ಟಾಲಿವುಡ್ ಸ್ಟೈಲಿಶ್ ಸ್ಟಾರ್, ನಟ ಅಲ್ಲು ಅರ್ಜುನ್ ಅವರನ್ನು ಭೇಟಿಯಾಗಲು ಅಭಿಮಾನಿಯೊಬ್ಬ 200 ಕಿಲೋ ಮೀಟರ್ ದೂರದಿಂದ ಕಾಲ್ನಡಿಗೆಯಲ್ಲಿ ಬಂದಿದ್ದಾನೆ. ಇದರಿಂದ ಸಂತಸಗೊಂಡಿರುವ ಅಲ್ಲು ಅಭಿಮಾನಿಗೆ ನಿರಾಸೆ ಮಾಡದೇ ಅವನೊಂದಿಗೆ ಸಮಯ ಕಳೆದು ಸಂತೋಷ ಪಡಿಸಿದ್ದಾರೆ.
ಅಲ್ಲು ಇತ್ತೀಚೆಗೆ ತಮ್ಮ ಕುಟುಂಬದವರ ಹುಟ್ಟುಹಬ್ಬದ ಆಚರಣೆಯಲ್ಲಿ ಬ್ಯುಸಿಯಾಗಿದ್ದಾರೆ. ಮೊದಲು ಮಗ ಅಯಾನ್ ಹುಟ್ಟುಹಬ್ಬದ ಆಚರಿಸಿದ್ದ ಅಲ್ಲು ಇತ್ತೀಚೆಗೆ ಪತ್ನಿ ಸ್ನೇಹಾ ರೆಡ್ಡಿ ಹುಟ್ಟುಹಬ್ಬ ಆಚರಿಸಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಅಲ್ಲು ಅರ್ಜುನ್ ಅಭಿಮಾನಿಗಳೊಂದಿಗೆ ಸಂವಾದ ನಡೆಸುತ್ತಾರೆ. ಅಲ್ಲದೇ ಆ ಮೂಲಕ ಸರಳ ವ್ಯಕ್ತಿತ್ವದ ಅಪರೂಪದ ನಟ ಎನ್ನಿಸಿಕೊಂಡಿದ್ದಾರೆ.
ಇತ್ತೀಚೆಗೆ ಅಲ್ಲು ಅರ್ಜುನ್ ಅಲ್ಲು ಸ್ಟುಡಿಯೊದ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದರು. ಆದರೆ ಇದೆಲ್ಲಾ ಖುಷಿಯ ಜೊತೆಗೆ ಅಲ್ಲು ಅರ್ಜುನ್ಗೆ ಇನ್ನೊಂದು ಆಶ್ಚರ್ಯ ಕಾದಿತ್ತು. ಅದೇನೆಂದರೆ ಅಲ್ಲು ಅಭಿಮಾನಿಯೊಬ್ಬ ಅವರನ್ನು ಭೇಟಿ ಮಾಡಲು 200ಕಿಲೋ ಮೀಟರ್ ಕಾಲ್ನಡಿಗೆಯಲ್ಲಿ ಬಂದಿದ್ದ. ತಮ್ಮ ಅಭಿಮಾನಿಯನ್ನು ಆದರದಿಂದ ಸ್ವಾಗತಿಸಿದ್ದ ನಟ ಅವನಿಗೆ ಗೌರವ ನೀಡಿದ್ದಲ್ಲದೇ ಅವನೊಂದಿಗೆ ಕೆಲ ಹೊತ್ತು ಕಾಲ ಕಳೆದು ಅಭಿಮಾನಿಯನ್ನು ಖುಷಿ ಪಡಿಸಿದ್ದಾರೆ.
ಸಿನಿಮಾದ ವಿಷಯಕ್ಕೆ ಬಂದರೆ ಅಲ್ಲು ಅರ್ಜುನ್ ‘ಪುಷ್ಪಾ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸುಕುಮಾರ್ ನಿರ್ದೇಶನದ ಸಿನಿಮಾದ ಮೊದಲ ಪೋಸ್ಟರ್ ಬಿಡುಗಡೆಯಾಗಿದ್ದು ಪೋಸ್ಟರ್ ಅಭಿಮಾನಿಗಳಲ್ಲಿ ಸಿನಿಮಾ ಬಗ್ಗೆ ಕುತೂಹಲ ಹೆಚ್ಚುವಂತೆ ಮಾಡಿದೆ.