ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಚುನಾವಣಾಧಿಕಾರಿ ಸ್ಥಾನ ತೊರೆಯಲಿ: ಸುಮಲತಾ

ಮುಖ್ಯಮಂತ್ರಿ ಪುತ್ರನ ಗೆಲುವಿಗೆ ಕೆಲಸ ಮಾಡಿರುತ್ತಿರುವ ಡಿ.ಸಿ, ನ್ಯಾಯಸಮ್ಮತ ಪ್ರಕ್ರಿಯೆಗೆ ಅವಕಾಶ ಕೊಡಿ
Last Updated 31 ಮಾರ್ಚ್ 2019, 8:08 IST
ಅಕ್ಷರ ಗಾತ್ರ

ಮಂಡ್ಯ: ‘ಚುನಾವಣಾ ನೀತಿ–ನಿಯಮಗಳನ್ನು ಗಾಳಿಗೆ ತೂರಿ ಮುಖ್ಯಮಂತ್ರಿ ಪುತ್ರ ನಿಖಿಲ್‌ ಕುಮಾರಸ್ವಾಮಿ ಗೆಲುವಿಗಾಗಿ ಕೆಲಸ ಮಾಡುತ್ತಿರುವ ಜಿಲ್ಲಾ ಚುನಾವಣಾಧಿಕಾರಿ ಎನ್‌.ಮಂಜುಶ್ರೀ ತಮ್ಮ ಸ್ಥಾನ ತೊರೆದು ನ್ಯಾಯಸಮ್ಮತ ಚುನಾವಣಾ ಪ್ರಕ್ರಿಯೆಗೆ ಅವಕಾಶ ನೀಡಬೇಕು’ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಭಾನುವಾರ ಒತ್ತಾಯಿಸಿದರು.

‘ನಾನು ನಾಮಪತ್ರ ಸಲ್ಲಿಸಿದ ದಿನದಿಂದಲೂ ಜಿಲ್ಲಾ ಚುನಾವಣಾಧಿಕಾರಿ ಅನುಮಾನಾಸ್ಪದವಾಗಿ ನಡೆದುಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಒತ್ತಡಕ್ಕೆ ಮಣಿದು ಪವಿತ್ರ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ನಿಖಿಲ್‌ ನಾಮಪತ್ರ ಕ್ರಮಬದ್ಧವಾಗಿ ಇಲ್ಲದಿದ್ದರೂ ನಮ್ಮ ಏಜೆಂಟರ ಆಕ್ಷೇಪಣೆಗಳಿಗೆ ಮನ್ನಣೆ ನೀಡದೆ ಅಂಗೀಕರಿಸಿದ್ದಾರೆ. ಆಡಳಿತ ಪಕ್ಷದ ಒತ್ತಡವನ್ನು ಕಾನೂನಾತ್ಮಕವಾಗಿ ನಿರ್ವಹಣೆ ಮಾಡಲು ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಮುಂದಿನ ಪಕ್ರಿಯೆ ಪಾರದರ್ಶಕವಾಗಿ ನಡೆಯಬೇಕಾದರೆ ಅವರು ಸ್ಥಾನ ತ್ಯಜಿಸಬೇಕು’ ಎಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಎನ್‌.ಮಂಜುಶ್ರೀ ಅವರೇ ಚುನಾವಣಾಧಿಕಾರಿಯಾಗಿ ಮುಂದುವರಿದರೆ ಕ್ಷೇತ್ರದ 2,046 ಮತಗಟ್ಟೆಗಳಲ್ಲಿ ಮುಕ್ತ ಮತದಾನ ನಡೆಯುವ ಬಗ್ಗೆ ಅನುಮಾನಗಳಿವೆ. ನಮಗೆ ಎಲ್ಲಾ ಹಂತದಲ್ಲೂ ಅನ್ಯಾಯ ಮಾಡಿದ್ದಾರೆ. ನನ್ನ ಹೆಸರಿನ ಮೇಲೊಂದು ಸುಮಲತಾ, ಕೆಳಗೆ ಎರಡು ಸುಮಲತಾ ಹೆಸರಿನ ಅಭ್ಯರ್ಥಿಗಳನ್ನು ಹಾಕಿ ಜನರಲ್ಲಿ ಗೊಂದಲ ಸೃಷ್ಟಿಸಿದ್ದಾರೆ. ಮಂಡ್ಯ ಜನರು ಬುದ್ಧಿವಂತರು, ಮತಯಂತ್ರದಲ್ಲಿ ಭಾವಚಿತ್ರ ಇರುವ ಕಾರಣ ನನ್ನನ್ನು ಗುರುತಿಸುತ್ತಾರೆ ಎಂಬ ನಂಬಿಕೆ ಇದೆ. ಹೆಚ್ಚೆಂದರೆ 200–300 ಮತಗಳು ವ್ಯತ್ಯಾಸವಾಗಬಹುದಷ್ಟೇ. ಸ್ಪರ್ಧೆಯ ಬಗ್ಗೆ ನನಗೆ ಭಯವಿಲ್ಲ, ಆದರೆ ಅಧಿಕಾರಿಗಳ ನಡೆಯ ಬಗ್ಗೆ ಅನುಮಾನವಿದೆ’ ಎಂದರು.

