ನಟಿ ಜಾಹ್ನವಿ ಕಪೂರ್ ನಟನೆಯ ಬಹುನಿರೀಕ್ಷಿತ ‘ಗುಂಜನ್ ಸಕ್ಸೇನಾ’ ಸಿನಿಮಾಕ್ಕೆ ನೆಪೊಟಿಸಮ್ ಹೊಡೆತ ನೀಡಿದೆ ಎನ್ನಲಾಗುತ್ತಿದೆ. ಜಾಹ್ನವಿ ವೃತ್ತಿಬದುಕಿನ ಆರಂಭದ ದಿನಗಳ ಬೋನಿ ಕಪೂರ್ ನಿರ್ಧಾರ ಹಾಗೂ ಕರಣ್ ಜೋಹರ್ ನಿರ್ಮಾಣದ ಕಾರಣದಿಂದ ಸಿನಿಮಾಕ್ಕೆ ತೊಂದರೆಯಾಗುತ್ತಿದೆ ಎನ್ನುತ್ತಿವೆ ಮೂಲಗಳು.
ನಟ ಸುಶಾಂತ್ ಸಾವಿನ ಬಳಿಕ ಹೆಚ್ಚಾದ ನೆಪೊಟಿಸಮ್ ಕೂಗು ಈಗ ಶ್ರೀದೇವಿ ಪುತ್ರಿಯ ಸಿನಿಮಾಕ್ಕೂ ಹೊಡೆತ ಬೀಳುವಂತೆ ಮಾಡಿದೆ. ಅಲ್ಲದೇ ಆ ಕಾರಣದಿಂದ ಜಾಹ್ನವಿ ತಮ್ಮ ಸಿನಿಮಾದ ಪ್ರಚಾರ ಮಾಡಲು ಸಾಧ್ಯವಾಗುತ್ತಿಲ್ಲವಂತೆ.
ಬಾಲಿವುಡ್ನಲ್ಲಿ ಈಗ ಒಟಿಟಿಯಲ್ಲಿ ಬಿಡುಗಡೆಯಾಗುವ ಚಿತ್ರಗಳ ಸಂಖ್ಯೆ ಹೆಚ್ಚುತ್ತಿವೆ. ಗುಂಜನ್ ಸಕ್ಸೇನಾ ಜೀವನಾಧರಿತ ಸಿನಿಮಾದಲ್ಲಿ ಜಾಹ್ನವಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕರಣ್ ಜೋಹರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನೆಟ್ಫ್ಲಿಕ್ಸ್ ಸಂಸ್ಥೆಯೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಕರಣ್ ಈ ಸಿನಿಮಾವನ್ನು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ.
ಇತ್ತೀಚೆಗೆ ಕರಣ್ ಮೇಲೆ ನೆಪೊಟಿಸಮ್ ಅಪವಾದ ಹಾಗೂ ಕಾಮೆಂಟ್ಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಜಾಹ್ನವಿಗೆ ದೇಶಭಕ್ತಿ ಹಿನ್ನೆಲೆಯುಳ್ಳ ಸಿನಿಮಾವಾದ ’ಗುಂಜನ್ ಸೆಕ್ಸೇನಾ’ವನ್ನು ಪ್ರಚಾರ ಮಾಡಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಮುಂದೆ ಕೂಡ ನೆಪೊಟಿಸಮ್ ಕಾರಣದಿಂದ ಜಾಹ್ನವಿ ಸಿನಿಮಾಗಳು ಹಿನ್ನೆಡೆ ಕಾಣಬಹುದು ಎನ್ನಲಾಗುತ್ತಿದೆ. ಇನ್ನೊಂದಡೆ ತಮ್ಮ ಮಗಳ ಕಠಿಣ ಪರಿಶ್ರಮಕಕ್ಕೆ ಪ್ರೇಕ್ಷಕರ ಬೆಂಬಲ ಸಿಗದಿದ್ದರೆ ಹೇಗೆ ಎಂಬ ಆತಂಕವೂ ಬೋನಿ ಕಪೂರ್ ಅವರನ್ನು ಕಾಡುತ್ತಿದೆ ಎನ್ನುತ್ತಿವೆ ಮೂಲಗಳು.
ಜಾಹ್ನವಿ ಕಪೂರ್ ಚೊಚ್ಚಲ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆ ಇತ್ತು. ಟಾಲಿವುಡ್ನಲ್ಲೂ ಅನೇಕ ಸ್ಟಾರ್ ನಿರ್ಮಾಪಕರು ಜಾಹ್ನವಿ ಕಾಲ್ಶೀಟ್ಗಾಗಿ ಎದುರು ನೋಡಿದ್ದರು. ಆದರೆ ಬೋನಿ ಕಪೂರ್ ಜಾಹ್ನವಿ ವೃತ್ತಿ ಬದುಕನ್ನು ಕರಣ್ ಜೋಹರ್ಗೆ ಒಪ್ಪಿಸಿದ್ದರು. ಆದರೆ ಕರಣ್ ಜಾಹ್ನವಿಗಾಗಿ ಯಾವುದೇ ದೊಡ್ಡ ಬಜೆಟ್ನ ಸಿನಿಮಾಗಳನ್ನು ಮಾಡಲಿಲ್ಲ. ಜೊತೆಗೆ ಕರಣ್ ಮಾರ್ಗದರ್ಶನದಲ್ಲಿ ಜಾಹ್ನವಿಗೆ ದೊಡ್ಡ ಯಶಸ್ಸು ಸಿಕ್ಕಿರಲಿಲ್ಲ. ಆ ಕಾರಣಕ್ಕೆ ಬೋನಿ ಕಪೂರ್ ಈಗ ದಕ್ಷಿಣದ ಕಡೆ ಒಲವು ತೋರುತ್ತಿದ್ದಾರೆ ಎನ್ನುತ್ತಿವೆ ಚಿತ್ರರಂಗದ ಮೂಲಗಳು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.