಗಲಿರುವ ಗಲಭೆಗಳಿಗೆ ಇದು ಪೂರ್ವ ಭಾವಿ ತಯಾರಿಯೇ ಇದು ಎಂದು ಪ್ರಶ್ನೆ ಮಾಡಿದೆ.
ಕೊರಟಗೆರೆ ತಾಲ್ಲೂಕಿನ ಭೈರೇನಹಳ್ಳಿಯಲ್ಲಿ ಶುಕ್ರವಾರ ಪ್ರಚಾರದ ವೇಳೆ ಕಲ್ಲು ತೂರಿದ್ದು, ಪರಮೇಶ್ವರ ಗಾಯಗೊಂಡಿದ್ದಾರೆ. ತಲೆಗೆ ಗಾಯವಾಗಿದ್ದು, ಸಮೀಪದ ಅಕ್ಕಿರಾಮಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಬಿಜೆಪಿ ವಿರುದ್ಧ ಹರಿಹಾಯ್ದಿದೆ.
ರಾಜ್ಯದ ಕಾನೂನು ಸುವ್ಯವಸ್ಥೆಯನ್ನ ಯಾವ ಹಂತಕ್ಕೆ ತಂದಿಟ್ಟಿದ್ದೀರಿ @JnanendraAraga ಅವರೇ,@siddaramaiah ಅವರ ಮೇಲೆ ಮೊಟ್ಟೆ ದಾಳಿ ಮಾಡಿದವರ ಮೇಲೆ ಕ್ರಮವಿಲ್ಲ,@DrParameshwara ಅವರಿಗೆ ಸೂಕ್ತ ರಕ್ಷಣೆ ಇಲ್ಲ.
— Karnataka Congress (@INCKarnataka) April 28, 2023
ಇದೆಲ್ಲವೂ ಬಿಜೆಪಿಯ ವೈಫಲ್ಯವೋ, ಷಡ್ಯಂತ್ರವೋ?
ಅಮಿತ್ ಶಾ ಅವರ ನಿರ್ದೇಶನದಂತೆ "ಗಲಭೆಯುಕ್ತ ಕರ್ನಾಟಕ" ಮಾಡಲು ತಯಾರಿಯೇ? pic.twitter.com/CiYCgonBE2
‘ಜಿ. ಪರಮೇಶ್ವರ ಅವರ ಮೇಲೆ ಷಡ್ಯಂತ್ರ ರೂಪಿಸಿ ಕಲ್ಲು ತೂರಿದ ಘಟನೆಯು ಕರ್ನಾಟಕವೇ ತಲೆತಗ್ಗಿಸುವಂತಹದ್ದು. ವಿರೋಧ ಪಕ್ಷಗಳ ನಾಯಕರ ಮೇಲೆ ಮೊದಲಿಂದಲೂ ವ್ಯವಸ್ಥಿತವಾಗಿ ದಾಳಿ ನಡೆಸಲಾಗುತ್ತಿದೆ. ಇದು ಅಮಿತ್ ಶಾ ಅವರ "ಗಲಭೆ ನಡೆಯುತ್ತದೆ" ಎಂಬ ಎಚ್ಚರಿಕೆಯ ಹಿಂದಿನ ಪೂರ್ವಭಾವಿ ತಯಾರಿಗಳೇ? ದಲಿತ ನಾಯಕರ ಮೇಲೆ ಬಿಜೆಪಿಗೆ ಏಕಿಷ್ಟು ದ್ವೇಷ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
‘ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಯಾವ ಹಂತಕ್ಕೆ ತಂದಿಟ್ಟಿದ್ದೀರಿ ಆರಗ ಜ್ಞಾನೇಂದ್ರ ಅವರೇ? ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ದಾಳಿ ಮಾಡಿದವರ ಮೇಲೆ ಕ್ರಮವಿಲ್ಲ. ಪರಮೇಶ್ವರ ಅವರಿಗೆ ಸೂಕ್ತ ರಕ್ಷಣೆ ಇಲ್ಲ. ಇದೆಲ್ಲವೂ ಬಿಜೆಪಿಯ ವೈಫಲ್ಯವೋ, ಷಡ್ಯಂತ್ರವೋ? ಅಮಿತ್ ಶಾ ಅವರ ನಿರ್ದೇಶನದಂತೆ "ಗಲಭೆಯುಕ್ತ ಕರ್ನಾಟಕ" ಮಾಡಲು ತಯಾರಿಯೇ?’ ಎಂದೂ ಆಕ್ರೋಶ ವ್ಯಕ್ತಪಡಿಸಿದೆ.
‘ಉತ್ತರ ಪ್ರದೇಶ, ಬಿಹಾರದಿಂದ ಬಿಜೆಪಿ ಬಾಡಿಗೆ ಗೂಂಡಾಗಳನ್ನು ಕರೆಸಿ ಪ್ರತಿ ಕ್ಷೇತ್ರಗಳಲ್ಲಿ ಬಿಟ್ಟಿರುವುದು ವರದಿಯಾಗಿದೆ. ಈ ಗೂಂಡಾಪಡೆ ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ವಿಧ್ವಂಸಕ ಕೃತ್ಯಗಳನ್ನು ನಡೆಸುವ ಷಡ್ಯಂತ್ರ ನಡೆಸಿರುವುದಕ್ಕೆ ಜಿ. ಪರಮೇಶ್ವರ ಅವರ ಮೇಲಿನ ಹಲ್ಲೆಯೇ ಸಾಕ್ಷಿ. ಚುನಾವಣಾ ಆಯುಕ್ತರು ಶಾಂತಿಯುತ ಮತದಾನ ನಡೆಸಲು ಕ್ರಮವಹಿಸಬೇಕು’ ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಕೊರಟಗೆರೆ: ತಾಲ್ಲೂಕಿನ ಭೈರೇನಹಳ್ಳಿಯಲ್ಲಿ ಶುಕ್ರವಾರ ಪ್ರಚಾರದ ವೇಳೆ ಕಲ್ಲು ತೂರಿದ್ದು, ಕಾಂಗ್ರೆಸ್ ಅಭ್ಯರ್ಥಿ ಡಾ.ಜಿ.ಪರಮೇಶ್ವರ ಗಾಯಗೊಂಡಿದ್ದಾರೆ. ತಲೆಗೆ ಗಾಯವಾಗಿದ್ದು, ಸಮೀಪದ ಅಕ್ಕಿರಾಮಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.
ಪ್ರಚಾರ ಸಮಯದಲ್ಲಿ ಕಾರ್ಯಕರ್ತರು ಪರಮೇಶ್ವರ ಅವರನ್ನು ಎತ್ತಿಕೊಂಡು ಹೂವು ಸುರಿದಿದ್ದಾರೆ. ಈ ಸಮಯದಲ್ಲಿ ತೂರಿಬಂದ ಕಲ್ಲು ತಲೆಗೆ ಬಿದ್ದಿದೆ. ತಲೆಯಿಂದ ರಕ್ತ ಸುರಿದಿದ್ದು, ಬಟ್ಟೆಯಿಂದ ತಲೆಯನ್ನು ಒತ್ತಿ ಹಿಡಿದುಕೊಂಡಿದ್ದಾರೆ. ನಂತರ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಗಿದೆ. ಹೂವು ಸುರಿಯುವ ಸಂದರ್ಭ ನೋಡಿಕೊಂಡು ದುಷ್ಕರ್ಮಿಗಳು ಕಲ್ಲು ತೂರಿರಬಹುದು ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.