‘ನಾನು ಅದೇ ಮೊದಲ ಬಾರಿಗೆ ರೇಷ್ಮಾ ಆಗಿ ಬೆಂಗಳೂರಿನ ಕೆ.ಆರ್. ಮಾರ್ಕೆಟ್ಗೆ ಹೋಗಿದ್ದು. ಎರಡು– ಮೂರು ದಿನ ಸಾಮಾನ್ಯ ಮುಸ್ಲಿಂ ಹುಡುಗಿಯಂತೆ ತರಕಾರಿ, ಹೂ ಖರೀದಿಸಿದೆ. ಅಲ್ಲಿನ ವ್ಯಾಪಾರಿಗಳ ವರ್ತನೆಯೂ ಸಹಜವಾಗಿತ್ತು. ಬೀದಿಬದಿಯ ಹೋಟೆಲ್ಗಳಲ್ಲಿ ತಿಂಡಿ, ಊಟ ಮಾಡಿಕೊಂಡು ಖುಷಿಯಾಗಿದ್ದೆ. ಒಂದು ದಿನ ಶೂಟಿಂಗ್ಗಾಗಿ ಸನ್ಗ್ಲಾಸ್ ಧರಿಸಿದೆ. ನನ್ನಲ್ಲಾದ ದಿಢೀರ್ ಬದಲಾವಣೆ ಕಂಡು ಅಲ್ಲಿದ್ದವರಲ್ಲಿ ಕುತೂಹಲ ಮೂಡಿತು. ನಾನು ರಾಗಿಣಿ ಎಂದು ಗುರುತಿಸಲು ಅವರಿಗೆ ಬಹುಹೊತ್ತು ಬೇಕಾಗಲಿಲ್ಲ’.
–‘ದಿ ಟೆರರಿಸ್ಟ್’ ಚಿತ್ರದ ಶೂಟಿಂಗ್ ಬಗ್ಗೆ ಕೆದಕಿದಾಗ ಕೆ.ಆರ್. ಮಾರ್ಕೆಟ್ನ ಅನುಭವಗಳನ್ನು ರಾಗಿಣಿ ದ್ವಿವೇದಿ ನೆನಪಿಸಿಕೊಳ್ಳತೊಡಗಿದರು. ಭಯೋತ್ಪಾದನೆ ಎಂದಾಕ್ಷಣ ಬಾಂಬ್ ಸ್ಫೋಟ, ಹತ್ಯೆ, ಹಿಂಸೆಯ ಚಿತ್ರಣವೇ ತಲೆಯಲ್ಲಿ ಮೂಡುತ್ತದೆ. ಭಯೋತ್ಪಾದನೆ ಎಂದರೆ ವ್ಯಕ್ತಿಯೇ, ಕೆಲವು ಸಂಘಟನೆಗಳ ವ್ಯವಸ್ಥಿತ ಕೃತ್ಯವೇ ಅಥವಾ ಪರಿಸ್ಥಿತಿಯೇ ಎನ್ನುವ ಬಗ್ಗೆ ಈ ಚಿತ್ರ ಮಾತನಾಡುತ್ತದೆ ಎನ್ನುತ್ತಾರೆ ಅವರು.
ಅವರು ಚಿತ್ರರಂಗ ಪ್ರವೇಶಿಸಿ ಒಂದು ದಶಕ ಉರುಳಿದೆ. ರೇಷ್ಮಾ ಪಾತ್ರದಲ್ಲಿ ನಟಿಸಲು ಸಾಕಷ್ಟು ಪೂರ್ವ ತಯಾರಿ ನಡೆಸಿದ್ದಾರೆ. ಅವರ ಬಳಗದಲ್ಲಿರುವ ಮುಸ್ಲಿಂ ಸ್ನೇಹಿತರು ಅವರಿಗೆ ನೆರವಾಗಿದ್ದಾರೆ. ಕೆಲವು ಸ್ನೇಹಿತರಿಗೆ ರಾಗಿಣಿಯ ಪಾತ್ರದ ಬಗ್ಗೆ ಮೊದಲಿಗೆ ಯಾವುದೇ ಮಾಹಿತಿ ಇರಲಿಲ್ಲವಂತೆ. ಪೋಸ್ಟರ್ ಬಿಡುಗಡೆಯಾದ ಬಳಿಕ ಅವರೆಲ್ಲರೂ ಅಚ್ಚರಿಪಟ್ಟರಂತೆ.
ವಿಲನ್, ಟೆರರಿಸ್ಟ್ ಮುಖಾಮುಖಿ
ರಾಗಿಣಿ ದ್ವಿವೇದಿ ಗ್ಲಾಮರ್ ಬೆಡಗಿಯಾಗಿ ಕಾಣಿಸಿಕೊಂಡಿದ್ದೇ ಹೆಚ್ಚು. ‘ದಿ ಟೆರರಿಸ್ಟ್’ ಚಿತ್ರದ ಮೂಲಕಗ್ಲಾಮರ್ನ ಪರಿಧಿ ದಾಟುತ್ತಿದ್ದಾರೆ. ಅಳುಕಿನಿಂದಲೇ ಮಾತು ಆರಂಭಿಸಿದ ರಾಗಿಣಿ, ‘ಭಯೋತ್ಪಾದನೆಯ ಚಿತ್ರ ಇದಲ್ಲ. ಅದರ ವೈಭವೀಕರಣವೂ ಇದರಲ್ಲಿಲ್ಲ’ ಎಂದರು.
ಇದೇ 18ರಂದು ಚಿತ್ರ ತೆರೆ ಕಾಣುತ್ತಿದೆ. ಅಂದೇ ‘ದಿ ವಿಲನ್’ ಕೂಡ ಬಿಡುಗಡೆಯಾಗುತ್ತಿದೆ. ವಿಲನ್ಗೆ ಟೆರರಿಸ್ಟ್ ಎದುರಾಳಿಯೇ ಎಂಬ ಪ್ರಶ್ನೆಗೆ ರಾಗಿಣಿ ಉತ್ತರಿಸಲು ತಡಬಡಾಯಿಸಿದರು. ‘ನಾನು ಶಿವಣ್ಣ, ಸುದೀಪ್ ಅವರೊಟ್ಟಿಗೆ ಕೆಲಸ ಮಾಡಿದ್ದೇನೆ. ಚಿತ್ರರಂಗದಲ್ಲಿ ನಾವೆಲ್ಲರೂ ಒಂದೇ. ಇದರಲ್ಲಿ ಪರ್ಸನಲ್ ವಾರ್ ಇಲ್ಲ’ ಎಂದರು.
ನಿರ್ದೇಶಕ ಪಿ.ಸಿ. ಶೇಖರ್ಗೆ ಇದು ಎಂಟನೇ ಚಿತ್ರ. ‘ಶಾಂತಿಯೇ ಜೀವನದ ಹೋರಾಟವಾಗಬೇಕು ಎನ್ನುವುದು ಚಿತ್ರದ ಆಶಯ’ ಎಂದರು. ಎಸ್. ಪ್ರದೀಪ್ ವರ್ಮ ಸಂಗೀತ ಸಂಯೋಜಿಸಿದ್ದಾರೆ. ನಿರ್ಮಾಪಕ ಅಲಂಕಾರ್ ಸಂತಾನ ಬಂಡವಾಳ ಹೂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.