ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಿರ್ಮಾಪಕ ಕೆ. ಮುರಳಿಧರನ್ ಅವರು ಹುಟ್ಟೂರಾದ ತಮಿಳುನಾಡಿನ ಕುಂಭಕೋಣಂನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ‘ಇಂಡಿಯಾ ಟುಡೆ‘ ವರದಿ ಮಾಡಿದೆ.
ತಮ್ಮ ಉದ್ಯಮ ಪಾಲುದಾರರಾದ ವಿ. ಸ್ವಾಮಿನಾಥನ್ ಮತ್ತು ಜಿ. ವೇಣುಗೋಪಾಲ್ ಅವರ ಜೊತೆ ಲಕ್ಷ್ಮೀ ಮೂವಿ ಮೇಕರ್ಸ್(ಎಲ್ಎಂಎಂ) ಚಿತ್ರ ನಿರ್ಮಾಣ ಸಂಸ್ಥೆ ಸ್ಥಾಪಿಸಿದ್ದರು. ‘ಸಿವಂ’, ‘ಪುಧು ಪೆಟ್ಟೈ’ ಮತ್ತು ‘ಭಗವತಿ’ಯಂತಹ ಹಿಟ್ ಚಿತ್ರಗಳನ್ನು ಅವರು ನೀಡಿದ್ದರು.
ಕಮಲ್ ಹಾಸನ್ ಅವರ ‘ಅಂಬೆ ಸಿವಂ’, ವಿಜಯಕಾಂತ್ ಅವರ ‘ಉಳಥರೈ’, ಕಾರ್ತಿಕ್ ಅಭಿನಯದ ‘ಗೋಕುಲಾತಿಲ್ ಸೀತೈ’, ಅಜಿತ್ ಮುಖ್ಯ ಭೂಮಿಕೆಯಲ್ಲಿರುವ ‘ಉನ್ನೈ ತೇಡಿ’, ವಿಜಯ್ ನಟನೆಯ ‘ಪೆರಿಯ ಮುದನ್’ ಮುಂತಾದ ಕಮರ್ಷಿಯಲ್ ಹಿಟ್ ಚಿತ್ರಗಳನ್ನು ನಿರ್ಮಿಸಿ ಹೆಸರು ಮಾಡಿದ್ದರು.
ಜಯಂ ರವಿ, ತ್ರಿಷಾ ಮತ್ತು ಅಂಜಲಿ ಅಭಿನಯದ ‘ಸಕಲ ಕಲಾ ವಲ್ಲವನ್‘, ಎಲ್ಎಂಎಂ ನಿರ್ಮಾಣ ಸಂಸ್ಥೆಯ ಕೊನೆಯ ಚಿತ್ರವಾಗಿದೆ.
ತಮಿಳಿನ ಸೂಪರ್ ಸ್ಟಾರ್, ನಟ ಕಮಲ್ ಹಾಸನ್, ನಟ ಮತ್ತು ನಿರ್ದೇಶಕ ಮನೋಬಲ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.