ನವದೆಹಲಿ: ‘ತೆಲುಗು ನಟ ಜೂನಿಯರ್ ಎನ್ಟಿಆರ್ ಅವರೊಂದಿಗೆ ನಟಿಸಲು ಇಷ್ಟಪಡುತ್ತೇನೆ’ ಎಂದು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೇಳಿದ್ದಾರೆ.
ಶಕುನ್ ಬಾತ್ರಾ ನಿರ್ದೇಶನದ ‘ಗೆಹರಾಯಿಯಾ’ (ಗೆಹೆರಾಯಿಯಾಂ) ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ನಟಿ ದೀಪಿಕಾ, ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ದಕ್ಷಿಣ ಭಾರತದ ಯಾವ ನಟರೊಂದಿಗೆ ಅಭಿನಯಿಸಲು ನೀವು ಇಷ್ಟಪಡುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾನು ಜೂ. ಎನ್ಟಿಆರ್ ಹಾಗೂ ಅಲ್ಲು ಅರ್ಜುನ್ ಅವರೊಂದಿಗೆ ನಟಿಸಲು ಬಯಸುತ್ತೇನೆ’ ಎಂದಿದ್ದಾರೆ.
ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಸಿನಿಮಾ ಮಾರ್ಚ್ 25ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಜ್ಯೂನಿಯರ್ ಎನ್ಟಿಆರ್, ರಾಮ್ ಚರಣ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಸಿನಿಮಾದ ‘ನಾಟು ನಾಟು’ ಹಾಡಿಗೆ ಎನ್ಟಿಆರ್–ರಾಮ್ ಚರಣ್ ಒಟ್ಟಿಗೆ ಹೆಜ್ಜೆ ಹಾಕಿದ್ದು, ಪ್ರೇಕ್ಷಕರು ಫಿದಾ ಆಗಿದ್ದಾರೆ. ಸಿನಿಮಾ ಬಿಡುಗಡೆಗೆ ಕಾತರದಿಂದ ಕಾಯುತ್ತಿದ್ದಾರೆ.
ಇತ್ತ ಅಲ್ಲು ಅರ್ಜುನ್ –ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ’ ಸಿನಿಮಾ ಸೂಪರ್ ಹಿಟ್ ಆಗಿದೆ.
‘ಗೆಹ್ರೈಯಾನ್’ (ಗೆಹೆರಾಯಿಯಾಂ) ಸಿನಿಮಾ ಫೆ.11ರಂದು (ಶುಕ್ರವಾರ) ವಿಶ್ವದಾದ್ಯಂತ ತೆರೆಕಂಡಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ದೀಪಿಕಾ ಪಡುಕೋಣೆ, ಸಿದ್ಧಾಂತ್ ಚತುರ್ವೇದಿ, ಅನನ್ಯಾ ಪಾಂಡೆ, ಧೈರ್ಯ ಕಾರ್ವಾ, ನಾಸಿರುದ್ದೀನ್ ಷಾ, ರಜತ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.