ನಟ ದರ್ಶನ್ರ ಈ ಒಂದು ಮಾತಿಗೆ ಓಡೋಡಿ ಬಂದು ಸೈ ಎಂದ ಜನ

ಬೆಂಗಳೂರು: ಕೊರೊನಾದಿಂದ ರಾಜ್ಯದ ಮೃಗಾಲಯಗಳು ಸಂಕಷ್ಟಕ್ಕೆ ಸಿಲುಕಿದ ಹಿನ್ನೆಲೆಯಲ್ಲಿ ನಟ ದರ್ಶನ್ ತೂಗುದೀಪ್ ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯುವಂತೆ ಮಾಡಿದ್ದ ಮನವಿಗೆ ಪ್ರಾಣಿಪ್ರಿಯರು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ.
ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ದರ್ಶನ್ ಎಂಬ ಹೆಸರಿನ ಸಿಂಹವನ್ನು ನಿರ್ಮಾಪಕ ಶೈಲಜಾ ನಾಗ್ ದತ್ತು ಪಡೆದಿದ್ದಾರೆ.
ಇದೇ ರೀತಿ ಹಲವರು ರಾಜ್ಯದ 9 ಮೃಗಾಲಯಗಳ ಪ್ರಾಣಿಗಳನ್ನು ದತ್ತು ಪಡೆಯಲು ಮುಂದಾಗಿದ್ದಾರೆ.
ತಮ್ಮ ಮಾತಿಗೆ ಸ್ಪಂದಿಸಿದ ಜನತೆಗೆ ದರ್ಶನ ಟ್ವೀಟ್ ಮೂಲಕ ಧನ್ಯವಾದ ಹೇಳಿದ್ದಾರೆ.
ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ " ದರ್ಶನ್ " ಎಂಬ ಹೆಸರಿನ ಸಿಂಹವನ್ನು ದತ್ತು ಪಡೆದ ನಿರ್ಮಾಪಕರಾದ ಶೈಲಜಾ ನಾಗ್ ಅವರಿಗೆ ಹೃದಯಪೂರ್ವಕ ಧನ್ಯವಾದಗಳು @shylajanag pic.twitter.com/BeqYFcfdbo
— Darshan Thoogudeepa (@dasadarshan) June 6, 2021
ಅರಣ್ಯ ಇಲಾಖೆ ರಾಯಭಾರಿಯಾಗಿರುವ ನಟ ದರ್ಶನ್ ಅವರಿಗೆ ಪ್ರಾಣಿಗಳೆಂದರೆ ಅಚ್ಚುಮೆಚ್ಚು. ಈಗಾಗಲೇ ಮೈಸೂರು ಮೃಗಾಲಯದಲ್ಲಿ ಹಲವು ಪ್ರಾಣಿಗಳನ್ನು ದತ್ತು ಪಡೆದಿರುವ ದರ್ಶನ್, ಕೋವಿಡ್ನ ಈ ಸಂಕಷ್ಟದ ಸಂದರ್ಭದಲ್ಲಿ ಜನರೂ ತಮ್ಮ ಹತ್ತಿರದ ಮೃಗಾಲಯಗಳಲ್ಲಿ ಇರುವ ಪ್ರಾಣಿಗಳನ್ನು ದತ್ತುಪಡೆಯಲು ಕರೆ ನೀಡಿದ್ದರು.
‘ಕೋವಿಡ್ ಮಹಾಮಾರಿಯಿಂದ ಮಾನವಕುಲಕ್ಕೆ ಎಷ್ಟು ತೊಂದರೆ ಆಗಿದೆಯೋ ಅಷ್ಟೇ ತೊಂದರೆ ಪ್ರಾಣಿಸಂಕುಲಕ್ಕೂ ಆಗಿದೆ. ಕರ್ನಾಟಕದಲ್ಲಿ 9 ಮೃಗಾಲಯಗಳಿದ್ದು, ಇವುಗಳಲ್ಲಿ 5 ಸಾವಿರ ಪ್ರಾಣಿಗಳಿವೆ. ಇವುಗಳನ್ನು ನೋಡಲು ದೇಶದಾದ್ಯಂತದಿಂದ ಜನರು ಬರುತ್ತಿದ್ದರು. ಅವರು ಪಡೆಯುತ್ತಿದ್ದ ಟಿಕೆಟ್ನಿಂದ ಸಂಗ್ರಹವಾಗುತ್ತಿದ್ದ ಹಣದಿಂದ ಈ ಪ್ರಾಣಿಗಳಿಗೆ ಆಹಾರ, ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗೆ ವೇತನ ನೀಡಲಾಗುತ್ತಿತ್ತು. ಕೋವಿಡ್ನಿಂದಾಗಿ ಕಳೆದ ಒಂದೂವರೆ ವರ್ಷದಿಂದ ಈ ಮೃಗಾಲಯಗಳು ಸಂಕಷ್ಟದಲ್ಲಿವೆ’ ಎಂದಿದ್ದರು.
‘ಜನರು ಈ ಪ್ರಾಣಿಗಳನ್ನು ದತ್ತು ಪಡೆಯಬಹುದು. ಒಂದು ಲವ್ಬರ್ಡ್ಗೆ ವರ್ಷಕ್ಕೆ ₹1 ಸಾವಿರ, ಹುಲಿಗೆ ₹1 ಲಕ್ಷ ಹಾಗೂ ಆನೆಗೆ ₹1.17 ಲಕ್ಷ ನೀಡಿ ದತ್ತುಪಡೆದು ಪ್ರಾಣಿಸಂಕುಲ ಉಳಿಸಲು, ಮೃಗಾಲಯ ಬೆಳೆಸಲು ಎಲ್ಲರೂ ಕೈಜೋಡಿಸಿ. ‘zoo of karnataka’ ಆ್ಯಪ್ ಮುಖಾಂತರ ಅಥವಾ ಮೃಗಾಲಯಗಳಿಗೇ ಭೇಟಿ ನೀಡಿ ಈ ದತ್ತು ಪಡೆಯುವ ಪ್ರಕ್ರಿಯೆ ಕುರಿತು ಮಾಹಿತಿ ಪಡೆಯಬಹುದು. ಈ ಒಳ್ಳೆಯ ಕಾರ್ಯಕ್ಕೆ ನಾವೆಲ್ಲರೂ ಕೈಜೋಡಿಸೋಣ’ ಎಂದು ದರ್ಶನ್ ಹೇಳಿದ್ದರು. ಇದಕ್ಕೆ ಜನ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ.
ಇದನ್ನೂ ಓದಿ: ನೀವೇಕೆ ನೆಗೆಟಿವ್ ಆಲೋಚನೆ ಮಾಡುತ್ತೀರಿ: ರಮೇಶ್ ಅರವಿಂದ್ ಸ್ಫೂರ್ತಿಯ ಮಾತುಗಳು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.