ಕಲಾವಿದರ ಕುಟುಂಬದಿಂದ ಬಂದವರುಸ್ಯಾಂಡಲ್ವುಡ್ನ ನಟಿ ಸಂಯುಕ್ತಾಹೊರನಾಡು. ಜನ್ಮಜಾತ ಅಭಿನಯ ಕಲೆಯಿಂದಷ್ಟೇ ಅಲ್ಲ, ಸಮಾಜ ಸೇವೆಯಿಂದಲೂ ಅಭಿಮಾನಿಗಳಿಗೆ ಇವರು ಅಚ್ಚುಮೆಚ್ಚು.ಸಿನಿಮಾ ಮತ್ತು ವೆಬ್ಸರಣಿಗಳಲ್ಲಿ ಸಮಾನವಾಗಿ ಬ್ಯುಸಿಯಾಗಿರುವ ಈ ನಟಿ ಕೊರೊನಾ ಲಾಕ್ಡೌನ್ ಕಾಲದಲ್ಲಿ ಮಾಡಿದ ಸಮಾಜ ಸೇವೆ ಇವರಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸಿದೆ.
ಸಮಾಜ ಸೇವಕರು ಮತ್ತು ಚಿತ್ರರಂಗದ ತಾರೆಗಳು ಸಿನಿಮಾರಂಗ ಮತ್ತು ಇತರ ಕ್ಷೇತ್ರಗಳಲ್ಲಿ ಸಂಕಷ್ಟದಲ್ಲಿದ್ದ ದಿನಗೂಲಿ ಕಾರ್ಮಿಕರು, ಜೂನಿಯರ್ ಆರ್ಟಿಸ್ಟ್ಗಳು, ವಲಸೆ ಕಾರ್ಮಿಕರಿಗೆ ದಿನಸಿ ಪದಾರ್ಥ, ಆಹಾರ ಕಿಟ್ ಮತ್ತು ತಮ್ಮ ಕೈಲಾದ ಮಟ್ಟಿಗೆಒಂದಿಷ್ಟು ನಗದು ಕೊಟ್ಟು ಸ್ಪಂದಿಸುವ ಕೆಲಸ ಮಾಡಿದರು. ಈ ರೀತಿ ಸ್ಪಂದಿಸುವ ಕೆಲಸದಲ್ಲಿ ನಟಿ ಸಂಯುಕ್ತಾ ಹೊರನಾಡು ಕೂಡ ಹಿಂದೆ ಬೀಳಲಿಲ್ಲ. ಇದಕ್ಕಿಂತಲೂ ಅವರು ಮಾಡಿದ ಮತ್ತೊಂದು ಕೆಲಸ ಎಲ್ಲರ ಗಮನ ಸೆಳೆದಿದೆ. ಅವರ ಈ ಮಹತ್ವದ ಕೆಲಸಕ್ಕೆ ನೂರಾರಾರು ಕಾಣದ ಕೈಗಳು ಕೈಜೋಡಿಸಿವೆ. ನೂರಾರು ಸಂಖ್ಯೆಯಲ್ಲಿ ಯುವಕ ಮತ್ತು ಯುವತಿಯರು ಸ್ವಯಂ ಸೇವಕರಾಗಿ ಬೀದಿಗೆ ಇಳಿದು, ಬೀದಿ ನಾಯಿಗಳ ಹಸಿವು ಹಿಂಗಿಸುವ ಕೆಲಸ ಮಾಡಿದ್ದಾರೆ! ಹೇಳಿಕೇಳಿ ಸಂಯುಕ್ತಾ ಅವರು ಮನೇಕಾ ಗಾಂಧಿ ಅವರು ಹುಟ್ಟುಹಾಕಿದ ‘ಪೀಪಲ್ ಫಾರ್ ಅನಿಮಲ್’ ಸಂಸ್ಥೆಯ ಪ್ರಚಾರ ರಾಯಭಾರಿ.!
ಸಂಯುಕ್ತಾಗೆ ಪ್ರಾಣಿಗಳೆಂದರೆ ತುಂಬಾ ಇಷ್ಟವಂತೆ. ಕೊರೊನಾ ಲಾಕ್ಡೌನ್ ಕಾಲದಲ್ಲಿ ಮನೆ, ಹೋಟೆಲ್, ಅಂಗಡಿ, ಬೇಕರಿ ಇತ್ಯಾದಿ ಬಾಗಿಲುಮುಚ್ಚಿದ್ದವು. ಎಲ್ಲರೂ ಮನೆಯೊಳಗೆಅವಿತು ಕುಳಿತಾಗಬೀದಿಯಲ್ಲಿರುವ ನಾಯಿಗಳಿಗೆಊಟ ಹಾಕುವವರು ಯಾರು ಎನ್ನುವ ಪ್ರಶ್ನೆ ಇವರನ್ನು ಕಾಡಿದ್ದೇ ತಡ, ಒಂದಿಷ್ಟೂ ವಿಳಂಬ ಮಾಡದೆ ‘ನಾನು ಬೀದಿ ನಾಯಿಗಳಿಗೆ ಆಹಾರ ಪೂರೈಸಬೇಕೆಂದಿದ್ದೇನೆ. ನನ್ನ ಆಲೋಚನೆ, ಯೋಜನೆಗೆ ಯಾರೆಲ್ಲ ಕೈಜೋಡಿಸಿವಿರಿ’ ಎಂಬ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದೇತಡ ನೂರಾರು ಮಂದಿ ಉದಾರಿಗಳು ಈ ಕಾರ್ಯಕ್ಕೆ ಕೈಜೋಡಿಸಲು ಮುಂದೆಬಂದರಂತೆ.
‘ಬೆಂಗಳೂರಿನಲ್ಲಿ ಸುಮಾರು ಮೂರೂವರೆ ಲಕ್ಷ ಬೀದಿ ನಾಯಿಗಳಿವೆ. ಬೆಂಗಳೂರು ದಕ್ಷಿಣದವಾರ್ಡ್ಗಳಲ್ಲಿ ಸುಮಾರು ನಾಲ್ಕೈದು ಸಾವಿರ ಬೀದಿ ನಾಯಿಗಳಿಗೆ ಈ ಲಾಕ್ಡೌನ್ ಅವಧಿಯಲ್ಲಿ ನಿತ್ಯ ಆಹಾರ ಒದಗಿಸಿದೆವು.ನಾಯಿಗಳಿಗೆ ಬೇಕಾದ ಆಹಾರವನ್ನು ಉದಾರಿಗಳು ಮನೆ ಬಾಗಿಲಿಗೆ ಕಳುಹಿಸಿಕೊಟ್ಟರು. ಸ್ವಯಂಸೇವಕರ ತಂಡಕ್ಕೆ ಪೊಲೀಸ್ ಇಲಾಖೆಯವರು ಪಾಸ್ ನೀಡಿದರು. ಬೀದಿ ನಾಯಿಗಳಿಗೆ ಆಹಾರ ಒದಗಿಸುವ ನಮ್ಮ ಈ ಕೆಲಸಕ್ಕೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರು ಎಲ್ಲ ರೀತಿಯ ನೆರವು ನೀಡಿದರು. ಲಾಕ್ಡೌನ್ನಲ್ಲಿ ಮಾಡಿದ ಈ ಮಹತ್ವದ ಕೆಲಸ ಮನಸಿಗೆ ತುಂಬಾ ತೃಪ್ತಿ ನೀಡಿತು’ ಎಂದರು ಸಂಯುಕ್ತಾ.
