ನಿಧಿ ಅಗರ್ವಾಲ್ ತೆಲುಗು ಚಿತ್ರರಂಗದ ಮೋಹಕ ಚೆಲುವೆ. ತನ್ನ ಸ್ನಿಗ್ಧ ಸೌಂದರ್ಯದಿಂದಲೇ ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ. ಅಕ್ಕಿನೇನಿ ನಾಗಚೈತನ್ಯ ನಾಯಕರಾಗಿದ್ದ ‘ಸವ್ಯಸಾಚಿ’ ಚಿತ್ರದ ಮೂಲಕ ಆಕೆ ಟಾಲಿವುಡ್ ಪ್ರವೇಶಿಸಿದರು. ಎರಡು ವರ್ಷದ ಹಿಂದೆ ತೆರೆಕಂಡ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಅಷ್ಟೊಂದು ಸದ್ದು ಮಾಡಲಿಲ್ಲ. ಆದರೆ, ತನ್ನ ಗ್ಲಾಮರ್ ಮತ್ತು ನಟನೆಯಿಂದ ಲಕ್ಷಾಂತರ ಸಿನಿಪ್ರೇಕ್ಷಕರ ಹೃದಯಕ್ಕೆ ಆಕೆ ಲಗ್ಗೆ ಇಟ್ಟಿದ್ದು ಸುಳ್ಳಲ್ಲ.
‘ಇಸ್ಮಾರ್ಟ್ ಶಂಕರ್’ ಚಿತ್ರದಲ್ಲಿ ನಟ ರಾಮ್ ಪೋತಿನೇನಿ ಅವರಿಗೆ ನಾಯಕಿಯಾಗಿ ನಟಿಸಿದರು. ಇದಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು ಪುರಿ ಜಗನ್ನಾಥ್. ಪ್ರಸ್ತುತ ಕೊರೊನಾ ಸೋಂಕಿನ ಭೀತಿಯ ಪರಿಣಾಮ ಸಿನಿಮಾ ಶೂಟಿಂಗ್ ಮುಂದಕ್ಕೆ ಹೋಗಿದೆ. ನಟ, ನಟಿಯರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳೊಟ್ಟಿಗೆ ಸಂವಾದ ನಡೆಸುತ್ತಿದ್ದಾರೆ. ಕುಟುಂಬದ ಸದಸ್ಯರೊಟ್ಟಿಗೆ ನಿಧಿ ಅವರೂ ಕಾಲ ದೂಡುತ್ತಿದ್ದಾರೆ. ಈ ನಡುವೆಯೇ ಅವರು ಟ್ವಿಟರ್ ಮೂಲಕ ಅಭಿಮಾನಿಗಳ ಜೊತೆಗೆ ಸಂವಾದ ನಡೆಸಿದ್ದಾರೆ.
ಅಭಿಮಾನಿಗಳು ಕೇಳಿದ ತರೇಹವಾರಿ ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದಾರೆ. ಆಕೆ ತನ್ನ ಮದುವೆ ಬಗ್ಗೆ ಹೇಳಿರುವ ಮಾತು ಈಗ ವೈರಲ್ ಆಗಿದೆ. ಸೌಂದರ್ಯದ ಖನಿಯಾಗಿರುವ ನಿಧಿ ಪ್ರೇಮ ವಿವಾಹವಾಗುತ್ತಾರೋ ಅಥವಾ ಕುಟುಂಬದ ಸದಸ್ಯರು ಒಪ್ಪಿದ ವರನ ಕೈಹಿಡಿಯುತ್ತಾರೊ ಎಂಬ ಪ್ರಶ್ನೆಗಳಿಗೆ, ‘ನಾನು ಅರೇಂಜ್ ಮ್ಯಾರೇಜ್ ಆಗುತ್ತೇನೆ’ ಎಂದು ಉತ್ತರಿಸಿದ್ದಾರೆ.
ನಟ ಪವನ್ ಕಲ್ಯಾಣ್ ಬಗ್ಗೆ ಒಂದೇ ಸಾಲಿನಲ್ಲಿ ಉತ್ತರಿಸುವಂತೆ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ, ‘ಅವರು ಟಾಲಿವುಡ್ನ ಅಪರೂಪದ ವ್ಯಕ್ತಿ’ ಎಂದು ಬಣ್ಣಿಸಿದ್ದಾರೆ.
ಈಗ ಆಕೆ ‘ಭೂಮಿ’ ಚಿತ್ರದ ಮೂಲಕ ತಮಿಳಿಗೂ ಕಾಲಿಟ್ಟಿದ್ದಾರೆ. ಇನ್ನೂ ಹೆಸರಿಡದ ಶ್ರೀರಾಮ್ ಆದಿತ್ಯ ನಿರ್ದೇಶನದ ತೆಲುಗಿನ ಹೊಸ ಚಿತ್ರಕ್ಕೂ ಅವರೇ ನಾಯಕಿ. ಚೇತನ್ಕುಮಾರ್ ಮತ್ತು ಪುನೀತ್ ರಾಜ್ಕುಮಾರ್ ಕಾಂಬಿನೇಷನ್ನಡಿ ನಿರ್ಮಾಣವಾಗುತ್ತಿರುವ ಕನ್ನಡದ ‘ಜೇಮ್ಸ್’ ಚಿತ್ರಕ್ಕೂ ಅವರೇ ಹೀರೊಯಿನ್ ಎಂಬ ಸುದ್ದಿಯಿದೆ. ಆದರೆ, ಇನ್ನೂ ಅಧಿಕೃತಗೊಂಡಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.