ನಿರ್ದೇಶಕ ಮತ್ತು ನಿರ್ಮಾಪಕ ಗುರು ದೇಶಪಾಂಡೆ, ಮೂರು ವರ್ಷಗಳ ಹಿಂದೆ ಠಾಕ್ರೆ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ಆನಂತರ ನಾನಾ ಕಾರಣಗಳಿಂದಾಗಿ ಆ ಸಿನಿಮಾ ಸೆಟ್ಟೇರಲಿಲ್ಲ. ಈಗ ಮತ್ತೆ ಆ ಚಿತ್ರಕ್ಕೆ ಮರುಜೀವ ಬಂದಿದೆ.
2017ರಲ್ಲಿ ಈ ಚಿತ್ರಕ್ಕೆ ಮುಹೂರ್ತ ಕೂಡ ಆಗಿತ್ತು. ಪ್ರಜ್ವಲ್ ದೇವರಾಜ್ ಮತ್ತು ರವಿಚಂದ್ರನ್ ಅವರ ಕಾಂಬಿನೇಷನ್ನಲ್ಲಿ ಮೂಡಿ ಬರಬೇಕಿದ್ದ ಈ ಸಿನಿಮಾದಲ್ಲಿ ಕೊಂಚ ಬದಲಾವಣೆ ಆಗಿದೆ. ಪ್ರಜ್ವಲ್ ನಟಿಸಬೇಕಿದ್ದ ಪಾತ್ರಕ್ಕೆ ಬೇರೊಬ್ಬ ನಟನ ಪ್ರವೇಶವಾಗಲಿದೆಯಂತೆ. ಇನ್ನು ರವಿಚಂದ್ರನ್ ಅವರು ಈ ಚಿತ್ರದಲ್ಲಿ ನಟಿಸುವುದು ಖಾತ್ರಿಯಾಗಿದೆ. ಚಿತ್ರತಂಡ ಸದ್ಯದಲ್ಲೇ ಶೂಟಿಂಗ್ ಆರಂಭಿಸುವ ಸಿದ್ಧತೆಯಲ್ಲಿದೆ.
ಷೇಕ್ಸ್ಪಿಯರ್ನ ಪ್ರಸಿದ್ಧ ನಾಟಕ ಮ್ಯಾಕ್ಬೆತ್ ಅನ್ನು ಈ ಚಿತ್ರಕ್ಕಾಗಿ ರೂಪಾಂತರಿಸಿಕೊಂಡಿದ್ದಾರೆ ನಿರ್ದೇಶಕರು. ‘ಇದು ನನ್ನ ಮಹತ್ವಾಕಾಂಕ್ಷೆಯ ಸಿನಿಮಾ. ಈ ಚಿತ್ರ ಹೊಸ ರೂಪದಲ್ಲಿ ಮೂಡಿ ಬರಲಿದೆ’ ಎನ್ನುತ್ತಾರೆ ಅವರು.
‘ಪ್ರಜ್ವಲ್ ದೇವರಾಜ್ ಈ ಸಿನಿಮಾದಲ್ಲಿ ಇಲ್ಲ ಎಂದು ಹೇಳಲು ಬೇಸರವಾಗುತ್ತದೆ. ಈಗಾಗಲೇ ನನ್ನ ಬ್ಯಾನರ್ನಲ್ಲಿ ಮೂಡಿ ಬಂದ ಚಿತ್ರದಲ್ಲಿ ಅವರು ನಟಿಸಿದ್ದಾರೆ. ಈಗ ಬೇರೆ ಬೇರೆ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗಾಗಿ ಅವರು ನನಗೆ ಲಭ್ಯವಾಗುತ್ತಿಲ್ಲ. ಮತ್ತೆ ಮುಂದಿನ ದಿನಗಳಲ್ಲಿ ಅವರ ಜತೆ ಕೆಲಸ ಮಾಡುವೆ. ಈಗ ಅವರು ಮಾಡಬೇಕಿರುವ ಪಾತ್ರಕ್ಕೆ ಮತ್ತೊಬ್ಬ ನಟನನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಆ ನಟನ ಹೆಸರನ್ನು ಸದ್ಯದಲ್ಲೇ ತಿಳಿಸುವೆ’ ಎಂದಿದ್ದಾರೆ ಗುರು ದೇಶಪಾಂಡೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.