ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಸ್ಥಾನಮಾನ ಅರಿತು ರಾಜಕಾರಣ ಮಾಡಿ: ಹೆಬ್ಬಾಳ್ಕರ್ ವಿರುದ್ಧ ಮಂಗಲಾ ಕಿಡಿ

Published 30 ಮಾರ್ಚ್ 2024, 15:54 IST
Last Updated 30 ಮಾರ್ಚ್ 2024, 15:54 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯ ಹಿರಿಯ ರಾಜಕಾರಣಿಗಳನ್ನು ಹಿಂದಕ್ಕೆ ತಳ್ಳಿ. ಅವರಿಗೆ ಸಚಿವ ಸ್ಥಾನ ವಂಚನೆ ಮಾಡಿ. ತಾವೇ ಸಚಿವೆ ಆದವರು ಲಕ್ಷ್ಮಿ ಹೆಬ್ಬಾಳಕರ. ತಮ್ಮ ಘನತೆಯನ್ನು ಜ್ಞಾನದಲ್ಲಿ ಇಟ್ಟುಕೊಂಡು ಇನ್ನೊಬ್ಬರ ಬಗ್ಗೆ ಮಾತನಾಡಬೇಕು’ ಎಂದು ಸಂಸದೆ ಮಂಗಲಾ ಅಂಗಡಿ ಕಿಡಿ ಕಾರಿದ್ದಾರೆ.

‘ಬೀಗರ ಟಿಕೆಟ್‌ ತಪ್ಪಿಸಿದ ಶೆಟ್ಟರ್‌’ ಎಂಬ ಲಕ್ಷ್ಮಿ ಹೆಬ್ಬಾಳಕರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಲಕ್ಷ್ಮಿ ಅವರು ಬಗ್ಗೆ ನಾನು ಯಾವುದೇ ಆರೋಪಗಳನ್ನೂ ಈವರೆಗೂ ಮಾಡಿಲ್ಲ. ಆದರೆ, ಜಗದೀಶ ಶೆಟ್ಟರ್‌ ಅವರ ಬಗ್ಗೆ ಕೀಳಾಗಿ ಮಾತನಾಡುವುದನ್ನು ಅವರು ಬಿಡಬೇಕು. ಘನತೆಯಿಂದ ರಾಜಕಾರಣ ಮಾಡಬೇಕು’ ಎಂದು ಪ್ರಕಟಣೆ ಮೂಲಕ ದೂರಿದ್ದಾರೆ.

‘ಟಿಕೆಟ್ ಕಿತ್ತುಕೊಂಡಿದ್ದಾರೆ ಎಂಬಂತಹ ಕ್ಷುಲ್ಲಕ ಹೇಳಿಕೆಗಳಿಗೆ ನಾನು ಪ್ರಜ್ಞಾವಂತ ಪ್ರಜೆಯಾಗಿ ಉತ್ತರಿಸಲಾರೆ. ಲಕ್ಷ್ಮಿ ಹೆಬ್ಬಾಳಕರ ಅವರು ಜಿಲ್ಲೆಯ ಹಿರಿಯ ರಾಜಕಾರಣಿಗಳನ್ನು ಬದಿಗೊತ್ತಿ ಎರಡನೇ ಸಲ ಶಾಸಕಿ ಆಗುತ್ತಲೇ ಸಚಿವೆಯೂ ಆಗಿದ್ದಾರೆ. ಜಿಲ್ಲೆಯಲ್ಲಿ ನಿಮಗಿಂತ ಹಿರಿಯರಾದ ಮಹಾಂತೇಶ ಕೌಜಲಗಿ, ಅಶೋಕ ಪಟ್ಟಣ ಅವರಿಂದ ಸಚಿವ ಸ್ಥಾನ ಕಿತ್ತುಕೊಂಡವರು ನೀವು. ಆದರೆ, ಈ ವಿಷಯವನ್ನು ಈವರೆಗೆ ನಾವು ಪ್ರಸ್ತಾಪ ಮಾಡಿರಲಿಲ್ಲ. ಜಿಲ್ಲೆಯ ಜನರಿಗೆ ಈ ವಿಷಯ ಚೆನ್ನಾಗಿದೆ ಗೊತ್ತಿದೆ. ಆದ್ದರಿಂದ ಇನ್ನು ಮುಂದೆ ಲಕ್ಷ್ಮಿ ಅವರು ವೈಯಕ್ತಿಕ ವಿಚಾರ ಬಿಟ್ಟು ಸಮಷ್ಟಿ ಪ್ರಜ್ಞೆಯಿಂದ ರಾಜಕೀಯ ಮಾಡುವುದನ್ನು ರೂಡಿ ಮಾಡಿಕೊಳ್ಳುವುದು ಒಳಿತು’ ಎಂದಿದ್ದಾರೆ.

