ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈ ಭೀಮ್‌: ನಟ ಸೂರ್ಯ, ನಟಿ ಜ್ಯೋತಿಕಾ ವಿರುದ್ಧ FIR ದಾಖಲಿಸಲು ಕೋರ್ಟ್‌ ಸೂಚನೆ

Last Updated 5 ಮೇ 2022, 10:42 IST
ಅಕ್ಷರ ಗಾತ್ರ

ಚೆನ್ನೈ: ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗಿದ್ದ ‘ಜೈ ಭೀಮ್‌‘ ಚಿತ್ರದ ನಟ ಸೂರ್ಯ ಹಾಗೂ ಅವರ ಪತ್ನಿ ನಟಿ ಜ್ಯೋತಿಕಾ ವಿರುದ್ಧ ಎಫ್ಐಆರ್‌ ದಾಖಲಿಸಲು ಕೋರ್ಟ್‌ ಪೊಲೀಸರಿಗೆ ಸೂಚನೆ ನೀಡಿದೆ.

‘ಜೈ ಭೀಮ್‘ ಸಿನಿಮಾ ಬಿಡುಗಡೆಯ ಸಂದರ್ಭದಲ್ಲಿ ಚಿತ್ರವನ್ನು ಬ್ಯಾನ್‌ ಮಾಡಬೇಕು ಎಂದು ಆಗ್ರಹಿಸಿ ಹಲವಾರು ಸಂಘಟನೆಗಳು ಪ್ರತಿಭಟನೆಮಾಡಿದ್ದವು. ತಮಿಳುನಾಡಿನ ವನ್ನಿಯಾರ್‌ ಸಮುದಾಯ ಕೂಡ ಸಿನಿಮಾ ವಿರುದ್ಧ ಪ್ರತಿಭಟನೆ ನಡೆಸಿತ್ತು.

ಚಿತ್ರದಲ್ಲಿ ವನ್ನಿಯಾರ್ ಸಮುದಾಯವನ್ನು ತಪ್ಪಾಗಿ ತೋರಿಸಿರುವ ಆರೋಪದಡಿನಿರ್ದೇಶಕ ಜ್ಞಾನವೇಲ್, ನಟ ಸೂರ್ಯ , ಅವರ ಪತ್ನಿ ಹಾಗೂ ನಿರ್ಮಾಪಕಿ ಜ್ಯೋತಿಕಾ ವಿರುದ್ದ ಎಫ್‌ಐಆರ್ ದಾಖಲಿಸುವಂತೆ ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ. ಇದರಿಂದಸೂರ್ಯ ದಂಪತಿಗೆ ಸಂಕಷ್ಟ ಎದುರಾಗಿದೆ.

'ಜೈ ಭೀಮ್' ಚಿತ್ರದಲ್ಲಿ ವನ್ನಿಯಾರ್‌ ಸಮುದಾಯವನ್ನು ಕೆಟ್ಟದಾಗಿ ತೋರಿಸಲಾಗಿದೆ. ನಮ್ಮ ಸಮುದಾಯ ಧಾರ್ಮಿಕ ಆಚರಣೆ, ನಂಬಿಕೆ, ಸತ್ಯ, ಪ್ರಾಮಾಣಿಕತೆಗೆ ಹೆಸರಾಗಿದೆ. ಇಂತಹ ಸಮುದಾಯವನ್ನು ಕೆಟ್ಟದಾಗಿ ತೋರಿಸಲಾಗಿದೆ ಎಂದು ಆರೋಪಿಸಿ ವನ್ನಿಯಾರ್‌ ಸಮುದಾಯ ನ್ಯಾಯಾಲಯದ ಮೊರೆ ಹೋಗಿತ್ತು.

‘ಜೈ ಭೀಮ್‘ ಸಿನಿಮಾ ತಮಿಳು ಮಾತ್ರವಲ್ಲದೇ, ತೆಲುಗು, ಹಿಂದಿಯಲ್ಲಿ ಸೂಪರ್‌ ಹಿಟ್‌ ಆಗಿತ್ತು. ಸಿನಿಮಾ ವಿಮರ್ಶಕರು, ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.

ಏನಿದು ವೆನ್ನಿಯಾರ್ ಹಾಗೂ ಜೈ ಭೀಮ್ ವಿವಾದ

5 ಕೋಟಿ ರೂಪಾಯಿ ಪರಿಹಾರ ಮತ್ತು ಬಹಿರಂಗ ಕ್ಷಮೆಯಾಚನೆಗೆ ಸೂಚಿಸಿ, ಸಿನಿಮಾ ನಿರ್ಮಾಣ ಸಂಸ್ಥೆ ‘2ಡಿ ಎಂಟರ್‌ಟೈನ್‌ಮೆಂಟ್’, ಸಿನಿಮಾದ ಸಹ ನಿರ್ಮಾಣ ಸಂಸ್ಥೆ ಸೂರ್ಯ ಶಿವಕುಮಾರ್ ಮತ್ತು ಪತ್ನಿ ಜ್ಯೋತಿಕಾ ಅವರ ಎ.ಕೆ. ಇಂಟರ್‌ನ್ಯಾಶನಲ್‌, ನಿರ್ದೇಶಕ ಟಿ.ಜೆ. ಜ್ಞಾನವೇಲ್ ಮತ್ತು ಅಮೆಜಾನ್‌ಗೆವನ್ನಿಯಾರ್ ಸಂಘದಿಂದ ನೋಟಿಸ್‌ ಕೊಡಲಾಗಿದೆ.

