BBK9: ಬಿಗ್ಬಾಸ್ ಮನೆಯಿಂದ ಹೊರಬಿದ್ದ ಅಮೂಲ್ಯ ಗೌಡ, ಅರುಣ್ ಸಾಗರ್

ಬೆಂಗಳೂರು: ಬಿಗ್ ಬಾಸ್ ಕನ್ನಡ 9ನೇ ಆವೃತ್ತಿಯ 13ನೇ ವಾರ ಇಬ್ಬರು ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದು, ಮನೆಯಲ್ಲಿ ಕೊನೆಯ ವಾರ 6 ಮಂದಿ ಉಳಿದಿದ್ದಾರೆ.
ಹೌದು, ಈ ವಾರ ಅಮೂಲ್ಯ ಗೌಡ ಮತ್ತು ಅರುಣ್ ಸಾಗರ್ ಮನೆಯಿಂದ ಹೊರಬಿದ್ದಿದ್ದು, ರೂಪೇಶ್ ರಾಜಣ್ಣ, ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ದೀಪಿಕಾ ದಾಸ್, ದಿವ್ಯಾ ಉರುಡುಗ, ಆರ್ಯವರ್ಧನ್ ಅಂತಿಮ ವಾರಕ್ಕೆ ಕಾಲಿಟ್ಟಿದ್ದಾರೆ.
ಶಾಕಿಂಗ್ ಎಲಿಮಿನೇಶನ್
ಅಮೂಲ್ಯ ಗೌಡ ಮತ್ತು ಅರುಣ್ ಸಾಗರ್ ಮನೆಯ ಪ್ರಬಲ ಸ್ಪರ್ಧಿಗಳೆಂದೇ ಗುರುತಿಸಿಕೊಂಡಿದ್ದರು. ಅಮೂಲ್ಯ ಅವರು ನೇರಾನೇರ ಮಾತಿನ ಮೂಲಕ ಗಮನ ಸೆಳೆದಿದ್ದರು. 11ನೇ ವಾರ ಟಾಸ್ಕ್ಗಳಲ್ಲಿ ಅಷ್ಟಾಗಿ ಗಮನ ಸೆಳೆದಿರಲಿಲ್ಲ. ಆದರೆ, 12ನೇ ವಾರದ ಟಾಸ್ಕ್ಗಳಲ್ಲಿ ಮತ್ತೆ ಹಳಿಗೆ ಮರಳಿದ್ದರು. 13ನೇ ವಾರ ಮನೆಯ ಎಲ್ಲ ಸದಸ್ಯರ ಜೊತೆ ಯಾವುದೇ ಮನಸ್ತಾಪವಿಲ್ಲದೆ ಉತ್ತಮವಾಗಿ ಸಾಗುತ್ತಿದ್ದರು. ಅಷ್ಟರಲ್ಲಿ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ.
ಅಮೂಲ್ಯ ಜೊತೆ ಉತ್ತಮ ಸ್ನೇಹ ಇಟ್ಟುಕೊಂಡಿದ್ದ ರಾಕೇಶ್ ಅಡಿಗ ಈ ವೇಳೆ ಕಣ್ಣೀರು ಹಾಕಿದರು.
ಇನ್ನೂ ಅರುಣ್ ಸಾಗರ್ ತಮ್ಮ ಕಾಮಿಡಿಗಳ ಮೂಲಕ ಗಮನ ಸೆಳೆದಿದ್ದರು. ವಿಶಿಷ್ಟ ವೇಷಗಳನ್ನು ತೊಟ್ಟು ಸ್ಪರ್ಧಿಗಳಲ್ಲಿ ವಿಭಿನ್ನವಾಗಿ ಕಾಣಿಸುತ್ತಿದ್ದರು. ಕೈಗೆ ಗಾಯ ಮಾಡಿಕೊಂಡರೂ ಟಾಸ್ಕ್ಗಳಲ್ಲಿ ಸ್ಪರ್ಧೆ ಮಾಡುತ್ತಿದ್ದರು. ಇತ್ತೀಚೆಗೆ ಚಿತ್ರದ ಶೂಟಿಂಗ್ ವೇಳೆ ಮಗಳಿಗೆ ಗಾಯ ಆಗಿದ್ದರಿಂದ ಕೊಂಚ ಕುಸಿದಿದ್ದರು. ಈ ಮಧ್ಯೆಯೇ ಅವರ ಎಲಿಮಿನೇಟ್ ಆಗಿದೆ.
ಈ ಮೂಲಕ 9 ನವೀನರು ಮತ್ತು 9 ಪ್ರವೀಣರ ಜೊತೆ ಆರಂಭವಾದ ಬಿಗ್ ಬಾಸ್ 9ನೇ ಆವೃತ್ತಿಯಲ್ಲಿ ಕೊನೆಯ ವಾರ ನವೀನರ ಸಾಲಿನಲ್ಲಿ ರೂಪೇಶ್ ರಾಜಣ್ಣ ಮಾತ್ರ ಉಳಿದಿದ್ದಾರೆ. ಉಳಿದ ಐದು ಮಂದಿ ಪ್ರವೀಣರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.