‘ಈ ಬಾರಿ ಜಗದೀಶ ಶೆಟ್ಟರ್ ಅವರಿಗೆ ಟಿಕೆಟ್ ನೀಡುವುದಾಗಿ ವರಿಷ್ಠರು ಹೇಳಿದ ತಕ್ಷಣ ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತಳಾಗಿ ಸಂತೋಷದಿಂದ ಒಪ್ಪಿಕೊಂಡೆ. ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಜನರ ಮನಸಿನಲ್ಲಿ ಸಂಶಯ ಹುಟ್ಟಿಸುವ ಕ್ಷುಲ್ಲಕ ಹೇಳಿಕೆ ಕೊಡುವ ಬದಲು ಸಚಿವ ಸ್ಥಾನಕ್ಕೆ ಗೌರವ ತರುವ ಮಾತು ಆಡಬೇಕು’ ಎಂದೂ ಮಂಗಲಾ ಅಂಗಡಿ ದೂರಿದ್ದಾರೆ.

‘ಪಕ್ಷ ಮೊದಲು, ಕುಟುಂಬ ನಂತರ. ಪಕ್ಷದ ನಿರ್ಧಾರಕ್ಕೆ ನಾನು ಬದ್ಧ. ನಮ್ಮ ಕುಟುಂಬ ಯಾವತ್ತೂ ಬಿಜೆಪಿ ಸಿದ್ಧಾಂತ ನಂಬಿ ರಾಜಕೀಯ ಮಾಡಿದೆ. ಸುರೇಶ ಅಂಗಡಿ ಅವರು ಸಹ ಬದುಕಿನುದ್ದಕ್ಕೂ ಬಿಜೆಪಿ ತತ್ವದಂತೆ ಬದುಕಿದ ಧೀಮಂತ ರಾಜಕಾರಣಿ ಆಗಿದ್ದರು. ಅವರ ನಂತರ ಪಕ್ಷ ನನಗೆ ಅವಕಾಶ ಕೊಟ್ಟಿತ್ತು. ಅದನ್ನು ಸಮರ್ಥವಾಗಿ ನಿಭಾಯಿಸಿದ ತೃಪ್ತಿ ಇದೆ’ ಎಂದಿದ್ದಾರೆ.

‘ಅಷ್ಟಕ್ಕೂ ಕಾಂಗ್ರೆಸ್ ಪಕ್ಷದ ಸಂಸ್ಕೃತಿಯಂತೆ ಕೇವಲ ಕ್ಷುಲ್ಲಕ ವಿಷಯದ ರಾಜಕಾರಣ ಮಾಡುತ್ತಿರುವ ಲಕ್ಷ್ಮಿ ಹೆಬ್ಬಾಳಕರ. ಇನ್ನು ಮುಂದಾದರೂ ರಾಷ್ಟ್ರದ ಅಭಿವೃದ್ಧಿ, ರಾಷ್ಟ್ರೀಯತೆ, ಕರ್ನಾಟಕದ ಅಭಿವೃದ್ಧಿ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಜನರ ಬೇಕು– ಬೇಡಿಕೆಗಳ ಬಗ್ಗೆ ಹೆಚ್ಚು ಬೆಳಕು ಚೆಲ್ಲಿದರೆ ಜನರ ಬದುಕು ಹಸನುಗೊಳಿಸುವ ಕೆಲಸ ಆದೀತು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT