ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಪ್ರೀತಿಯ ಸಾಲುಗಳಿಗೆ ಧನ್ಯವಾದ: ಸುದೀಪ್‌ ಬೆಂಬಲಕ್ಕೆ ದರ್ಶನ್ ಪ್ರತಿಕ್ರಿಯೆ

Last Updated 22 ಡಿಸೆಂಬರ್ 2022, 3:40 IST
ಅಕ್ಷರ ಗಾತ್ರ

ಬೆಂಗಳೂರು: ನಟ ದರ್ಶನ್ ಅವರ ಮೇಲೆ ಚಪ್ಪಲಿ ಎಸೆದ ಘಟನೆಯ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ದರ್ಶನ್‌ಗೆ ಇಡೀ ಕನ್ನಡ ಚಿತ್ರರಂಗ ಬೆಂಬಲ ವ್ಯಕ್ತಪಡಿಸಿದೆ.

ಘಟನೆ ನಡೆದ ಎರಡು ದಿನಗಳ ಬಳಿಕ ಪ್ರತಿಕ್ರಿಯಿಸಿರುವ ದರ್ಶನ್, ತಮ್ಮ ಬೆಂಬಲಕ್ಕೆ ನಿಂತ ಚಿತ್ರರಂಗದ ನಟ–ನಟಿಯರಿಗೆ ಧನ್ಯವಾದ ಹೇಳಿದ್ದಾರೆ. ಆದರೆ, ಎಲ್ಲರಿಗೂ ಅಚ್ಚರಿ ಹಾಗೂ ಖುಷಿ ವಿಚಾರವೆಂದರೆ ಕಿಚ್ಚ ಸುದೀಪ್‌ ಬೆಂಬಲಕ್ಕೂ ದರ್ಶನ್ ಥ್ಯಾಂಕ್ಸ್ ಹೇಳಿದ್ದಾರೆ.

‘ಸುದೀಪ್‌, ನಿಮ್ಮ ಪ್ರೀತಿಯ ಸಾಲುಗಳಿಗೆ ಧನ್ಯವಾದಗಳು’ ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ.

‘ಈ ಸಮಯದಲ್ಲಿ ನನಗಿಂತಲೂ ನನ್ನ ಸೆಲೆಬ್ರಿಟಿಗಳಿಗೆ (ಅಭಿಮಾನಿಗಳು) ಹೆಚ್ಚು ನೋವಾಗಿದೆ ಎಂಬ ಅರಿವು ನನಗಿದೆ. ಇಂಥ ಘಟನೆಗಳು ಒಬ್ಬ ವ್ಯಕ್ತಿಯನ್ನು ಮತ್ತಷ್ಟು ಬಲಪಡಿಸುತ್ತದೆಯೇ ಹೊರತು ಬಲಹೀನನನ್ನಾಗಿ ಮಾಡುವುದಿಲ್ಲ. ಅದಕ್ಕೆ ತಕ್ಕ ಹಲವು ಉದಾಹರಣೆಗಳು ನಮ್ಮ ನೆಲದಲ್ಲೇ ನೋಡಿದ್ದೇವೆ. ಈ ಸಮಯದಲ್ಲಿ ನ್ಯಾಯದ ಪರ ನಿಂತ ಚಿತ್ರರಂಗದ ಗೆಳೆಯರು, ನಟರಿಗೆ ಧನ್ಯವಾದಗಳು. ಈ ಘಟನೆಯನ್ನು ತಪ್ಪು ಹಾದಿಯಲ್ಲಿ ಪ್ರೇರೇಪಿಸಲು ಪ್ರಯತ್ನಿಸಿದ ಕೆಲವರಿಗೂ ಧನ್ಯವಾದಗಳು.

ಮೊದಲಿಂದಲೂ ಹೇಳಿಕೊಂಡು ಬಂದಿದ್ದೇನೆ. ಹಾಳು ಮಾಡೋಕೆ ನೂರು ಜನ ಇದ್ದರೆ, ಕಾಯೋಕೆ ನಮ್ಮ ಕೋಟ್ಯಂತರ ಅಭಿಮಾನಿಗಳಿರುತ್ತಾರೆ. ನಿಮ್ಮ ಈ ಪ್ರೀತಿಯ ಅಪ್ಪುಗೆಗೆ ಈ ದಾಸ ಸದಾ ಚಿರಋಣಿ’ ಎಂದು ದರ್ಶನ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಹೊಸಪೇಟೆಯಲ್ಲಿ ನಟ ದರ್ಶನ್‌ ಮೇಲೆ ಅಪ್ಪು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿರುವುದಕ್ಕೆ ಪ್ರತಿಕ್ರಿಯಿಸಿದ್ದ ಕಿಚ್ಚ ಸುದೀಪ್‌, ಆಕ್ರೋಶ ಎಲ್ಲದಕ್ಕೂ ಉತ್ತರವಲ್ಲ ಎಂದಿದ್ದರು.

‘ದರ್ಶನ್‌ ಕ್ರಾಂತಿ ಸಿನಿಮಾ ಪ್ರಚಾರ ಕಾರ್ಯಕ್ರಮದ ವಿಡಿಯೊ ನೋಡಿದೆ. ಅಲ್ಲಿ ನಡೆದ ಘಟನೆ ಮನಸ್ಸಿಗೆ ನೋವುಂಟು ಮಾಡಿದೆ. ಚಿತ್ರದ ಪ್ರಮುಖ ನಟಿ ಸೇರಿದಂತೆ ಇಡೀ ಚಿತ್ರ ತಂಡ ಅಸಹಾಯಕವಾಗಿ ನಿಂತಿತ್ತು. ಸಮರ್ಥಿಸಿಕೊಳ್ಳಲಾಗದ ಅಮಾನವೀಯ ಘಟನೆಯಿದು’ ಎಂದು ಸುದೀಪ್‌ ಟ್ವೀಟ್ ಮಾಡಿದ್ದರು.

‘ನಮ್ಮ ಭೂಮಿ, ಭಾಷೆ, ಸಂಸ್ಕೃತಿ ಎಲ್ಲವೂ ಪ್ರೀತಿ ಮತ್ತು ಗೌರವವನ್ನು ಕಲಿಸುತ್ತವೆ. ಪ್ರತಿ ಸಮಸ್ಯೆಗೆ ಉತ್ತರವಿದೆ. ಪ್ರತಿ ಸಮಸ್ಯೆಯನ್ನು ಹಲವು ವಿಧದಲ್ಲಿ ಬಗೆಹರಿಸಬಹುದು. ಪ್ರತಿ ವ್ಯಕ್ತಿಯನ್ನು ಗೌರವದಿಂದ ಕಾಣಬೇಕು. ಯಾವುದೇ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕು’ ಸುದೀಪ್‌ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT