ವಿಚ್ಚೇದನ ಸುದ್ದಿ ಕೇಳಿ ಮನಸ್ಸು ಸ್ತಬ್ದವಾಗಿದೆ ಎಂದ ಸಮಂತಾ ತಂದೆ ಜೋಸೆಫ್ ಪ್ರಭು

ಬೆಂಗಳೂರು: ನಟ ನಾಗ ಚೈತನ್ಯ ಹಾಗೂ ನಟಿ ಸಮಂತಾ ಅವರ ನಾಲ್ಕು ವರ್ಷದ ದಾಂಪತ್ಯ ಜೀವನ ಅಂತ್ಯಗೊಂಡಿರುವುದು ದಕ್ಷಿಣ ಭಾರತದ ಸಿನಿರಂಗದಲ್ಲಿ ದೊಡ್ಡ ಚರ್ಚೆಯಾಯಿತು. ಈ ವಿಚ್ಚೇದನಕ್ಕೆ ಏನು ಕಾರಣ ಎಂಬುದು ಇದುವರೆಗೆ ಬಹಿರಂಗವಾಗಿಲ್ಲ.
ಏತನ್ಮಧ್ಯೆ ತಮಿಳಿನ ಖಾಸಗಿ ಸದ್ದಿವಾಹಿನಿ ಜೊತೆ ಮಾತನಾಡಿರುವ ಸಮಂತಾ ತಂದೆ ಜೋಸೆಫ್ ಪ್ರಭು ಅವರು, ಮಗಳ ವಿಚ್ಚೇದನ ವಿಚಾರ ತಿಳಿದು ಮನಸ್ಸು ಸ್ತಬ್ದವಾಗಿದೆ ಎಂದು ಹೇಳಿದ್ದಾರೆ.
ಇಬ್ಬರ ನಡುವೆ ಉಂಟಾಗಿರುವ ಮನಸ್ತಾಪಗಳು ಏನೆಂದು ನನಗೂ ಗೊತ್ತಿಲ್ಲ. ಆದರೆ, ಅದು ಶೀಘ್ರದಲ್ಲೇ ಸರಿ ಹೋಗಬಹುದು ಎನ್ನುವ ವಿಶ್ವಾಸ ಇದೆ. ಈ ಕುರಿತು ನಾನು ಸಮಂತಾ ಜೊತೆ ಕುಳಿತು ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
ಕಳೆದ ಸೋಮವಾರ ನಾಗ ಚೈತನ್ಯ ತಂದೆ ಕೂಡ ಅಕ್ಕಿನೇನಿ ನಾಗಾರ್ಜುನ ಅವರು ಟ್ವೀಟ್ ಮಾಡಿ, ಚಾಯ್-ಸಮಂತಾ ನಿರ್ಧಾರದಿಂದ ನನಗೆ ನೋವಾಗಿದೆ. ಆದರೆ, ಸಮಂತಾ ಮೇಲಿನ ಗೌರವ, ಪ್ರೀತಿ ನಮಗೆ ಕಡಿಮೆಯಾಗಿಲ್ಲ ಎಂದಿದ್ದರು.
ಕಳೆದ ಶನಿವಾರ ನಾಗ ಚೈತನ್ಯ ಹಾಗೂ ಖ್ಯಾತ ನಟಿ ಸಮಂತಾ ನಡುವಿನ ದಾಂಪತ್ಯ ಅಧಿಕೃತವಾಗಿ ಮುರಿದು ಬಿದ್ದಿತ್ತು. ವಿಚ್ಛೇದನ ಪಡೆಯುದಾಗಿ ತಾರಾ ಜೋಡಿ ಘೋಷಿಸಿತ್ತು
ಸ್ವತಃ ಈ ವಿಷಯವನ್ನು ಟ್ವಿಟರ್ನಲ್ಲಿ ಪ್ರಕಟಿಸಿದ್ದ ನಾಗ ಚೈತನ್ಯ, ‘ಹೆಚ್ಚು ಆಲೋಚನೆ ನಂತರ ಸಮಂತಾ ಮತ್ತು ನಾನು ನಮ್ಮ ಸ್ವಂತ ದಾರಿಯನ್ನು ಅನುಸರಿಸಲು ಹೆಜ್ಜೆ ಇಟ್ಟಿದ್ದೇವೆ. ಈ ಮೂಲಕ ಗಂಡ ಮತ್ತು ಹೆಂಡತಿಯಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ‘ ಎಂದು ಘೋಷಿಸಿದ್ದರು.
‘ಒಂದು ದಶಕದ ಈ ಸ್ನೇಹವನ್ನು ಅನುಭವಿಸಲು ನಾವು ಅದೃಷ್ಟಶಾಲಿಯಾಗಿದ್ದೇವು. ಅದು ನಮ್ಮ ಸಂಬಂಧದ ತಳಹದಿ. ಯಾವಾಗಲೂ ನಮ್ಮ ನಡುವೆ ಅದು ವಿಶೇಷ ಬಾಂಧವ್ಯವನ್ನು ಹೊಂದಿರುತ್ತದೆ. ಈ ಕಷ್ಟದ ಸಮಯದಲ್ಲಿ ನಮ್ಮ ಅಭಿಮಾನಿಗಳು, ಹಿತೈಷಿಗಳು ಮತ್ತು ಮಾಧ್ಯಮಗಳು ನಮ್ಮನ್ನು ಬೆಂಬಲಿಸಬೇಕು‘ ಎಂದು ನಾಗ ಚೈತನ್ಯ ಧನ್ಯವಾದ ಸಲ್ಲಿಸಿ ಟ್ವೀಟ್ ಮಾಡಿದ್ದರು.
2017 ರಲ್ಲಿ ನಾಗ ಚೈತನ್ಯ ಹಾಗೂ ಸಮಂತಾ ಅದ್ಧೂರಿಯಾಗಿ ಮದುವೆಯಾಗಿದ್ದರು.
ಸಮಂತಾ ಕೂಡ ಇನ್ಸ್ಟಾಗ್ರಾಂನಲ್ಲಿ ನಾಗ ಚೈತನ್ಯ ಹಾಕಿರುವ ಪೋಸ್ಟ್ನ್ನೇ ಹಾಕಿ ವಿಚ್ಚೇದನವನ್ನು ಖಚಿತಪಡಿಸಿದ್ದರು. ಕಳೆದ ಕೆಲವು ತಿಂಗಳಿನಿಂದ ಸಮಂತಾ ಹಾಗೂ ನಾಗಚೈತನ್ಯ ವಿಚ್ಚೇದನ ಪಡೆದುಕೊಳ್ಳಲಿದ್ದಾರೆ ಎಂಬ ವದಂತಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಜೋರಾಗಿ ನಡೆದಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.