‘ಟಿಕ್ ಟಾಕ್ ವಿಡಿಯೊಗಳಿಂದ ಕಾಲಹರಣ ಮಾಡುವುದಕ್ಕಿಂತ ಒಳ್ಳೆಯ ಕಾಸ್ಗಳಿಗೆ ನಾವು ಸಾಮಾಜಿಕ ಜಾಲತಾಣ ಬಳಸಿಕೊಳ್ಳಬೇಕು. ಕಷ್ಟದಲ್ಲಿರುವವರಿಗೆ, ಮೂಕಪ್ರಾಣಿಗಳಿಗೆ ಸಹಾಯ ಮಾಡಬೇಕೆಂಬ ಮನಸುಎಷ್ಟೋ ಜನರಿಗೆಇರುತ್ತದೆ. ಆದರೆ ಅವರಿಗೆ ಮಾರ್ಗಗಳು ಗೊತ್ತಿರುವುದಿಲ್ಲ. ನಾವು ಅಂಥವರಿಗೆ ವೇದಿಕೆ ಒದಗಿಸುವ, ಸೇತುವೆಯಾಗುವ ಕೆಲಸ ಮಾಡಲು ಖಂಡಿತ ಸಾಧ್ಯವಿದೆ’ ಎನ್ನಲು ಅವರು ಮರೆಯಲಿಲ್ಲ.
ಸಂಯುಕ್ತಾ ಅವರುಅಭಿನಯಿಸಿರುವ‘ಮೈಸೂರು ಮಸಾಲಾ’,‘ಹೊಂದಿಸಿ ಬರೆಯಿರಿ’, ‘ಅರಿಷಡ್ವರ್ಗ’, ‘ಗ್ಯಾಂಗ್ಸ್ಟರ್’, ‘ಆಮ್ಲೆಟ್’, ‘ರೆಡ್ ರಮ್’ ಈ ಐದು ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ. ಶೀಘ್ರ ಚಿತ್ರಮಂದಿರಗಳ ಬಾಗಿಲು ತೆರೆಯದಿದ್ದ ಪಕ್ಷದಲ್ಲಿ ಈ ಚಿತ್ರಗಳು ವೆಬ್ ಸರಣಿಗಳಂತೆ ಒಟಿಟಿ ವೇದಿಕೆಗಳಲ್ಲಿ ಬಿಡುಗಡೆಯಾದರೂ ಅಚ್ಚರಿಪಡಬೇಕಿಲ್ಲವಂತೆ.
‘ಕಳೆದ ವರ್ಷ ನಾನು ನಟಿಸಿದ್ದ ತೆಲುಗಿನ ವೆಬ್ ಸರಣಿ ‘ಗಾಡ್ ಆಫ್ ಧರ್ಮಪುರಿ’ ಮತ್ತು ಲಾಕ್ಡೌನ್ ಅವಧಿಯಲ್ಲಿ ಬಿಡುಗಡೆಯಾದ‘ಲಾಕ್ಡ್’ ವೆಬ್ ಸರಣಿ ನನಗೆ ಒಳ್ಳೆಯ ಹೆಸರು ತಂದುಕೊಟ್ಟವು. ಅಷ್ಟೇ ಅಲ್ಲ, ವೆಬ್ ಸರಣಿಯಲ್ಲಿ ನಟಿಸಲು ಸಾಲು ಸಾಲು ಅವಕಾಶಗಳು ತಂದವು. ಈಗ ತೆಲುಗಿನಲ್ಲಿ ಮತ್ತೊಂದು ಹೊಸ ವೆಬ್ ಸರಣಿಯಲ್ಲಿ ನಟಿಸಲು ಒಪ್ಪಿಕೊಂಡಿರುವೆ. ಜುಲೈ ಕೊನೆಯಲ್ಲಿ ಇದರ ಶೂಟಿಂಗ್ ಶುರುವಾಗಲಿದೆ. ಮುಂಬೈನಲ್ಲಿ ಶೂಟಿಂಗ್ ನಿಗದಿಯಾಗಿತ್ತು. ಕೊರೊನಾ ಕಾರಣಕ್ಕೆ ಚಿತ್ರೀಕರಣ ತಾಣ ಬದಲಾಗಿದ್ದು,ಕರ್ನಾಟಕದ ಗಡಿನಾಡಲ್ಲಿ ಮತ್ತು ಗೋವಾದಲ್ಲಿ ಶೂಟಿಂಗ್ ನಡೆಯುವ ಸಾಧ್ಯತೆ ಇದೆ’ ಎನ್ನುವ ಮಾತು ಸೇರಿಸಿದರು ಸಂಯುಕ್ತಾ ಹೊರನಾಡು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.