ಜಮಖಂಡಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆನಂದ ನ್ಯಾಮಗೌಡ ಸ್ಪರ್ಧಿಸಿದ್ದಾರೆ. ಕ್ಷೇತ್ರದ ಕನಸುಗಳ ಬಗ್ಗೆ ನೀಡಿದ ಸಂದರ್ಶನ ಇಂತಿದೆ.
ನಿಮಗೆ ಯಾಕೆ ಮತ ನೀಡಬೇಕು?
ವಿರೋಧ ಪಕ್ಷದ ಶಾಸಕನಾಗಿದ್ದುಕೊಂಡೂ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಮತ ನೀಡಲಿದ್ದಾರೆ. ₹215 ಕೋಟಿ ವೆಚ್ಚದಲ್ಲಿ ತಾಯಿ ಮಕ್ಕಳ ಆಸ್ಪತ್ರೆ, ಪಾಲಿಟೆಕ್ನಿಕ್ ಕಾಲೇಜು, ತುಬಚಿ–ಬಬಲೇಶ್ವರ ಏತ ನೀರಾವರಿಯಿಂದ ತಾಲ್ಲೂಕಿನ 33 ಸಾವಿರ ಎಕರೆ ನೀರಾವರಿಯಾಗಲಿದೆ. ಬೇಸಿಗೆಯಲ್ಲಿಯೂ ಕುಡಿಯುವ ನೀರಿನ ತೊಂದರೆಯಾಗದಂತೆ ಮಾಡಿದ್ದೇವೆ. ವಿಶ್ವವಿದ್ಯಾಲಯ ಆರಂಭವಾಗಿದೆ. ಕಾಲೇಜು, ವಸತಿ ನಿಲಯಗಳ ನಿರ್ಮಾಣ ಮಾಡಲಾಗಿದೆ. ಹೀಗೆಯೇ ಅಭಿವೃದ್ಧಿ ಕಾರ್ಯಗಳ ಪಟ್ಟಿ ದೊಡ್ಡದಾಗುತ್ತಾ ಹೋಗುತ್ತದೆ. ಕ್ಷೇತ್ರದ ಅಭಿವೃದ್ಧಿ ಕನಸುಗಳೇನು?
ಕ್ಷೇತ್ರದ ಅಭಿವೃದ್ಧಿ ಕನಸುಗಳೇನು?
ಮೊದಲು ಜಿಲ್ಲೆಯಾಗಬೇಕಿದೆ. ಶಿಕ್ಷಣದ ಕಾಶಿ ಎನ್ನುತ್ತಾರೆ ಹಾಗಾಗಿ ಇನ್ನೊಂದಿಷ್ಟು ವಸತಿ ನಿಲಯಗಳನ್ನು ನಿರ್ಮಿಸಬೇಕಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ಅನುಕೂಲವಾಗುವಂತಹ ಡಿಜಿಟಲ್ ಗ್ರಂಥಾಲಯ. ಮರೆಗುದ್ದಿ–ಗಲಗಲಿ ಏತ ನೀರಾವರಿ ಯೋಜನೆ ಡಿಪಿಆರ್ ಆಗಿದೆ. ಅದನ್ನು ಜಾರಿಗೊಳಿಸುವ ಮೂಲಕ ನೀರಾವರಿ ಸೌಲಭ್ಯ ಒದಗಿಸುವುದು. ತುಬಚಿ–ಬಬಲೇಶ್ವರ ಏತ ನೀರಾವರಿ ಸಬ್ ಕೆನಾಲ್ಗಳ ಕಾಮಗಾರಿ ಪೂರ್ಣ ಮಾಡಿ, ಜಮೀನಿಗಳಿಗೆ ನೀರು ಹರಿಯುವಂತೆ ಮಾಡಬೇಕಿದೆ.
ತಂದೆ ಅವರನ್ನು ಹೇಗೆ ನೆನಪಿಸಿಕೊಳ್ಳುವಿರಿ?
ಶ್ರಮಬಿಂದು ಸಾಗರ ನಿರ್ಮಾಣದ ಮೂಲಕ ಅವರು ದೇಶದ ಗಮನ ಸೆಳೆದಿದ್ದಾರೆ. ಬ್ಯಾರೇಜ್ ನಿರ್ಮಾಣದಿಂದ ಬೇಸಿಗೆಯಲ್ಲಿ ಕುಡಿಯುವ ನೀರು ಸಿಗುವಂತಾಗಿದೆ. ಕೈಗಾರಿಕೆಗಳ ಸ್ಥಾಪನೆ ಮೂಲಕ ಉದ್ಯೋಗ ಕೊಡುವ ಕೆಲಸವನ್ನೂ ಮಾಡಿದ್ದಾರೆ. ಅವರ ಆದರ್ಶಗಳ ಮಾರ್ಗದಲ್ಲಿಯೇ ನಡೆಯುತ್ತಿದ್ದೇನೆ.
ಕಾಂಗ್ರೆಸ್ ಬಂಡಾಯ ಸ್ಪರ್ಧೆ ಬಗ್ಗೆ ಏನು ಹೇಳುವಿರಿ?
ಅವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಲ್ಲ. 2018ರಲ್ಲಿಯೇ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಅವರ ಸ್ಪರ್ಧೆಯಿಂದ ಕಾಂಗ್ರೆಸ್ ಪಡೆಯುವ ಮತಗಳಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ.
ಪ್ರಚಾರಕ್ಕೆ ಸ್ಪಂದನೆ ಹೇಗಿದೆ?
ಯುವಕನಾಗಿರುವ ನನ್ನನ್ನು ಎಲ್ಲ ವಯೋಮಾನದವರು ಸ್ವಾಗತಿಸುತ್ತಿದ್ದಾರೆ. ಮನೆ ಮಗನಂತೆ ಕಾಣುತ್ತಿದ್ದಾರೆ. ತಂದೆಯವರ ಸಾಧನೆಗಳ ಬಗ್ಗೆ ಅವರೇ ಹೇಳುತ್ತಿದ್ದಾರೆ. ಒಟ್ಟಾರೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.