`ಮುನ್ನಾಭಾಯಿ' ಚಿತ್ರದ ಸರ್ಕೀಟ್ ಪಾತ್ರವನ್ನು ಮತ್ತೆ ಎಲ್ಲೆಲ್ಲೋ ನಿರ್ವಹಿಸುವುದರಿಂದ ಆ ಪಾತ್ರಕ್ಕೆ ಅನ್ಯಾಯ ಮಾಡಿದಂತೆ' ಎಂದು ನಟ ಅರ್ಷದ್ ವಾರ್ಸಿ ಹೇಳಿದ್ದಾರೆ.
`ಮುನ್ನಾಭಾಯಿ ಮತ್ತೆಂದೂ ಬಾರದು. ಜತೆಗೆ ಸರ್ಕೀಟ್ ಪಾತ್ರವನ್ನು ಪದೇ ಪದೇ ಮಾಡುವುದರಿಂದ ಅದರ ಗಾಂಭೀರ್ಯ ಕಡಿಮೆಯಾಗಲಿದೆ. ಹೀಗಾಗಿಯೇ ಜಾಹೀರಾತುಗಳಲ್ಲಿ ಅದೇ ಪಾತ್ರವನ್ನು ನಿರ್ವಹಿಸಲು ಕೇಳಿಕೊಂಡ ಹಲವರಿಗೆ ನಾನು ಒಲ್ಲೆ ಎಂದೆ' ಎನ್ನುತ್ತಾ ತಮ್ಮ ನಿಲುವಿಗೆ ಸಮರ್ಥನೆ ನೀಡುತ್ತಾರೆ.
ಬಾಲಿವುಡ್ನಲ್ಲಿ ತಮ್ಮ ವ್ಯಕ್ತಿತ್ವಕ್ಕೆ ಸರಿಹೊಂದುವ ಪಾತ್ರಗಳನ್ನು ನಿರ್ವಹಿಸುವವರು ಸಲ್ಮಾನ್ ಖಾನ್ ಮಾತ್ರ ಎಂದಿರುವ ಅರ್ಷದ್ ವಾರ್ಸಿ, ಉಳಿದ ನಟರು ಬೇರೆಯವರು ಬರೆದ ಕಥೆಗೆ ಪಾತ್ರವಾಗುತ್ತಾರಷ್ಟೇ ಎನ್ನುತ್ತಾರೆ.
ಇಂದು ಹಾಸ್ಯಪಾತ್ರಗಳನ್ನು ನಿಭಾಯಿಸುವುದು ಹೆಚ್ಚು ಆಪ್ತವೆನಿಸುತ್ತದೆ. ಹೆಚ್ಚು ಪ್ರೇಕ್ಷಕರನ್ನು ತಲುಪಲು ಇದರಿಂದ ಸಾಧ್ಯ ಎನ್ನುವ ಅರ್ಷದ್, ತಾವು ನಟಿಸಿದ ಬಹುಪಾಲು ಚಿತ್ರಗಳಲ್ಲಿ ಹಾಸ್ಯ ಪಾತ್ರಗಳನ್ನೇ ಆಯ್ದುಕೊಂಡಿದ್ದಾರೆ. ತಾವು ಹಾಸ್ಯ ನಟರಾಗಿದ್ದರೂ ಅಕ್ಷಯ್ ಕುಮಾರ್ ಹಾಸ್ಯ ಸನ್ನಿವೇಶವನ್ನು ನಿಭಾಯಿಸುವ ರೀತಿ ಬಲು ಇಷ್ಟ ಎಂದು ಮುಕ್ತಕಂಠದಿಂದ ಹೊಗಳಿದ್ದಾರೆ.