ಬಹುತೇಕ ಹೊಸಬರಿಂದಲೇ ಕೂಡಿರುವ ‘ಭೈರ್ಯ ಕೆಎ-07’ ಎಂಬ ವಿಭಿನ್ನ ಶೀರ್ಷಿಕೆಯ ಸಿನಿಮಾವೊಂದು ಇತ್ತೀಚೆಗಷ್ಟೇ ಸೆಟ್ಟೇರಿದೆ. ಗೌರಿಬಿದನೂರಿನ ರೋಷನ್ ಕಥೆ, ಚಿತ್ರಕಥೆ ಬರೆದು ಮೊದಲ ಬಾರಿ ನಾಯಕನಾಗಿ ನಟಿಸುತ್ತಿದ್ದಾರೆ. ರಾಜೀವ್ ಚಂದ್ರಕಾಂತ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
‘ಮುಂಬೈನಲ್ಲಿ ನಟನೆ ತರಬೇತಿ ಪಡೆದುಕೊಂಡು ಬಂದಿರುವೆ. ನಾಯಕನಾಗಬೇಕೆಂದುಕೊಂಡು ಬಂದರೂ ಹಲವು ಚಿತ್ರಗಳಿಗೆ ಸೆಟ್ ಕೆಲಸ ಮಾಡಿರುವೆ. ಇದು ಭೂಗತ ಲೋಕದ ಕಥೆ. ಕೆಜಿಎಫ್ನಲ್ಲಿರುವ ಚಿನ್ನದ ಗಣಿಯನ್ನು ರಕ್ಷಣೆ ಮಾಡಿದವರು ಯಾರು? ಅಂದು ಅಧ್ಯಕ್ಷರಾಗಿದ್ದವರು ಯಾರು? ಇವತ್ತಿನವರೆಗೂ ಅದು ಯಾಕೆ ಸರ್ಕಾರದ ಅಧೀನದಲ್ಲಿಲ್ಲ? ಇಂತಹ ಎಲ್ಲಾ ರೀತಿಯ ಅಂಶಗಳನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. 1970 ರಿಂದ 1985ರ ನಡುವೆ ನಡೆಯುವ ಕಥೆ’ ಎಂದರು ನಾಯಕ ರೋಷನ್.
ಬಾಗಲಕೋಟೆಯ ಷರೀಫ ಬೇಗಂ ನಡಾಫ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಶೀಘ್ರದಲ್ಲಿ ತಾಂತ್ರಿಕ ತಂಡ ಮತ್ತು ತಾರಾಬಳಗದ ಮಾಹಿತಿ ನೀಡುವುದಾಗಿ ಚಿತ್ರತಂಡ ಹೇಳಿದೆ.