ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Hamare Baarah | 'ಹಮಾರೆ ಬಾರಹ್' ಸಿನಿಮಾ ಎರಡು ವಾರ ನಿಷೇಧ

Published 7 ಜೂನ್ 2024, 6:04 IST
Last Updated 7 ಜೂನ್ 2024, 6:04 IST
ಅಕ್ಷರ ಗಾತ್ರ

ಬೆಂಗಳೂರು: ಇಂದು (ಜೂ.7) ಬಿಡುಗಡೆಯಾಗಬೇಕಿದ್ದ 'ಹಮಾರೆ ಬಾರಹ್' ಹಿಂದಿ ಸಿನಿಮಾ ಹಾಗೂ ಟ್ರೇಲರ್ ಅನ್ನು ಎರಡು ವಾರಗಳ ಅವಧಿ ಅಥವಾ ಮುಂದಿನ ಆದೇಶದವರೆಗೆ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ನಿಷೇಧ ಏಕೆ?

'ಹಮಾರೆ ಬಾರಹ್' ಚಲನಚಿತ್ರವನ್ನು ಬಿಡುಗಡೆಗೆ ಅನುಮತಿ ಕೊಟ್ಟಲ್ಲಿ ರಾಜ್ಯದಲ್ಲಿ ಶಾಂತಿಗೆ ಭಂಗವುಂಟು ಮಾಡುವ ಹಾಗೂ ಜಾತಿ ಜಾತಿಗಳ ಮಧ್ಯೆ ದ್ವೇಷವುಂಟು ಮಾಡುವ, ಒಂದು ಧರ್ಮದ ಪದ್ಧತಿಗಳನ್ನು ಉದ್ದೇಶಪೂರ್ವಕವಾಗಿ ಅವಹೇಳನ ಮಾಡಿ ಧರ್ಮಗಳ ಮಧ್ಯೆ ದ್ವೇಷದ ಭಾವನೆಗಳನ್ನು ಉತ್ತೇಜಿಸುವ ಅಥವಾ ಸೌಹಾರ್ದತೆ ಹದಗೆಡಲು ಕಾರಣವಾಗುವ ಸಾಧ್ಯತೆಯ ಬಗ್ಗೆ ಹಾಗೂ ಮಹಿಳೆಯರ ಭಾವನೆಗಳಿಗೆ ಧಕ್ಕೆ ಉಂಟು ಮಾಡುವಂತೆ ಬಿಂಬಿತವಾಗಿರುವ ಸನ್ನಿವೇಶಗಳು ಕಂಡುಬಂದಿರುತ್ತವೆ' ಎಂದು ಆದೇಶದಲ್ಲಿ ಉಲ್ಲೇಖಿಸಿದೆ.

'ಇತ್ತೀಚಿಗೆ 'ಜೀ ಸಿನಿಮಾ' ವಾಹಿನಿಯು 'ಹಮಾರೆ ಬಾರಹ್' ಎಂಬ ಚಲನಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದು, ಇದರಲ್ಲಿ ಮುಸ್ಲಿಂ ಧರ್ಮದ ಬಗ್ಗೆ ಪ್ರಚೋದನಾತ್ಮಕ ಮತ್ತು ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಯಾವುದೇ ಎಲೆಕ್ಟ್ರಾನಿಕ್ ಮಾಧ್ಯಮ, ಸಾಮಾಜಿಕ ಜಾಲತಾಣ, ಸಿನಿಮಾ ಮಂದಿರಗಳು, ಖಾಸಗಿ ಟಿವಿ ಚಾನಲ್‌ಗಳು ಹಾಗೂ ಇತರೆ ಮಾಧ್ಯಮಗಳ ಮೂಲಕ ಪ್ರಸಾರ ಮಾಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ.

'ಹಮಾರೆ ಬಾರಹ್' ಚಿತ್ರ ಪ್ರದರ್ಶನಕ್ಕೆ ರಾಜ್ಯದ ವಿವಿಧ ಮುಸ್ಲಿಂ ಸಂಘಗಳಿಂದ ಪ್ರತಿಭಟನೆ ವ್ಯಕ್ತವಾಗಿತ್ತು.

ಆದೇಶದಲ್ಲಿ ಏನಿದೆ?

