ಕೊರೊನಾ ಮಹಾಮಾರಿ ಇಡೀ ಮನುಕುಲಕ್ಕೇ ಕಂಟಕಪ್ರಾಯವಾಗಿದೆ. ಸೋಂಕು ನಿಯಂತ್ರಣಕ್ಕೆ ಬಂದಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ಇದರ ವಿರುದ್ಧ ಹೋರಾಟಕ್ಕಿಳಿದಿವೆ. ಸರ್ಕಾರಗಳೊಟ್ಟಿಗೆ ವೈದ್ಯಕೀಯ ಸಿಬ್ಬಂದಿ, ಪೊಲೀಸರು, ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ ಸ್ವಯಂಸೇವಾ ಸಂಸ್ಥೆಗಳು ಕೈಜೋಡಿಸಿವೆ.
ಈ ಎಲ್ಲರ ಸೇವೆ ಅನುಪಮವಾದುದು. ಅವರಿಗೆ ನಟ, ನಟಿಯರು ಮತ್ತು ನಾಗರಿಕರು ಬೆಂಬಲ, ಸಹಕಾರ ನೀಡುತ್ತಿದ್ದಾರೆ. ಗಾಯಕರು ಹಾಡಿನ ಮೂಲಕ ಅವರ ಸೇವೆಯನ್ನು ಸ್ಮರಿಸುತ್ತಿದ್ದಾರೆ.
ಗಾಯಕರಾದ ಚೈತ್ರಾ ಎಚ್.ಜಿ., ರಘು ದೀಕ್ಷಿತ್, ವಾರಿಜಾ ಶ್ರೀ, ಸಂಜಿತ್ ಹೆಗ್ಡೆ, ಸುನಿಲ್ ರಾವ್ ಮತ್ತು ಸುಪ್ರಿಯಾ ರಾಮ್ ಅವರ ತಂಡ ‘ಕಣ್ಣಿಗೆ ಕಾಣುವ ದೇವರು ನಿಮಗೊಂದು ಸಲಾಂ’ ಎಂಬ ಹಾಡಿನ ಮೂಲಕ ಕೋವಿಡ್ ನಿಯಂತ್ರಣಕ್ಕೆ ಹೋರಾಡುತ್ತಿರುವವರಿಗೆ ಗೌರವ ಸಲ್ಲಿಸಲು ಮುಂದಾಗಿದೆ.
ಈ ಹಾಡಿಗೆ ಧೀರೇಂದ್ರ ದಾಸ್ ಸಂಗೀತ ಸಂಯೋಜಿಸಿದ್ದಾರೆ. ಮಾಯ ಚಂದ್ರ ಅವರ ನಿರ್ದೇಶನದಡಿ ಈ ಸಾಂಗ್ ಮೂಡಿಬಂದಿದೆ. ಇದನ್ನು ಬರೆದಿರುವುದು ಸುಜಿತ್. ಅಂದಹಾಗೆ ಈ ಹಾಡು ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗಲಿದೆ.
ಹಾಡು
ನಾಡೇ ನಿಂತುಹೋದ್ರೂ ನಿಮ್ಮ ಹೋರಾಟ ನಿಲ್ಲಲ್ಲ ದೇಶ ಕಾಯೋ ವೀರರು ನಿಮಗೊಂದು ಸಲಾಂ
ಪ್ರಾಣವ ತುಂಬುತಾ, ರಕ್ಷಣೆ ನೀಡುತಾ ಸ್ವಚ್ಛವ ಮಾಡುತಾ ಜೀವವ ಒತ್ತೆ ಇಟ್ಟರು...
ನಿಮಗೊಂದು ಸಲಾಂ ನಿಮಗೊಂದು ಸಲಾಂ...
ಏನೇ ಎದುರಿಗೆ ಬಂದ್ರೂ ನಿಮ್ಮ ಕರ್ತವ್ಯ ನಿಲ್ಲಲ್ಲ ಕಣ್ಣಿಗೆ ಕಾಣುವ ದೇವರು ನಿಮಗೊಂದು ಸಲಾಂ