ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ | ‘ಕೊಡುಗೆ’ ಬಯಸಿ ತನ್ವೀರ್‌ಗೆ ‘ಹೊಣೆ’

ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ, ಸಂಘಟನೆಯ ಜವಾಬ್ದಾರಿ
Published 26 ಮಾರ್ಚ್ 2024, 6:19 IST
Last Updated 26 ಮಾರ್ಚ್ 2024, 6:19 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕ, ಮಾಜಿ ಸಚಿವ ತನ್ವೀರ್ ಸೇಠ್ ಅವರಿಗೆ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಪಕ್ಷದ ಸಂಘಟನೆಯ ಪ್ರಮುಖ ಜವಾಬ್ದಾರಿ ವಹಿಸುವ ಮೂಲಕ‍ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ‘ಕೊಡುಗೆ’ಯನ್ನು ಹೈಕಮಾಂಡ್‌ ಬಯಸಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ಅವರನ್ನು ನೇಮಿಸಲಾಗಿದೆ. ಪಕ್ಷದ ಸಂಘಟನೆ ಮತ್ತು ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಮೈಸೂರು ವಿಭಾಗದ ಜವಾಬ್ದಾರಿಯನ್ನೂ ಅವರಿಗೆ ನೀಡಲಾಗಿದೆ. ಮೈಸೂರು ನಗರ, ಮೈಸೂರು ಗ್ರಾಮೀಣ, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು ‘ಸಂಘಟನಾತ್ಮಕ ಜಿಲ್ಲೆ’ಗಳ ಉಸ್ತುವಾರಿ ವಹಿಸಲಾಗಿದೆ. ಜೊತೆಗೆ, ಅಲ್ಪಸಂಖ್ಯಾತರ ವಿಭಾಗ ಮತ್ತು ಸೇವಾದಳದ ಉಸ್ತುವಾರಿಯನ್ನೂ ನೀಡಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಹಿಸಿದ್ದಾರೆ. ಅವರು ಶಾಸಕರಾದ ನಂತರ, ಪಕ್ಷದ ಮಟ್ಟದಲ್ಲಿ ದೊಡ್ಡದಾದ ಜವಾಬ್ದಾರಿಯನ್ನು ನೀಡಿರುವುದು ಇದೇ ಮೊದಲು. ಕಾರ್ಯತಂತ್ರ ರೂಪಿಸುವ ಭಾಗವನ್ನಾಗಿ ಅವರನ್ನು ಬಳಸಿಕೊಳ್ಳಲಾಗುತ್ತಿದೆ.

ಇದರೊಂದಿಗೆ, ಮೈಸೂರು–ಕೊಡಗು, ಮಂಡ್ಯ, ಹಾಸನ ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ತಮ್ಮ ‘ಸಾಂಪ್ರದಾಯಿಕ ಮತದಾರರಾದ’ ಅಲ್ಪಸಂಖ್ಯಾತರನ್ನು ಮತ್ತಷ್ಟು ಹೆಚ್ಚಿನ ಪ್ರಮಾಣದಲ್ಲಿ ಮನವೊಲಿಸಿಕೊಳ್ಳುವ ಕಾರ್ಯತಂತ್ರ ಪಕ್ಷದ ವರಿಷ್ಠರದ್ದಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಅನುಕೂಲದ ನಿರೀಕ್ಷೆ:

‘ತನ್ವೀರ್‌ ಅವರು ಹಿಂದೆ ಎನ್‌ಎಸ್‌ಯುಐನಲ್ಲಿ ಕೆಲಸ ಮಾಡಿದ್ದರು. ಕಾಂಗ್ರೆಸ್‌ ಜಿಲ್ಲಾ ಸಮಿತಿಯಲ್ಲಿ ಸದಸ್ಯರಾಗಿದ್ದರು. 6ನೇ ಬಾರಿಗೆ ಶಾಸಕರಾಗಿರುವ ಅವರು ಈವರೆಗೆ ಪಕ್ಷದ ಪ್ರಮುಖ ಪದಾಧಿಕಾರಿಯಾಗಿ ಕೆಲಸ ಮಾಡಿರಲಿಲ್ಲ. ಈಗ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನವನ್ನು ಅವರು ಕೊಡಲಾಗಿದ್ದು, ಮಹತ್ವದ ಜವಾಬ್ದಾರಿಯನ್ನು ವಹಿಸಲಾಗಿದೆ. ಇದರಿಂದ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗಲಿದೆ ಎಂಬ ನಿರೀಕ್ಷೆ ಹೊಂದಲಾಗಿದೆ’ ಎಂದು ಪಕ್ಷದ ನಗರ ಜಿಲ್ಲಾ ಸಮಿತಿಯ ಅಧ್ಯಕ್ಷ ಆರ್.ಮೂರ್ತಿ ಪ್ರತಿಕ್ರಿಯಿಸಿದರು.

ಮುಸ್ಲಿಮರು ಹೆಚ್ಚಿನ ಬಾಹುಳ್ಯ ಹೊಂದಿರುವ ನರಸಿಂಹರಾಜ ಕ್ಷೇತ್ರದಲ್ಲಿ 2002ರಲ್ಲಿ ತಂದೆ ಅಜೀಜ್‌ ಸೇಠ್ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ತನ್ವೀರ್ ಸೇಠ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. 2004, 2008, 2013, 2018 ಹಾಗೂ 2023ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಲ್ಲಿ ಗೆಲುವು ಸಾಧಿಸಿದ್ದಾರೆ. ಸಚಿವರಾಗಿ ಕೆಲಸ ಮಾಡಿದ ಅನುಭವವೂ ಇದ್ದು, ಅದನ್ನು ಪಕ್ಷದ ಸಂಘಟನೆಗೆ ಬಳಸಬೇಕಾದ ಸಂದರ್ಭವನ್ನು ಪಕ್ಷ ಅವರಿಗೆ ಸೃಷ್ಟಿಸಿದೆ. ಹಳೆಯ ಮೈಸೂರು ಭಾಗದ ಪ್ರಮುಖ ಜಿಲ್ಲೆಗಳಲ್ಲಿ ಜವಾಬ್ದಾರಿ ಸ್ಥಾನದಲ್ಲಿ ನಿಂತು ಮುನ್ನಡೆಸುವ ಅವಕಾಶ ಅವರಿಗೆ ಒದಗಿಬಂದಿದೆ.

‘ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮತದಾರರಲ್ಲಿ ಪರಿಶಿಷ್ಟರು ಮೊದಲ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಒಕ್ಕಲಿಗ ಸಮುದಾಯವಿದೆ. ಮುಸ್ಲಿಮರು 3ನೇ ಕ್ರಮಾಂಕದಲ್ಲಿದ್ದಾರೆ’ ಎಂಬುದು ರಾಜಕೀಯ ಪಕ್ಷಗಳ ಲೆಕ್ಕಾಚಾರವಾಗಿದೆ. ಹೀಗಾಗಿ, ರಾಜಕೀಯ ಪಕ್ಷಗಳವರು ಅಹಿಂದ ಮತಗಳ ಮೇಲೆ ಕಣ್ಣಿಟ್ಟು ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದಾರೆ.

6ನೇ ಬಾರಿಗೆ ಶಾಸಕರಾಗಿರುವ ತನ್ವೀರ್‌ ಸೇಠ್ ಮುಸ್ಲಿಂ ಸಮಾಜದ ಪ್ರಭಾವಿ ನಾಯಕ ಅವರ ಅನುಭವ ಬಳಕೆಗೆ ಯೋಜಿಸಿದ ಹೈಕಮಾಂಡ್‌

ಪಕ್ಷ ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವ ವಿಶ್ವಾಸದಿದೆ. ಮೈಸೂರು ವಿಭಾಗದ ಜಿಲ್ಲೆಗಳಲ್ಲಿ ಸಂಚರಿಸಿ ಸಂಘಟನೆ ಬಲಪಡಿಸಲು ಶ್ರಮಿಸುತ್ತೇನೆ.
ತನ್ವೀರ್‌ ಸೇಠ್ ಶಾಸಕ

ಎರಡೂ ಪಕ್ಷದಲ್ಲೂ ಮೈಸೂರಿನವರಿಗೇ ‘ಜವಾಬ್ದಾರಿ’! ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಅಲ್ಪಸಂಖ್ಯಾತರ ಸಂಘಟನೆಯ ಜವಾಬ್ದಾರಿ ಮೈಸೂರಿನವರಿಗೇ ಸಿಕ್ಕಿರುವುದು ವಿಶೇಷ. ಅದರಲ್ಲೂ ಅವರಿಬ್ಬರೂ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯವರೇ. ಕಾಂಗ್ರೆಸ್‌ನಲ್ಲಿ ತನ್ವೀರ್ ಸೇಠ್ ಅವರಿಗೆ ದೊರೆತಿದ್ದರೆ ಬಿಜೆಪಿಯಲ್ಲಿ ನರಸಿಂಹರಾಜ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಡಾ.ಅನಿಲ್ ಥಾಮಸ್ ಅವರಿಗೆ ಸ್ಥಾನ ಸಿಕ್ಕಿದೆ. ಅವರನ್ನು ಬಿಜೆಪಿ ರಾಜ್ಯ ಅಲ್ಪಸಂಖ್ಯಾತರ ಮೋರ್ಚಾದ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ತನ್ವೀರ್‌ ಮುಸ್ಲಿಂ ಹಾಗೂ ಅನಿಲ್‌ ಕ್ರೈಸ್ತ ಧರ್ಮಕ್ಕೆ ಸೇರಿದವರಾಗಿದ್ದಾರೆ.

ನಿವೃತ್ತಿ ಬಯಸಿದ್ದವರಿಗೆ ಮತ್ತೊಂದು ಅವಕಾಶ! ಹೋದ ವರ್ಷ ವಿಧಾನಸಭೆ ಚುನಾವಣೆಗೆ ಮುನ್ನ ಅವರು ರಾಜಕೀಯ ನಿವೃತ್ತಿ ಬಯಸಿದ್ದರು. 2023ರ ಫೆ.28ರಂದು ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುತ್ತಿದ್ದು ಈ ಬಗ್ಗೆ ಪಕ್ಷದ ವರಿಷ್ಠರಿಗೆ ಪತ್ರ ಬರೆದಿದ್ದೇನೆ. 2019ರ ನವೆಂಬರ್‌ನಲ್ಲಿ ನನ್ನ ಮೇಲಾದ ಗಂಭೀರ ಹಲ್ಲೆಯು ಆರೋಗ್ಯದ ಮೇಲೆ ಪರಿಣಾಮ ಬೀರಿದ್ದು ಇನ್ನೂ ಚೇತರಿಸಿಕೊಂಡಿಲ್ಲ. ಅನಾರೋಗ್ಯದ ಕಾರಣ ಸ್ಪರ್ಧಿಸುವುದಿಲ್ಲ’ ಎಂದು ತನ್ವೀರ್‌ ಸೇಠ್ ಹೇಳಿಕೆ ನೀಡಿದ್ದರು. ಇದರಿಂದ ಬೆಂಬಲಿಗರು ತೀವ್ರ ಬೇಸರಪಟ್ಟುಕೊಂಡಿದ್ದರು. ಬಳಿಕ ಸೇಠ್‌ ಮನವೊಲಿಸಿದ ಹೈಕಮಾಂಡ್‌ ಚುನಾವಣೆಯಲ್ಲಿ ಕಣಕ್ಕಿಳಿಸಲು ಯಶಸ್ವಿಯಾಗಿತ್ತು. ಅವರು ಬಿಜೆಪಿ ಹಾಗೂ ಎಸ್‌ಡಿಪಿಐ ಪೈಪೋಟಿಯನ್ನು ಎದುರಿಸಿ ಸತತ 6ನೇ ಬಾರಿಗೆ (ಒಂದು ಉಪ ಚುನಾವಣೆ ಸೇರಿ) ಗೆದ್ದಿದ್ದರು. ಕಾಂಗ್ರೆಸ್‌ ಸರ್ಕಾರ ರಚನೆಯಾದ ಬಳಿಕ ಅವರಿಗೆ ಸಚಿವ ಸ್ಥಾನ ತಪ್ಪಿತ್ತು. ಈಗ ಪಕ್ಷದ ಕಾರ್ಯಾಧ್ಯಕ್ಷ ಹುದ್ದೆ ದೊರೆತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT