ಈ ಚಿತ್ರಕ್ಕೆ ಅಶು ಬೆದ್ರ ಅವರು ಬಂಡವಾಳ ಹೂಡಿಕೆ ಮಾಡಲಿದ್ದು, ಶೂನ್ಯ ಅವರು ನಿರ್ದೇಶನದ ಹೊಣೆ ಹೊರಲಿದ್ದಾರೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಶ್ರೀಧರ್ ಅವರು ಬರೆಯಲಿದ್ದಾರೆ. ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಶ್ರೀಧರ್, ‘ಈ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಪಡೆಯುವಂತೆ ಮಾಡಬೇಕು ಎಂದು ತೀರ್ಮಾನಿಸಿದ್ದೇನೆ. ಹಾಗೆಯೇ, ಪ್ರತಿ ವರ್ಷವೂ ಒಂದೊಂದು ಸಿನಿಮಾ ಮಾಡುತ್ತ, ಸಿನಿಮಾ ರಂಗದಲ್ಲಿ ಇನ್ನು ಹತ್ತು ವರ್ಷ ಸಕ್ರಿಯವಾಗಿರುವ ತೀರ್ಮಾನ ಕೂಡ ಮಾಡಿದ್ದೇನೆ’ ಎಂದು ತಿಳಿಸಿದರು.