'ಇಂತಹ ಚಿತ್ರಗಳಿಗೆ ಅನುಮತಿ ನೀಡಿದರೆ ಧರ್ಮ ಮತ್ತು ಜಾತಿಗಳ ಮಧ್ಯೆ ದ್ವೇಷ ಹುಟ್ಟಿಸುತ್ತದೆ. ದೇಶದಲ್ಲಿ ಒಂದು ಧರ್ಮವನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿ, ಕೋಮು ಸೌಹಾರ್ದತೆಗೆ ಧಕ್ಕೆಯುಂಟು ಮಾಡಿ, ದೇಶದಲ್ಲಿ ಅಶಾಂತಿ ಉಂಟು ಮಾಡುವುದು, ಮುಸ್ಲಿಂ ಧರ್ಮದ ಭಾವನೆಗಳಿಗೆ ಧಕ್ಕೆ ಉಂಟು ಮಾಡುವುದು ಒಂದು ಷಡ್ಯಂತ್ರವಾಗಿದೆ. ಚಲನಚಿತ್ರಗಳು ಸಮಾಜದಲ್ಲಿ ಮಾರ್ಗದರ್ಶನವಾಗಬೇಕು, ಅದನ್ನು ಬಿಟ್ಟು ಧರ್ಮಗಳ ಮಧ್ಯೆ ದ್ವೇಷ ಭಾವನೆ ಹುಟ್ಟಿಸುವುದಲ್ಲ. ಅದರಂತೆ, ಇಂದು (ಜೂನ್ 07, 2024) ದೇಶಾದ್ಯಂತ ಬಿಡುಗಡೆಯಾಗಲಿರುವ 'ಹಮಾರೆ ಬಾರಹ್' ಎಂಬ ವಿವಾದಾತ್ಮಕ ಸಿನಿಮಾ ಬಿಡುಗಡೆಯನ್ನು ನಿಷೇಧಿಸಲಾಗಿದೆ' ಎಂದು ಹೇಳಿದೆ.

'ಈ ಚಲನಚಿತ್ರದ ಟ್ರೈಲರ್ ಅನ್ನು ಪರಿಶೀಲಿಸಲಾಗಿದ್ದು, 'ಹಮಾರೆ ಬಾರಹ್' ಚಿತ್ರದಲ್ಲಿ ಪವಿತ್ರ ಗ್ರಂಥ 'ಖುರಾನ್' ಶರೀಫರಲ್ಲಿ ಇರುವ 'ಸೂರೆ ಎ ಬಕರ'ದ ಸಾಲಿನಲ್ಲಿನ ಉಪದೇಶಗಳು ಹಾಗೂ ಸಂದೇಶಗಳ ಕುರಿತಂತೆ ನಿರ್ಮಾಪಕ ಹಾಗೂ ನಿರ್ದೇಶಕರು ತಪ್ಪು ಅಪಾರ್ಥ ಸೃಷ್ಟಿಸಿ, ಪ್ರಚೋದನಾತ್ಮಕ ಹಾಗೂ ಅವಹೇಳನಕಾರಿ ಹೇಳಿಕೆ ನೀಡಿ. ಕೆಲವು ಧರ್ಮದ ಜನರುಗಳನ್ನು ಕೆರಳಿಸುವ ಹಾಗೂ ಜನರಲ್ಲಿ ಆಕ್ರೋಶ ಉಂಟು ಮಾಡಿ ದ್ವೇಷ ಭಾವನೆಗಳನ್ನು ಪ್ರಚೋದಿಸುವ ಸನ್ನಿವೇಶಗಳು ಹಾಗೂ ಒಂದು ಸಮಾಜವನ್ನು ಅವಹೇಳನಕಾರಿಯಾಗಿ ಬಿಂಬಿಸುವ ಪ್ರಯತ್ನದಂತೆ ಕಾಣುತ್ತದೆ. ಒಂದು ಸಮಾಜವನ್ನು ಧರ್ಮದ ಆಧಾರದಲ್ಲಿ ವಿಶ್ಲೇಷಣೆ ಮಾಡುವುದು ಸ್ವಾಸ್ಥ್ಯಕ್ಕೆ ಧಕ್ಕೆ ತರುವ ಸಂಭವವಿದೆ' ಎಂದು ಆದೇಶದಲ್ಲಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT