ಬಹುತೇಕ ಹೊಸಬರೇ ಕೂಡಿರುವ ‘ಛಾಯ’ ಸಿನಿಮಾದ ಹಾಡು ಇತ್ತೀಚೆಗೆ ಬಿಡುಗಡೆಗೊಂಡಿದೆ. ಹಾರರ್ ಕಥೆಯನ್ನು ಹೊಂದಿರುವ ಈ ಚಿತ್ರಕ್ಕೆ ನೃತ್ಯ ನಿರ್ದೇಶಕ ಜಗ್ಗು ಆ್ಯಕ್ಷನ್ ಕಟ್ ಹೇಳಿದ್ದಾರೆ. ನ್ಯೂ ಗ್ಲೋಬಲ್ ಕ್ರಿಯೇಶನ್ಸ್ ಮೂಲಕ ಶ್ರೀಮತಿ ನಂದ ಎಂ.ಆರ್. ಬಂಡವಾಳ ಹೂಡಿದ್ದಾರೆ.
‘ನಾಲ್ಕು ಜನ ಯುವಕರು ಒಂದು ಮನೆಗೆ ಅತಿಥಿಗಳಾಗಿ ಹೋದಾಗ ಅಲ್ಲಿ ಅನೇಕ ಚಿತ್ರವಿಚಿತ್ರ ಘಟನೆಗಳು ನಡೆಯುತ್ತವೆ. ಆ ಎಲ್ಲಾ ಅನಾಹುತಗಳಿಗೆ ಕಾರಣವೇನು ಎನ್ನುವುದೇ ಚಿತ್ರದ ಪ್ರಮುಖ ಕಥಾವಸ್ತು. ಮೂರು ವರ್ಷಗಳ ಹಿಂದೆಯೇ ಸಿದ್ಧವಾಗಿತ್ತು. ಕಾರಣಾಂತರಗಳಿಂದ ಬಿಡುಗಡೆ ಮಾಡಲು ಸಾಧ್ಯವಾಗಿರಲಿಲ್ಲ. ಜನವರಿಯಲ್ಲಿ ತೆರೆಗೆ ತರಲು ನಿರ್ಧರಿಸಿದ್ದೇವೆ’ ಎಂದರು ನಿರ್ದೇಶಕ ಜಗ್ಗು.
ಆನಂದ್ ಆರ್ಯ, ತೇಜುರಾಜ್ ಹಾಗೂ ಅನನ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮಂಜು ಕವಿ ಸಾಹಿತ್ಯ ರಚಿಸಿ, ಸಂಗೀತ ಸಂಯೋಜನೆ ಮಾಡಿದ್ದಾರೆ. ವೀನಸ್ ನಾಗರಾಜ ಮೂರ್ತಿ ಛಾಯಾಗ್ರಹಣವಿದೆ. ರಾಜಶೇಖರ್, ನಯನಕೃಷ್ಣ, ಹೇಮಂತ್ ಮುಂತಾದವರು ತಾರಾಗಣದಲ್ಲಿದ್ದಾರೆ.