ಯೋಗರಾಜ್ ಭಟ್ ನಿರ್ದೇಶಿಸಿದ ‘ಗಾಳಿಪಟ’ ಚಿತ್ರ ತೆರೆ ಕಂಡಿದ್ದು ಹನ್ನೊಂದು ವರ್ಷದ ಹಿಂದೆ. ಗಣೇಶ್, ದಿಗಂತ್ ಮತ್ತು ರಾಜೇಶ್ ಕೃಷ್ಣ ಹಾರಿಸಿದ್ದ ಈ ಗಾಳಿಪಟ ಪ್ರೇಕ್ಷಕರಿಗೆ ಕಚಗುಳಿ ಇಟ್ಟಿತ್ತು.
ಈಗ ಗಣೇಶ್, ದಿಗಂತ್ ಮತ್ತು ಪವನ್ಕುಮಾರ್ ಅವರೊಟ್ಟಿಗೆ ಭಟ್ಟರು ‘ಗಾಳಿಪಟ 2’ ಹಾರಿಸುತ್ತಿರುವುದು ಎಲ್ಲರಿಗೂ ಗೊತ್ತಿದೆ. ಈ ಚಿತ್ರದ ಪಾತ್ರವರ್ಗ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದ ದೀರ್ಘ ಪತ್ರ ವೈರಲ್ ಕೂಡ ಆಗಿತ್ತು. ಹಳೆಯ ಗಾಳಿಪಟದ ಯಾವ ಎಲಿಮೆಂಟ್ಗಳೂ ‘ಗಾಳಿಪಟ 2’ರಲ್ಲಿ ಇಲ್ಲ ಎನ್ನುವುದು ಭಟ್ಟರ ಸ್ಪಷ್ಟನೆ.
ಡಿಸೆಂಬರ್ 2ರಿಂದಲೇ ಈ ಚಿತ್ರದ ಶೂಟಿಂಗ್ಗಾಗಿ ಕುದುರೆಮುಖದಲ್ಲಿ ಚಿತ್ರತಂಡ ಬೀಡುಬಿಟ್ಟಿದೆ. ಹಾಡೊಂದರ ಚಿತ್ರೀಕರಣ ನಡೆಯುತ್ತಿದ್ದು, ಧನು ನೃತ್ಯ ಸಂಯೋಜಿಸಿದ್ದಾರಂತೆ. 350ಕ್ಕೂ ಹೆಚ್ಚು ಕಲಾವಿದರು ಹಾಡಿನ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದಾರೆ. ಜನವರಿ 8ರವರೆಗೂ ಅಲ್ಲಿಯೇ ಹಾಡು ಮತ್ತು ಇತರೇ ದೃಶ್ಯಗಳ ಚಿತ್ರೀಕರಣ ನಡೆಸಲು ಚಿತ್ರತಂಡ ನಿರ್ಧರಿಸಿದೆ.
ಯುವಜನರ ಕನಸುಗಳು ಮತ್ತು ಹತಾಶೆಯ ಸುತ್ತ ಈ ಸಿನಿಮಾ ಕಥೆ ಹೆಣೆಯಲಾಗಿದೆ. ಚಿತ್ರದಲ್ಲಿ ಒಂಬತ್ತು ಹಾಡುಗಳಿರುವುದು ವಿಶೇಷ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಲಿದ್ದಾರೆ. ಅದ್ವೈತ್ ಗುರುಮೂರ್ತಿ ಅವರ ಛಾಯಾಗ್ರಹಣವಿದೆ. ಮಹೇಶ್ ದಾನಣ್ಣನವರ ಬಂಡವಾಳ ಹೂಡಿದ್ದಾರೆ.
ಅನಂತ್ನಾಗ್, ರಂಗಾಯಣ ರಘು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಶರ್ಮಿಳಾ ಮಾಂಡ್ರೆ, ಸೋನಲ್ ಮಾಂತೆರೊ, ಸಂಯುಕ್ತಾ ಮೆನನ್, ವೈಭವಿ ಶಾಂಡಿಲ್ಯ ಈ ಚಿತ್ರದ ನಾಯಕಿಯರು.