‘ಕಾಲಚಕ್ರ’ ಸೈಕಲಾಜಿಕಲ್ ಕಥಾಹಂದರ ಹೊಂದಿರುವ ಸಿನಿಮಾ. ಈಗಾಗಲೇ, ಇದರ ಚಿತ್ರೀಕರಣವೂ ಪೂರ್ಣಗೊಂಡಿದೆ. ಖಳನಟನಾಗಿಯೇ ಗುರುತಿಸಿಕೊಂಡಿರುವ ವಸಿಷ್ಠ ಸಿಂಹ ಇದರ ನಾಯಕ. ಅಂದಹಾಗೆ ಇದಕ್ಕೆ ಆ್ಯಕ್ಷನ್ ಕಟ್ ಹೇಳಿರುವುದು ಸುಮಂತ್ ಕ್ರಾಂತಿ.
ವಸಿಷ್ಠ ಸಿಂಹ ಇದರಲ್ಲಿ 25ರಿಂದ 60 ವಯೋಮಾನದ ನಾಲ್ಕು ಗೆಟಪ್ಗಳಲ್ಲಿ ಕಾಣಿಸಿಕೊಂಡಿದ್ದಾರಂತೆ. ಲಾಕ್ಡೌನ್ಗೂ ಮೊದಲೇ ನಟ ಸುದೀಪ್ ಇದರ ಟೀಸರ್ ಬಿಡುಗಡೆಗೊಳಿಸಿದ್ದರು. ಇದಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯೂ ಸಿಕ್ಕಿತ್ತು. ಈಗ ಮತ್ತೊಂದು ವಿಭಿನ್ನ ಬಗೆಯ ಟೀಸರ್ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ನಡೆಸಿದೆ.
ಎರಡು ವರ್ಷದ ಹಿಂದೆಯೇ ಇದರ ಮುಕ್ಕಾಲು ಭಾಗದಷ್ಟು ಶೂಟಿಂಗ್ ಪೂರ್ಣಗೊಂಡಿತ್ತು. ಬಾಕಿ ಉಳಿದಿರುವ ಚಿತ್ರೀಕರಣವನ್ನು ಪೂರ್ಣಗೊಳಿಸಿರುವ ಚಿತ್ರತಂಡ ಸಿನಿಮಾ ಬಿಡುಗಡೆಗೆ ಚಿತ್ರಮಂದಿರಗಳ ಪುನರಾರಂಭವನ್ನೇ ಎದುರು ನೋಡುತ್ತಿದೆ.
ಬೆಂಗಳೂರು ಮತ್ತು ಮಂಗಳೂರಿನ ಸುತ್ತಮುತ್ತ ಇದರ ಶೂಟಿಂಗ್ ನಡೆಸಲಾಗಿದೆ. ರಶ್ಮಿ ಫಿಲಂಸ್ ಲಾಂಛನದಡಿ ಇದಕ್ಕೆ ಬಂಡವಾಳ ಹೂಡಲಾಗಿದೆ. ಚೇತನ್ ಕುಮಾರ್, ಕವಿರಾಜ್, ಸಂತೋಷ್ ನಾಯಕ್ ಬರೆದಿರುವ ಹಾಡುಗಳಿಗೆ ಗುರುಕಿರಣ್ ಸಂಗೀತ ಸಂಯೋಜಿಸಿದ್ದಾರೆ. ಸಂಚಿತ್ ಹೆಗ್ಡೆ, ಕೈಲಾಶ್ ಖೇರ್, ಪಂಚಮ್ ಧ್ವನಿಯಾಗಿದ್ದಾರೆ.
ಎಲ್.ಎಂ. ಸೂರಿ ಅವರ ಛಾಯಾಗ್ರಹಣವಿದೆ. ಸೌಂದರ್ ರಾಜ್ ಸಂಕಲನ ನಿರ್ವಹಿಸಿದ್ದಾರೆ. ಡಿಫರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನವಿದೆ. ಮುರಳಿ ನೃತ್ಯ ನಿರ್ದೇಶಿಸಿದ್ದಾರೆ. ಬಿ.ಎ. ಮಧು ಸಂಭಾಷಣೆ ಬರೆದಿದ್ದಾರೆ. ಆವಿಕಾ ರಾಠೋಡ್, ರಾಜ್ ದಿಲೀಪ್ ಶೆಟ್ಟಿ, ಸುಚೇಂದ್ರಪ್ರಸಾದ್, ಹನುಮಂತೇಗೌಡ ತಾರಾಗಣದಲ್ಲಿದ್ದಾರೆ.