‘ಚಲನಚಿತ್ರವು ನಿಜ ಜೀವನದ ಘಟನೆಯನ್ನು ಆಧರಿಸಿದೆ. ಅದರ ಕಥಾಹಂದರವು ಮದ್ರಾಸ್ ಹೈಕೋರ್ಟ್‌ನ ತೀರ್ಪನ್ನು ಆಧರಿಸಿದೆ ಎಂದು ಹೇಳಲಾಗುವ ಚಿತ್ರದಲ್ಲಿ ಬರುವ ರಾಜಾಕಣ್ಣು, ವಕೀಲ ಚಂದ್ರು ಮತ್ತು ಪೊಲೀಸ್ ಅಧಿಕಾರಿ ಪೆರುಮಾಳ್‌ಸಾಮಿ ಅವರ ಹೆಸರುಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಆದರೆ, ಲಾಕಪ್‌ ಡೆತ್‌ನಲ್ಲಿ ಭಾಗಿಯಾಗಿರುವ ಪೊಲೀಸ್ ಸಬ್-ಇನ್ಸ್‌ಪೆಕ್ಟರ್‌ನ ಹೆಸರನ್ನು ಉದ್ದೇಶಪೂರ್ವಕವಾಗಿ ಅಂತೋನಿಸಾಮಿಯ ಬದಲಾಗಿ ಗುರುಮೂರ್ತಿ ಎಂದು ಬದಲಾಯಿಸಲಾಗಿದೆ ಮತ್ತು ಅವರನ್ನು ಆಗಾಗ್ಗೆ ಗುರು ಎಂದು ಕರೆಯಲಾಗುತ್ತದೆ,’ ಎಂದು ನೋಟಿಸ್‌ನಲ್ಲಿ ಮೊದಲಿಗೆ ವಿವರಿಸಲಾಗಿದೆ.

‘ಚಲನಚಿತ್ರದ ಒಂದು ದೃಶ್ಯದಲ್ಲಿ, ಸಬ್‌–ಇನ್‌ಸ್ಪೆಕ್ಟರ್‌ ಗುರು ಹಿನ್ನೆಲೆಯಲ್ಲಿರುವ ಕ್ಯಾಲೆಂಡರ್‌ನಲ್ಲಿ ಅಗ್ನಿಕುಂಡವನ್ನು ತೋರಿಸಲಾಗಿದೆ. ಅಗ್ನಿ ಕುಂಡವು ವನ್ನಿಯಾರ್‌ ಸಂಘದ ಚಿಹ್ನೆಯಾಗಿದೆ. 1995ರಲ್ಲಿ ಅಗ್ನಿ ಕುಂಡದ ಚಿತ್ರದೊಂದಿಗೆ ಪ್ರಕಟವಾಗಿದ್ದ ಕ್ಯಾಲೆಂಡರ್‌ ಅನ್ನು 'ಜೈ ಭೀಮ್' ನಿರ್ಮಾಪಕರು 'ಉದ್ದೇಶಪೂರ್ವಕವಾಗಿ' ಸಿನಿಮಾಕ್ಕೆ ಬಳಸಿಕೊಂಡಿದ್ದಾರೆ. ಈ ಮೂಲಕ ವನ್ನಿಯರ್ ಸಂಘದ ಸದಸ್ಯರನ್ನು ಮತ್ತು ಇಡೀ ವನ್ನಿಯಾರ್‌ ಸಮುದಾಯವನ್ನು ಅಪಮಾನಿಸಲಾಗಿದೆ’ ಎಂದು ದೂರಲಾಗಿದೆ.

‘ಖಳನ ಪಾತ್ರದಲ್ಲಿರುವ ಸಬ್‌ ಇನ್‌ಸ್ಪೆಕ್ಟರ್‌ನ ನೈಜ ಹೆಸರನ್ನು ಬದಲಿಸಿ ಗುರುಮೂರ್ತಿ ಎಂದು ಮಾಡಲಾಗಿದೆ. ಈ ಹೆಸರು ನಮ್ಮ ಸಮುದಾಯದ ಪ್ರಮುಖರೊಬ್ಬರನ್ನು ಪ್ರತಿನಿಧಿಸುತ್ತಿದೆ. ಗುರುಮೂರ್ತಿ ಪಾತ್ರ ಬಂದಾಗ ಅವರ ಹಿನ್ನೆಲೆಯಲ್ಲಿ ‘ಅಗ್ನಿ ಕುಂಡ’ದ ಚಿತ್ರವನ್ನು ತೋರಿಸುವ ಮೂಲಕ ಅವರು ವನ್ನಿಯಾರ್‌ ಸಮುದಾಯದವರೇ ಎಂದು ಬಿಂಬಿಸುವ ಪ್ರಯತ್ನ ಸಿನಿಮಾದಲ್ಲಿ ಮಾಡಲಾಗಿದೆ,’ ಎಂದು ಆರೋಪಿಸಲಾಗಿದೆ.

‘ಚಲನಚಿತ್ರದಲ್ಲಿ ಆಗಿರುವ ಈ ತಪ್ಪು, ಸಾಂದರ್ಭಿಕ, ಅಜಾಗರೂಕ ಆಥವಾ ಅರಿಯದೇ ಆದದ್ದಲ್ಲ. ಸಮಾಜದಲ್ಲಿ ವನ್ನಿಯಾರ್ ಸಮುದಾಯದ ಜನರ ಬಗೆಗಿನ ಚಿತ್ರಣವನ್ನು ಹಾಳು ಮಾಡುವ ಉದ್ದೇಶದಿಂದ ಮತ್ತು ಇಡೀ ಸಮುದಾಯವನ್ನು ದೂಷಿಸುವ ದೃಷ್ಟಿಯಿಂದ ಮಾತ್ರ ದೃಶ್ಯವನ್ನು ಸೇರಿಸಲಾಗಿದೆ,’ ಎಂದು ವಾದಿಸಲಾಗಿದೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT