ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಪ್ತಪದಿ ತುಳಿದ ನಯನತಾರಾ– ವಿಘ್ನೇಶ್‌?

Last Updated 4 ಜೂನ್ 2020, 9:05 IST
ಅಕ್ಷರ ಗಾತ್ರ

ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್‌ ಶಿವನ್‌ ಹಲವು ವರ್ಷಗಳ ಲಿವ್‌ಇನ್‌ ಸಂಬಂಧಕ್ಕೆವಿದಾಯ ಹೇಳಿದ್ದು, ಇಬ್ಬರೂ ದೇವಸ್ಥಾನವೊಂದರಲ್ಲಿ ವೈವಾಹಿಕ ಜೀವನಕ್ಕೆ ಅಡಿ ಇಟ್ಟಿದ್ದಾರೆ ಎಂಬ ಸುದ್ದಿ ಕಾಲಿವುಡ್‌ ಪಡಸಾಲೆಯಿಂದ ಹೊರಬಿದ್ದಿದೆ. ನಯನತಾರಾ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ನವದಂಪತಿಗೆ ಶುಭಾಶಯಗಳ ಸುರಿಮಳೆ ಸುರಿಸುತ್ತಿದ್ದಾರೆ. ಆದರೆ, ಈ ಇಬ್ಬರೂ ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ದೃಢಪಡಿಸಿಲ್ಲ.

ನಯನತಾರಾಗೆ ಮೊದಲಿಗೆ ಪ್ರೇಮಾಂಕುರವಾಗಿದ್ದು ನಟ ಶಿಂಭು ಜೊತೆಗೆ. ಇಬ್ಬರು ಕೆಲವು ವರ್ಷಗಳ ಕಾಲ ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಸುತ್ತಿದ್ದು ಉಂಟು. ಇದ್ದಕ್ಕಿದ್ದಂತೆ ಇಬ್ಬರ ನಡುವೆ ಮನಸ್ತಾಪ ತಲೆದೋರಿತು. ಸದ್ದಿಲ್ಲದೆ ಇಬ್ಬರೂ ಬೇರೆಯಾದರು. ಈ ಪ್ರೇಮ ವೈಫಲ್ಯದ ಬಳಿಕ ಆಕೆ ಪ್ರಭುದೇವ್‌ ಜೊತೆಗೆ ಸುತ್ತಾಟ ಆರಂಭಿಸಿದರು. ಈ ಇಬ್ಬರೂ ಸಪ್ತಪದಿ ತುಳಿಯಲಿದ್ದಾರೆ ಎಂಬ ಸುದ್ದಿಯೂ ಹಬ್ಬಿತು. ಕೊನೆಗೆ, ನಯನತಾರಾ ಪಾಲಿಗೆ ಈ ಪ್ರೀತಿಯೂ ಅಂತ್ಯಗೊಂಡಿತು. ಇದರಿಂದ ಜರ್ಜರಿತಗೊಂಡ ಆಕೆ ಮೌನಕ್ಕೆ ಜಾರಿದರು. ಆಗ ಆಕೆಯ ಬದುಕಿಗೆ ಪ್ರವೇಶ ನೀಡಿದ್ದು ನಿರ್ದೇಶಕ ವಿಘ್ನೇಶ್‌ ಶಿವನ್‌.

ಸೇತುಪತಿ ನಾಯಕರಾಗಿದ್ದ ‘ನಾನುಮ್ ರೌಡಿ ಧನ್’ ಚಿತ್ರಕ್ಕೆ ವಿಘ್ನೇಶ್‌ ಶಿವನ್‌ ಆ್ಯಕ್ಷನ್‌ ಕಟ್‌ ಹೇಳಿದ್ದರು. ಆ ಚಿತ್ರದಲ್ಲಿ ನಯನತಾರಾ ಹೀರೊಯಿನ್‌ ಆಗಿ ನಟಿಸಿದ್ದರು. ಈ ಚಿತ್ರದ ಶೂಟಿಂಗ್‌ ಸೆಟ್‌ನಲ್ಲಿ ಇಬ್ಬರ ನಡುವೆ ಪ್ರೀತಿ ಚಿಗುರಿತ್ತು. ನಾಲ್ಕು ವರ್ಷಗಳ ಕಾಲ ಲಿವ್‌ಇನ್‌ ಸಂಬಂಧದಲ್ಲಿದ್ದ ಈ ಜೋಡಿ ಈಗ ದಾಂಪತ್ಯಕ್ಕೆ ಕಾಲಿಟ್ಟಿದೆ. ಕುಟುಂಬದ ಸದಸ್ಯರು ಮತ್ತು ಆತ್ಮೀಯರ ಸಮ್ಮುಖದಲ್ಲಿ ಈ ಜೋಡಿ ಸರಳವಾಗಿ ಮದುವೆ ಮಾಡಿಕೊಂಡಿದೆ ಎನ್ನಲಾಗಿದೆ.

ಅಂದಹಾಗೆ ನಯನತಾರಾ ಕೈಯಲ್ಲಿ ಹಲವು ಸಿನಿಮಾಗಳಿವೆ. ರಜನಿಕಾಂತ್ ನಟನೆಯ ‘ಅಣ್ಣಾತೆ’ ಸಿನಿಮಾಕ್ಕೂ ಅವರೇ ನಾಯಕಿ. ಇತ್ತೀಚೆಗೆ ಆಕೆ ಪ್ರೇಮ ವೈಫಲ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿದ್ದು ವೈರಲ್‌ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT