ಬರಗೂರು ರಾಮಚಂದ್ರಪ್ಪ ನಿರ್ದೇಶನದ‘ಅಮೃತಮತಿ’ ಚಿತ್ರವು ಅಮೆರಿಕದ ಅಟ್ಲಾಂಟದಲ್ಲಿ ನಡೆಯುವ ಸ್ಪರ್ಧಾತ್ಮಕ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲು ಆಯ್ಕೆಯಾಗಿದೆ.
ಜುಲೈ 29ರಿಂದ ಆಗಸ್ಟ್ 12ರವರೆಗೆ ಆನ್ಲೈನ್ ಮೂಲಕ ಈ ಚಿತ್ರೋತ್ಸವ ನಡೆಯಲಿದೆ. ಎಲ್ಲ ವಿಭಾಗಗಳ ಪ್ರಶಸ್ತಿ ಸ್ಪರ್ಧೆಗೆ ಚಿತ್ರವು ಆಯ್ಕೆಯಾಗಿದೆ ಎಂದು ನಿರ್ದೇಶಕ ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.
ಆಸ್ಟ್ರಿಯಾ ದೇಶದ ಅಂತರರಾಷ್ಟ್ರೀಯಚಲನಚಿತ್ರೋತ್ಸವಕ್ಕೂ ಈ ಚಿತ್ರ ಆಯ್ಕೆಯಾಗಿದ್ದು, ಜುಲೈ 22ರಿಂದ ಆಗಸ್ಟ್ 5ರವರೆಗೆಆನ್ಲೈನ್ ಸ್ಕ್ರೀನಿಂಗ್ ಮೂಲಕ ನಡೆಯಲಿರುವಈ ಚಿತ್ರೋತ್ಸವದಲ್ಲಿ ಪ್ರದರ್ಶನವನ್ನು ಕಾಣಲಿದೆ.
13ನೇ ಶತಮಾನದ ಕನ್ನಡ ಕವಿ ಜನ್ನನಿಂದ ರಚಿತವಾದ ‘ಯಶೋಧರ ಚರಿತೆ’ ಕಾವ್ಯವನ್ನು ಈ ಚಿತ್ರ ಆಧರಿಸಿದೆ. ಈ ಕಾವ್ಯದಲ್ಲಿ ಬರುವಅಮೃತಮತಿಪ್ರಸಂಗವನ್ನು ಮರುಸೃಷ್ಟಿಸಿ ಮತ್ತು ಮರು ವ್ಯಾಖ್ಯಾನಕ್ಕೆ ಒಳಪಡಿಸಿದ್ದಾರೆ ಬರಗೂರು. ಚಿತ್ರಕಥೆ, ಸಂಭಾಷಣೆ ಹೊಸೆಯುವ ಜತೆಗೆ ಎರಡು ಗೀತೆಗಳನ್ನು ರಚಿಸಿದ್ದಾರೆ.
ಈ ಚಿತ್ರ ನೋಯ್ಡಾದ ನಾಲ್ಕನೇ ಭಾರತೀಯ ವಿಶ್ವ ಚಲನಚಿತ್ರೋತ್ಸವದ ಸ್ಪರ್ಧಾ ವಿಭಾಗದ ಪ್ರದರ್ಶನಕ್ಕೆ ಆಯ್ಕೆಯಾಗಿತ್ತು.
ಅಮೃತಮತಿಪಾತ್ರದಲ್ಲಿ ಬಹುಭಾಷಾ ನಟಿ ಹರಿಪ್ರಿಯ ಮತ್ತು ಯಶೋಧರನ ಪಾತ್ರದಲ್ಲಿ ನಟ ಕಿಶೋರ್ ಹಾಗೂ ಅಷ್ಟಾವಂಕನಾಗಿ ತಿಲಕ್ ನಟಿಸಿದ್ದಾರೆ. ಹಿರಿಯ ನಟ ಸುಂದರ್ ರಾಜ್, ಪ್ರಮೀಳಾ ಜೋಷಾಯ್, ಸುಪ್ರಿಯಾ ರಾವ್, ವತ್ಸಲಾ ಮೋಹನ್, ಅಂಬರೀಶ್ ಸಾರಂಗಿ, ಭೂಮಿಕಾ ಲಕ್ಷ್ಮಿನಾರಾಯಣ ತಾರಾಗಣವಿದೆ.
ಇಂಚರ ಪುಟ್ಟಣ್ಣ ಪ್ರೊಡಕ್ಷನ್ ಸಂಸ್ಥೆಯಡಿವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಛಾಯಾಗ್ರಹಣ ನಾಗರಾಜು ಆದವಾನಿ, ಸಂಗೀತ ನಿರ್ದೇಶನ ಶಮಿತಾ ಮಲ್ನಾಡ್, ಸಂಕಲನ ಸುರೇಶ್ ಅರಸು ಅವರದ್ದು.