ನಟಿ ಜಯಂತಿ ಅವರ ಪಾರ್ಥಿವ ಶರೀರವನ್ನು ಬನಶಂಕರಿಯಲ್ಲಿರುವ ಅವರ ನಿವಾಸದಲ್ಲೇ ಇರಿಸಲಾಗಿದೆ. ಬಂಧುಗಳು, ಸಿನಿಮಾ ಕ್ಷೇತ್ರದ ಪ್ರಮುಖರು ಮನೆಗೆ ಬಂದು ಅಂತಿಮ ನಮನ ಸಲ್ಲಿಸುತ್ತಿದ್ದಾರೆ.
ಮಧ್ಯಾಹ್ನ 12ರಿಂದ ಸಂಜೆ 4ರವರೆಗೆ ರವೀಂದ್ರ ಕಲಾ ಕ್ಷೇತ್ರದ ಆವರಣದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ಬಳಿಕ ಬನಶಂಕರಿಯ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಜಯಂತಿ ಅವರ ಪುತ್ರ ಕೃಷ್ಣಕುಮಾರ್ ತಿಳಿಸಿದರು.
ನನ್ನ ತಾಯಿಯವರು ಸದಾ ಕ್ರಿಯಾಶೀಲ ವ್ಯಕ್ತಿ. ಒಂಟಿಯಾಗಿ ಕೂರುವವರು ಅಲ್ಲ. ಅವರಿಗೆ ನಾವು ಮಾತ್ರವಲ್ಲ. ಚಿತ್ರರಂಗವೇ ಕುಟುಂಬದಂತಿತ್ತು. ಹಾಗಾಗಿ ಎಲ್ಲರೊಂದಿಗೆ ಸದಾ ಬೆರೆಯುತ್ತಿದ್ದರು. ಆಸ್ತಮಾ ಅವರನ್ನು ಕಾಡಿತ್ತು. ಇದು ತೀವ್ರಗೊಂಡು ಎರಡು ಬಾರಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಅದರಿಂದ ಪೂರ್ಣ ಚೇತರಿಸಿಕೊಂಡು ಮತ್ತೆ ಲವಲವಿಕೆಯಿಂದ ಇದ್ದರು. ಇಂದು ಅವರು ಇಲ್ಲ ಎಂಬುದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ ಎಂದು ನಟಿ ದಿವಂಗತ ಜಯಂತಿ ಅವರ ಪುತ್ರ ಕೃಷ್ಣಕುಮಾರ್ ದುಃಖ ವ್ಯಕ್ತಪಡಿಸಿದರು.