ಯುವ ನಿರ್ದೇಶಕ ಪ್ರಭಾಕರ್ ಶೇರ್ಖಾನೆ ‘ಕೌಟಿಲ್ಯ’ ಚಿತ್ರದೊಂದಿಗೆ ಸಿನಿಮಾ ಲೋಕದಲ್ಲಿ ತಮ್ಮ ಪಯಣ ಆರಂಭಿಸಲು ಸಜ್ಜಾಗಿದ್ದಾರೆ.
ಪ್ರಭಾಕರ್ ಅವರದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ನಾಗನೂರು. ಬಾಲ್ಯದಿಂದಲೇ ಇವರಿಗೆ ಸಿನಿಮಾ ಕುರಿತು ಆಸಕ್ತಿಯಿತ್ತು. ಬಣ್ಣದಲೋಕದ ಕಡೆಗಿನ ಸೆಳೆತದ ಕಾರಣದಿಂದಾಗಿಯೇ ಬೆಂಗಳೂರಿಗೆ ಬಂದ ಇವರು, ಆದರ್ಶ ಫಿಲಂ ಇನ್ಸ್ಟಿಟ್ಯೂಟ್ ಸೇರಿದರು. ಅಲ್ಲಿ ನಿರ್ದೇಶನದ ಪಟ್ಟುಗಳನ್ನು ಕಲಿತರು.
ನಂತರ ‘ಗಾಳಿಪಟ’ ಧಾರಾವಾಹಿಯಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದರು. ‘ಗೊಂಬೆಗಳ ಲವ್’, ‘ನಾನು ಲವರ್ ಆಫ್ ಜಾನು’, ‘ಕೆಂಡಸಂಪಿಗೆ’ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. ಈಗ ತಮ್ಮದೇ ನಿರ್ದೇಶನದ ‘ಕೌಟಿಲ್ಯ’ ಚಿತ್ರದೊಂದಿಗೆ ವೀಕ್ಷಕರ ಎದುರು ಬರಲಿದ್ದಾರೆ.
ವಿಜೇಂದ್ರ ಬಿ.ಎ. ಇದರ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಅರ್ಜುನ್ ರಮೇಶ್ ಹಾಗೂ ಪ್ರಿಯಾಂಕಾ ಚಿಂಚೋಳಿ ‘ಕೌಟಿಲ್ಯ’ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರ ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.