20 ನಿಮಿಷದಲ್ಲಿ ಪರಿಷ್ಕೃತ ಅಫಿಡವಿಟ್‌?: ‘ನಾಮಪತ್ರ ಪರಿಶೀಲನೆಯ ದಿನ ನಿಖಿಲ್‌ ನಾಮಪತ್ರದ ಜೊತೆ ಹಳೇ ಮಾದರಿಯ ಪ್ರಮಾಣಪತ್ರ ಸಲ್ಲಿಸಲಾಗಿತ್ತು. ಆಕ್ಷೇಪಣೆ ಸಲ್ಲಿಸಿದ ನಂತರ ಕೇವಲ 20 ನಿಮಿಷದಲ್ಲಿ ಪರಿಷ್ಕೃತ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಆದರೆ ಅಂದು ಅಭ್ಯರ್ಥಿ ನಿಖಿಲ್‌ ಮಂಡ್ಯದಲ್ಲಿ ಇರಲಿಲ್ಲ, ಪ್ರಮಾಣಪತ್ರಕ್ಕೆ ಅವರ ಸಹಿ ಮಾಡಿದ್ದು ಯಾರು ಎಂಬ ಪ್ರಶ್ನೆ ಇದೆ. ಜೊತೆಗೆ ಪರಿಷ್ಕೃತ ಪ್ರಮಾಣಪತ್ರದಲ್ಲಿ ಹಳೆಯ ಪ್ರಮಾಣಪತ್ರದಲ್ಲಿದ್ದ ಹಳೆಯ ದಿನಾಂಕ (ಮಾರ್ಚ್‌ 21)ವನ್ನೇ ಉಳಿಸಲಾಗಿದೆ. ಪರಿಷ್ಕೃತ ಪ್ರಮಾಣಪತ್ರವನ್ನೂ ಮೊದಲೇ ಮಾಡಿಸಿ ಇಟ್ಟುಕೊಂಡಿದ್ದರೇ ಎಂಬ ಪ್ರಶ್ನೆಗೆ ಜಿಲ್ಲಾ ಚುನಾವಣಾಧಿಕಾರಿ ಉತ್ತರ ನೀಡಬೇಕು’ ಎಂದರು.

ಮದುವೆಗೆ ಚುನಾವಣಾ ಚಿತ್ರೀಕರಣ ಘಟಕ: ಸುಮಲತಾ ಚುನಾವಣಾ ಏಜೆಂಟ್‌ ಮದನ್‌ ಕುಮಾರ್‌ ಮಾತನಾಡಿ ‘ನಾಮಪತ್ರ ಪರಿಶೀಲನೆಯ ದಿನ ನಾನು ಆಕ್ಷೇಪಣೆ ಸಲ್ಲಿಸಿದ ವಿಡಿಯೊ ದೃಶ್ಯಾವಳಿ ಕೊಡಿ ಎಂದು ಮನವಿ ಮಾಡಿದ್ದೆ. ಅದಕ್ಕೆ, ಚಿತ್ರೀಕರಣ ತಂಡ ಮದುವೆ ವಿಡಿಯೋಗ್ರಫಿಗೆ ತೆರಳಿದೆ ಎಂದು ಉತ್ತರಿಸಿದರು. ಮೂರು ದಿನಗಳ ನಂತರ ದೃಶ್ಯಾವಳಿ ಕೊಟ್ಟರು. ಆದರೆ ನಾನು ಆಕ್ಷೇಪಣೆ ಸಲ್ಲಿಸುವ ಒಂದೂವರೆ ನಿಮಿಷದ ಪ್ರಕ್ರಿಯೆ ವಿಡಿಯೊದಲ್ಲಿ ಇರಲಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಮಂಜುಶ್ರೀ ಅವರು, ದೃಶ್ಯಾವಳಿಯನ್ನು ತಿರುಚಲಾಗಿದೆ, ವಿಡಿಯೋಗ್ರಾಫರ್‌ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲು ಮಾಡಲಾಗಿದೆ ಎಂದರು. ಚುನಾವಣಾ ಕೆಲಸ ಮಾಡುವ ತಂಡವನ್ನು ಮದುವೆ ಚಿತ್ರೀಕರಣಕ್ಕೆ ಕಳಿಸಿದ್ದು ಏಕೆ, ವಿಡಿಯೊ ತಿರುಚಿದ್ದು ಯಾರು ಎಂಬುದನ್ನು ಉತ್ತರಿಸಬೇಕು’ ಎಂದು ಒತ್ತಾಯಿಸಿದರು.

ಮತ್ತೆ ಕೇಬಲ್‌ ಕಟ್‌?
‘ನಾನು ನಾಮಪತ್ರ ಸಲ್ಲಿಸುವ ದಿನ ಜಿಲ್ಲೆಯ ವಿವಿಧೆಡೆ ಕೇಬಲ್‌ ಸ್ಥಗಿತಗೊಳಿಸಲಾಗಿತ್ತು. ಅದೇ ರೀತಿ ಇಂದಿನ ಪತ್ರಿಕಾಗೋಷ್ಠಿಯ ಸಮಯದಲ್ಲೂ ಮತ್ತೆ ಕೇಬಲ್‌ ಸ್ಥಗಿತಗೊಳಿಸಿರುವ ಮಾಹಿತಿ ಇದೆ. ಇಂತಹ ರಾಜಕಾರಣ ಮಾಡಬೇಕಾ. ಹಿಂಬಾಗಿಲಿನಿಂದ ಬಂದು ಗೆಲ್ಲಬೇಕಾ. ಹಿಂಬದಿಯಿಂದ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಬೇಕಾ’ ಎಂದು ಸುಮಲತಾ ಪ್ರಶ್ನಿಸಿದರು.

ಕೇಂದ್ರ ಚುನಾವಣಾ ಆಯೋಗಕ್ಕೂ ದೂರು
‘ಚುನಾವಣಾಧಿಕಾರಿ ವಿರುದ್ಧ ಕಾನೂನು ಸಮರ ನಡೆಸಿದರೆ ನಮಗೆ ನ್ಯಾಯ ಸಿಗುವುದು ತಡವಾಗುತ್ತದೆ. ನಾವು ವರ್ಗಾವಣೆಗೂ ಒತ್ತಾಯ ಮಾಡುವುದಿಲ್ಲ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಅವರೇ ಸ್ಥಾನ ತೊರೆಯಬೇಕು. ನಮಗೆ ಕ್ಷೇತ್ರದಲ್ಲಿ ಆಗುತ್ತಿರುವ ಅನ್ಯಾಯಗಳ ಬಗ್ಗೆ ರಾಜ್ಯ ಚುನಾವಣಾಧಿಕಾರಿ ಗಮನಕ್ಕೆ ತಂದಿದ್ದೇವೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೂಡ ಮುಖ್ಯಮಂತ್ರಿ ಸಮಾವೇಶದಲ್ಲಿ ಕರೆಂಟ್‌ ಸ್ಥಗಿತಗೊಳಿಸದಂತೆ ಸೆಸ್ಕ್‌ಗೆ ಪತ್ರ ಬರೆದ ವಿಷಯವನ್ನು ಗಮನಕ್ಕೆ ತಂದಿದ್ದೇವೆ. ಅವರೂ ಬಹಳ ಆಶ್ಚರ್ಯ ವ್ಯಕ್ತಪಡಿಸಿ ಕ್ರಮದ ಭರವಸೆ ನೀಡಿದ್ದಾರೆ. ಸೂಕ್ಷ್ಮ ಕ್ಷೇತ್ರ ಘೋಷಣೆಗೆ ಮನವಿ ಮಾಡಿದ್ದೇವೆ. ಜೊತೆಗೆ ಕ್ಷೇತ್ರದಲ್ಲಿ ನಡೆಯುತ್ತಿರುವ ಅನ್ಯಾಯದ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸಿದಿದ್ದೇವೆ’ ಎಂದು ಸುಮಲತಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT