ಬೆಂಗಳೂರು: ಚಂದನವನದ ಖ್ಯಾತ ಪೋಷಕ ನಟ ಲಕ್ಷ್ಮಣ್ (74) ಅವರು ಸೋಮವಾರ ನಿಧನರಾಗಿದ್ದಾರೆ. ಹೃದಯಾಘಾತದಿಂದಾಗಿ ಅವರು ಬೆಂಗಳೂರಿನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಅಂತ, ಮಲ್ಲ, ಯಜಮಾನ, ಸೂರ್ಯವಂಶ, ಸಾಂಗ್ಲಿಯಾನ, ಸೇರಿದಂತೆ 300 ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಲಕ್ಷ್ಮಣ್ ಅವರು, ಹೆಚ್ಚಿನ ಸಿನಿಮಾಗಳಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮಿಂಚಿದ್ದರು. ಲಕ್ಷ್ಮಣ್ ಅವರು ಅಂಬರೀಷ್, ವಿಷ್ಣುವರ್ಧನ್ ಅವರ ಜೊತೆಗೂ ಅಭಿನಯ ಮಾಡಿದ್ದರು.
ಬೆಂಗಳೂರಿನಲ್ಲಿ ಜನಿಸಿದ ಲಕ್ಷ್ಮಣ್ ಅವರ ತಂದೆ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿದ್ದರು. ರಂಗಭೂಮಿ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದ ಲಕ್ಷ್ಮಣ್, ಉಷಾ ಸ್ವಯಂವರ ಎಂಬ ಸಿನಿಮಾ ಮೂಲಕ ನಾಯಕರಾಗಿಯೇ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿದ್ದರು. ಬಳಿಕ ಅವರು ಖಳನಾಯಕನಾಗಿ ಮಿಂಚಿದ್ದರು.
ಅಂತ, ಸಾಂಗ್ಲಿಯಾನ ಸಿನಿಮಾಗಳು ಅವರ ಸಿನಿ ಬದುಕಿಗೆ ಹೊಸ ತಿರುವು ತಂದುಕೊಟ್ಟಿದ್ದವು.