ಹುಬ್ಬಳ್ಳಿ: ‘ಉತ್ತರ ಕರ್ನಾಟಕ ಭಾಗದ ಮಂದಿ ಸೇರಿ ನಿರ್ಮಿಸಿರುವ ‘ಮದುವೆ ಮಾಡ್ರೀ ಸರಿ ಹೋಗ್ತಾನೆ...’ ಸಿನಿಮಾ ಫೆಬ್ರುವರಿ ತಿಂಗಳಲ್ಲಿ ತೆರೆಗೆ ಬರಲಿದೆ’ ಎಂದು ಚಿತ್ರದ ನಿರ್ದೇಶಕ ಗೋಪಿ ಕೆರೂರ್ ಹೇಳಿದರು.
‘ಇದು ನನ್ನ ಎರಡನೇ ಚಿತ್ರ. ಉಡಾಳ ಹುಡುಗನೊಬ್ಬನ ಸುತ್ತ ಕಥೆ ಹೆಣೆಯಲಾಗಿದೆ. ಚಿತ್ರದಲ್ಲಿ 11 ಹಾಡುಗಳಿದ್ದು, ಅವಿನಾಶ್ ಬಾಸೂತ್ಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಉತ್ತರ ಕರ್ನಾಟಕದ ಚಿತ್ರವಾದರೂ, ಯಾವುದೇ ಕಮರ್ಷಿಯಲ್ ಚಿತ್ರಗಳಿಗೂ ಕಮ್ಮಿ ಇಲ್ಲದಂತೆ ನಿರ್ಮಿಸಲಾಗಿದೆ‘ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮೊದಲ ಚಿತ್ರದ ಪುಳಕದಲ್ಲಿದ್ದ ನಟ ಶಿವಚಂದ್ರ ಕುಮಾರ್, ‘ತುಂಟ ಹುಡುಗನೊಬ್ಬ ಪ್ರೀತಿಯ ಬಲೆಯಲ್ಲಿ ಬಿದ್ದು, ಹೇಗೆ ಜವಾಬ್ದಾರಿಯುತ ಮನುಷ್ಯನಾಗುತ್ತಾನೆ. ಆ ಮೂಲಕ, ತನ್ನ ಊರಿನವರ ಮನಸ್ಸು ಗೆಲ್ಲುತ್ತಾನೆ ಎಂಬುದು ಚಿತ್ರದ ತಿರುಳು‘ ಎಂದು ತಮ್ಮ ಪಾತ್ರದ ಎಳೆಯನ್ನು ಬಿಚ್ಚಿಟ್ಟರು.
ನಟಿ ಆರಾಧ್ಯ, ‘ಮೊದಲ ಸಿನಿಮಾದಲ್ಲೇ ಗಂಭೀರವಾದ ಪಾತ್ರ ಸಿಕ್ಕಿರುವುದು ನನ್ನ ಅದೃಷ್ಟ. ನಟನೆಗೆ ಹೆಚ್ಚು ಒತ್ತು ಇರುವ ಈ ಪಾತ್ರ ಪ್ರೇಕ್ಷಕರ ನೆನಪಿನಲ್ಲಿ ಉಳಿಯಲಿದೆ’ ಎಂದರು.
ನಿರ್ಮಾಪಕ ಶಿವರಾಜ್ ಲಕ್ಷ್ಮಣರಾವ್ ದೇಸಾಯಿ, ‘ಉತ್ತರ ಕರ್ನಾಟಕದ ಸೊಗಡಿನ ಈ ಸಿನಿಮಾವನ್ನು ಸುಮಾರು 100 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುವುದು. ಚಿತ್ರದಲ್ಲಿ ಹಾಸ್ಯದಷ್ಟೇ ಗಂಭೀರತೆಯೂ ಇದ್ದು, ಕುಟುಂಬದವರೆಲ್ಲರೂ ಕುಳಿತು ವೀಕ್ಷಿಸಬಹುದಾದ ಸಿನಿಮಾ ಇದಾಗಿದೆ’ ಎಂದು ಹೇಳಿದರು.