ಅರುಣ್ ಗೋವಿಲ್ (ಬಿಜೆಪಿ)
ಅಯೋಧ್ಯೆಯಲ್ಲಿ ರಾಮ ಮಂದಿರ ಸಾಕಾರಗೊಂಡಿರುವ ಕಾರಣ ಈ ಬಾರಿ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸದಲ್ಲಿರುವ ಬಿಜೆಪಿ ವರಿಷ್ಠರು ಉತ್ತರ ಪ್ರದೇಶದ ಮೀರಠ್ ಕ್ಷೇತ್ರದಿಂದ ಕಿರುತೆರೆ ನಟ ಅರುಣ್ ಗೋವಿಲ್ ಅವರನ್ನು ಕಣಕ್ಕಿಳಿಸಿದ್ದಾರೆ. ಅರುಣ್ ಅವರು 1987ರಲ್ಲಿ ದೂರದರ್ಶನದಲ್ಲಿ ಪ್ರಸಾರಗೊಂಡಿದ್ದ ರಮಾನಂದ ಸಾಗರ್ ಅವರ ‘ರಾಮಾಯಣ’ ಧಾರಾವಾಹಿಯಲ್ಲಿ ರಾಮನ ಪಾತ್ರದಲ್ಲಿ ನಟಿಸುವ ಮೂಲಕ ಮನೆ ಮಾತಾಗಿದ್ದರು. ಇದೇ ಪ್ರಸಿದ್ಧಿಯೂ ಅವರಿಗೆ ಗೆಲುವು ತಂದುಕೊಡಬಹುದು ಎಂಬುದು ಬಿಜೆಪಿಯ ಲೆಕ್ಕಾಚಾರ. ಅವರು ಮೀರಠ್ನವರೇ ಆಗಿರುವುದರಿಂದ ಸ್ಥಳೀಯವಾಗಿಯೂ ಹೆಚ್ಚು ಜನಜನಿತರು. ಇದು ಅವರಲ್ಲೂ ಗೆಲುವಿನ ವಿಶ್ವಾಸ ಹೆಚ್ಚಿಸಿದೆ. ಅರುಣ್, 2021ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. 1980ರಲ್ಲಿ ಅವರು ಕಾಂಗ್ರೆಸ್ ಪರವಾಗಿ ಚುನಾವಣಾ ಪ್ರಚಾರ ನಡೆಸಿದ್ದರು. ಬಳಿಕ ರಾಜಕೀಯದಿಂದ ದೂರವಿದ್ದರು.
**
ಸುನಿತಾ ವರ್ಮಾ (ಸಮಾಜವಾದಿ ಪಕ್ಷ)
ಅರುಣ್ ಗೋವಿಲ್ ಅವರಿಗೆ ಪೈಪೋಟಿ ನೀಡಲು ಸಮಾಜವಾದಿ ಪಕ್ಷವು (ಎಸ್ಪಿ) ಸುನಿತಾ ವರ್ಮಾ ಅವರನ್ನು ಅಖಾಡಕ್ಕಿಳಿಸಿದೆ. ಸುನಿತಾ ಅವರು ಮಾಜಿ ಮೇಯರ್ ಆಗಿದ್ದು, ಸ್ಥಳೀಯಾಗಿ ಪ್ರಭಾವಿ ನಾಯಕಿಯಾಗಿದ್ದಾರೆ. 2007ರಲ್ಲಿ ಹಸ್ತಿನಾಪುರ ವಿಧಾನಸಭಾ ಕ್ಷೇತ್ರದಿಂದ ಬಿಎಸ್ಪಿಯಲ್ಲಿ ಸ್ಪರ್ಧಿಸಿ ಗೆದ್ದಿದ್ದ ಯೋಗೇಶ್ ವರ್ಮಾ ಅವರ ಪತ್ನಿಯಾಗಿದ್ದಾರೆ. ಸಮಾಜವಾದಿ ಪಕ್ಷವು ಆರಂಭದಲ್ಲಿ ಭಾನುಪ್ರತಾಪ್ ಸಿಂಗ್ ಅವರ ಹೆಸರನ್ನು ಈ ಕ್ಷೇತ್ರಕ್ಕೆ ಘೋಷಿಸಿತ್ತು. ಬಿಜೆಪಿಯು ಅರುಣ್ ಗೋವಿಲ್ ಅವರನ್ನು ಅಭ್ಯರ್ಥಿಯಾಗಿಸಿದ ಬಳಿಕ ಭಾನುಪ್ರತಾಪ್ ಬದಲಿಗೆ ಅತುಲ್ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿತ್ತು. ಬಳಿಕ ಸುನಿತಾ ಅವರನ್ನು ಅಖಾಡಕ್ಕಿಳಿಸಲಾಗಿದೆ. 2019ರ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿಯ ರಾಜೇಂದ್ರ ಅಗರ್ವಾಲ್ ಅವರು ಗೆದ್ದಿದ್ದರು. ‘ಇಂಡಿಯಾ’ ಒಕ್ಕೂಟದ ಜೊತೆಗಿರುವುದರಿಂದ ಎಸ್ಪಿ ಅಭ್ಯರ್ಥಿಯ ಗೆಲುವಿನ ನಿರೀಕ್ಷೆ ಹೆಚ್ಚಿದೆ.