ವಿಜಯಪುರ: ಕಾಂಗ್ರೆಸ್ ಸ್ವಾತಂತ್ರ್ಯದ ಹೋರಾಟಕ್ಕಾಗಿ ಉದಯಿಸಿದ ಪಕ್ಷ. ತ್ಯಾಗ, ಬಲಿದಾನ ಮಾಡಿರುವ ಪಕ್ಷ. ಆದರೆ, ಬಿಜೆಪಿ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟೀಷರ ಪರವಾಗಿದ್ದ ಪಕ್ಷ ಎಂದು ಕೈಗಾರಿಕೆ, ಮೂಲಸೌಲಭ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಆರೋಪಿಸಿದರು.
ತಿಕೋಟಾ ತಾಲ್ಲೂಕಿನ ಟಕ್ಕಳಕಿ ಮತ್ತು ಜಾಲಗೇರಿ ಗ್ರಾಮಗಳಲ್ಲಿ ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಪರ ಪ್ರಚಾರ ಕೈಗೊಂಡು ಅವರು ಮಾತನಾಡಿದರು.
ಭಾರತದೊಂದಿಗೆ ಸ್ವಾತಂತ್ರ್ಯ ಹೊಂದಿರುವ ಅನೇಕ ರಾಷ್ಟ್ರಗಳು ಇನ್ನೂ ಅಭಿವೃದ್ಧಿಯಾಗದೇ ಹೆಣಗಾಡುತ್ತಿವೆ. ಆದರೆ, ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ದೇಶದ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದ್ದರಿಂದ ಭಾರತ ಇಂದು ಸದೃಢವಾಗಿ ನಿಂತಿದೆ ಎಂದು ಹೇಳಿದರು.
ಮೋದಿ ಪೊಳ್ಳು ಭರವಸೆ ಬಗ್ಗೆ ಯುವಕರು ಸೇರಿದಂತೆ ಎಲ್ಲರಿಗೂ ಅರಿವಾಗಿದ್ದು, ಈ ಬಾರಿ ಜಾಗೃತರಾಗಿದ್ದಾರೆ. ಕಾಂಗ್ರೆಸ್ ಪರವಾಗಿದ್ದಾರೆ. ನ್ಯಾಯಕ್ಕಾಗಿ ಹೋರಾಟ ನಡೆಸಿದ ರೈತರ ಹೋರಾಟವನ್ನು ಲಾಠಿ ಬಳಸಿ ಜಲಫಿರಂಗಿ ಉಪಯೋಗಿಸಿ ಹತ್ತಿಕ್ಕಲಾಯಿತು. ಚುನಾವಣೆ ಬಾಂಡ್ ವಿಷಯದಲ್ಲಿ ಅವುಗಳನ್ನು ಖರೀದಿಸಿದವರ ಹೆಸರನ್ನು ಗೌಪ್ಯವಾಗಿಟ್ಟು, ದೊಡ್ಡ ಹಗರಣ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ಪ್ರಾಮಾಣಿಕತೆಯ ಮುಖವಾಡ ಕಳಚಿದೆ. ಮೋದಿ ಅವರು ಭ್ರಷ್ಟಾಚಾರ ಪ್ರಸ್ತಾಪ ಬಿಟ್ಟು ಭಾವನಾತ್ಮಕ ವಿಚಾರ ಮುಂದಿಟ್ಟುಕೊಂಡು ಮತ ಕೇಳುತ್ತಿದ್ದಾರೆ ಎಂದು ಅವರು ಹೇಳಿದರು.
ಕಾಂಗ್ರೆಸ್ ರೈತರು, ಬಡವರು, ಜನಸಾಮಾನ್ಯರಿಗೆ ಸ್ವಾವಲಂಬಿಯಾಗಿ ಬದುಕಲು ಅಭಿವೃದ್ಧಿ ಯೋಜನೆಗಳ ಮೂಲಕ ಶಕ್ತಿ ತುಂಬುತ್ತಿದೆ ಎಂದು ಹೇಳಿದರು.
ಮುಂಬರುವ ದಿನಗಳಲ್ಲಿ ಟಕ್ಕಳಕಿ ಮತ್ತು ಜಾಲಗೇರಿ ಸುತ್ತಲಿನ ಉಳಿದ ಭಾಗಕ್ಕೆ ನೀರಾವರಿ ಸೌಲಭ್ಯ ಒದಗಿಸಲಾಗುವುದು. ಈ ಭಾಗದಲ್ಲಿ ಹೊಲಗಾಲುವೆ ನಿರ್ಮಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದ್ದು, ಮುಂದಿನ ಆರು ತಿಂಗಳಲ್ಲಿ ಈ ಭಾಗದ ರೈತರ ಜಮೀನಿಗೆ ನೀರು ಹರಿಸಲಾಗುವುದು ಎಂದರು.
ಸೀನಾ ರಾಮಣ್ಣ ರಾಠೋಡ, ಪ್ರಶಾಂತ ಝಂಡೆ, ಗೀತಾಂಜಲಿ ಪಾಟೀಲ ಮತ್ತು ಅನೀಲ ಚವ್ಹಾಣ, ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಮಧುಕರ ಜಾಧವ, ವಿಠ್ಠಲ ಪೂಜಾರಿ, ಪೋಪಟ ಮಹಾರಾಜರು, ಬಾಳು ಮಹಾರಾಜರು, ಪಿಂಟೂ ಮಹಾರಾಜರು, ರಾಮಣ್ಣ ಮಾಳಿ, ರಾಜುಗೌಡ ಪೊಲೀಸ್ ಪಾಟೀಲ, ರಾಘು ಕುಲಕರ್ಣಿ, ವಾಮನ ಚವ್ಹಾಣ ಸತೀಶ ನಾಯಕ, ಉತ್ತಮ ಝಂಡೆ, ಶಿವಪ್ಪ ಚಲವಾದಿ, ಸಂಜು ಪವಾರ, ಆತ್ಮಾರಾಮ ಕಾಟಕರ, ಅನುಬಾಯಿ ಬಾಳು ರಾಠೋಡ, ಅಪ್ಪು ದಳವಾಯಿ, ರಾಜು ಪವಾರ, ತಾವರು ರಾಠೋಡ, ಓಗೆಪ್ಪ ಗೋಪಣೆ, ಈರನಗೌಡ ಬಿರಾದಾರ, ಧನಸಿಂಗ ಚವ್ಹಾಣ, ಬೂತಾಳಸಿದ್ದ ಒಡೆಯರ, ಅನೀಲ ಚವ್ಹಾಣ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.