ಬೆಂಗಳೂರು: ‘ಲವ್ ಯೂ ರಚ್ಚು’ ಚಿತ್ರದ ಚಿತ್ರೀಕರಣದ ವೇಳೆ ಮೃತಪಟ್ಟಿರುವ ಫೈಟರ್ ವಿವೇಕ್ ಕುಟುಂಬಸ್ಥರಿಗೆ ₹10 ಲಕ್ಷ ಪರಿಹಾರ ನೀಡುವುದಾಗಿ ನಿರ್ಮಾಪಕ ಗುರು ದೇಶಪಾಂಡೆ ಭರವಸೆ ನೀಡಿರುವುದಾಗಿ ತಿಳಿದುಬಂದಿದೆ.
ಸದ್ಯ ಅಜ್ಞಾತ ಸ್ಥಳದಿಂದ ತಮ್ಮ ಆಪ್ತರ ಮೂಲಕ ನಿರ್ಮಾಪಕ ಗುರು ದೇಶಪಾಂಡೆ ಭರವಸೆ ನೀಡಿದ್ದಾರೆ. ಘಟನೆಯ ಬಳಿಕ ಗುರು ಅವರು ತಲೆಮರೆಸಿಕೊಂಡಿದ್ದಾರೆ.
ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಜೋಗರದೊಡ್ಡಿಯಲ್ಲಿ ಸೋಮವಾರ ಸಿನಿಮಾ ಚಿತ್ರೀಕರಣದ ವೇಳೆ ವಿದ್ಯುತ್ ಸ್ಪರ್ಶಿಸಿ ಫೈಟರ್ ವಿವೇಕ್ ಎಂಬುವರು ಮೃತಪಟ್ಟಿದ್ದರು.
ಕಠಿಣ ನಿಯಮ ಜಾರಿ: ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಸರಿಯಾದ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಇದಕ್ಕೆ ಸಂಬಂಧಿಸಿ ಕಠಿಣ ನಿಯಮಗಳನ್ನು ರೂಪಿಸಿ ಒಂದೆರಡು ದಿನಗಳಲ್ಲಿ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.