ಚೆನ್ನೈ: ನಟ ಹಾಗೂ ‘ಮಕ್ಕಳ್ ನೀಧಿ ಮೈಯಂ (ಎಂಎನ್ಎಂ)’ ಪಕ್ಷದ ನಾಯಕ ಕಮಲ್ ಹಾಸನ್ ಅವರು ಕೋವಿಡ್–19 ಸೋಂಕಿನಿಂದ ಚೇತರಿಸಿ ಆಸ್ಪತ್ರೆಯಿಂದ ಮರಳಿದ್ದಾರೆ.
ಆರಾಮವಾಗಿ ಇರುವುದಾಗಿ ತಿಳಿಸಿರುವ ಅವರು, ‘ನಾನೀಗ ಕೆಲಸಕ್ಕೆ ಮರಳಿದ್ದೇನೆ. ನನ್ನ ಆರೋಗ್ಯಕ್ಕಾಗಿ ಶುಭ ಹಾರೈಸಿದ ಅಭಿಮಾನಿಗಳಿಗೆ ಧನ್ಯವಾದಗಳು’ ಎಂದು ಹೇಳಿದ್ದಾರೆ.
ಆಸ್ಪತ್ರೆಯಿಂದ ಮರಳಿದ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ತಮಿಳಿನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಚಿಕಿತ್ಸೆ ನೀಡಿದ ಡಾ.ಜೆ.ಎಸ್.ಎನ್. ಮೂರ್ತಿ ಹಾಗೂ ಅವರ ನೇತೃತ್ವದ ವೈದ್ಯರ ತಂಡಕ್ಕೂ ಧನ್ಯವಾದ ಹೇಳಿದ್ದಾರೆ.
ಆಸ್ಪತ್ರೆಯ ಶುಶ್ರೂಷಕಿಯರು, ಮಕ್ಕಳಾದ ಶ್ರುತಿ ಹಾಸನ್ ಹಾಗೂ ಅಕ್ಷರಾ ಹಾಸನ್, ಸಹೋದರ ಮಹೇಂದ್ರನ್ ಅವರ ಸೇವೆಯನ್ನೂ ಸ್ಮರಿಸಿಕೊಂಡಿರುವ ನಟ, ಆಹಾರ–ನಿದ್ದೆ ಬಿಟ್ಟು ನನ್ನ ಬಗ್ಗೆ ಕಾಳಜಿ ವಹಿಸಿದ್ದಕ್ಕಾಗಿ ಕೃತಜ್ಞತೆಗಳು ಎಂದು ಹೇಳಿದ್ದಾರೆ.
ಗುಣಮುಖರಾಗುವಂತೆ ಹಾರೈಸಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹಾಗೂ ಇತರ ರಾಜಕೀಯ ಮುಖಂಡರಿಗೂ ಅವರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.