ವೃತ್ತಿರಂಗಭೂಮಿ ಶಾಂತಮ್ಮ ನವರಿಗೆ ಜೀವನೋಪಾಯದ ಮಾರ್ಗವಾಗಿ ಕಂಡಿತು. ಇಳಕಲ್ನ ವೃತ್ತಿರಂಗಭೂಮಿಯ ಖ್ಯಾತ ನಟ ಕೀರ್ತೆಪ್ಪ ಕೊಪ್ಪರದ ಅವರು ಶಾಂತಮ್ಮ ಅವರ ಕಲಾಪ್ರತಿಭೆ ಗುರುತಿಸಿ, ಅವಕಾಶ ನೀಡಿ, ಭದ್ರನೆಲೆ ಒದಗಿಸಿದರು. ರೂಪ, ಕಂಠಸಿರಿ ಹಾಗೂ ಪ್ರತಿಭೆಯ ಸಂಗಮವಾಗಿದ್ದ ಶಾಂತಮ್ಮ ಬಹುಬೇಗ ಕಲಾವಿದೆಯಾಗಿ ಛಾಪು ಮೂಡಿಸಿದರು. ಬಾಲ್ಯದಲ್ಲಿ ಗಳಿಸಿದ ಸಂಗೀತ ಜ್ಞಾನ ನಟಿಯಾದ ಮೇಲೆ ಕೈ ಹಿಡಿಯಿತು. ಶಾಂತಮ್ಮ ಅವರು ಹಾಡಿದ ರಂಗಗೀತೆಗಳು ಪ್ರೇಕ್ಷಕರ ಮನಸೆಳೆದವು.
ಶಾಂತಮ್ಮ ಅವರ ಕಲೆ ಮೆಚ್ಚಿ ಪ್ರಕಾಶ ಬಾಳಸಂಗಾತಿಯಾದರು. ಪುತ್ರಿಯರಾದ ರೇಣುಕಾ (ಶಿಕ್ಷಕಿ), ಪ್ರೊ.ಸಂತೋಷಕುಮಾರಿ (ಪ್ರಾಧ್ಯಾಪಕಿ) ಹಾಗೂ ಕಾಂಚನಾ (ಟೆಕ್ಕಿ) ಅವರಿಗೆ ಉತ್ತಮ ಶಿಕ್ಷಣ ಕೊಡಿಸಿ, ಬದುಕಿನ ಸಾರ್ಥಕತೆ ಹೆಚ್ಚಿಸಿಕೊಂಡರು.
‘ಹರಿಶ್ಚಂದ್ರ’ ನಾಟಕದ ‘ತಾರಾಮತಿ’, ಪುರಂದರದಾಸ’ದ ‘ಲಕ್ಷ್ಮೀ’, ಶಿವದರ್ಶನ’ದ ‘ರಾಣಿ’, ‘ಲಂಚ ಸಾಮ್ರಾಜ್ಯ’ದ ‘ಮೀನಾಕ್ಷಿ’, ‘ರಾಜಾವಿಕ್ರಮ‘ ನಾಟಕದ ‘ರಾಣಿ ಪ್ರಭಾವತಿ‘, ‘ಹೈಬ್ರಿಡ್ ಹೆಣ್ಣು‘ ನಾಟಕದ ‘ಸುಮಿತ್ರಾ ದೇಸಾಯಿ’, ಬನಶಂಕರಿ ದೇವಿ ಮಹಾತ್ಮೆಯಲ್ಲಿ ದೇವಿ ಪಾತ್ರಗಳು, ಕುರುಕ್ಷೇತ್ರ, ರಕ್ತರಾತ್ರಿ, ಅಕ್ಷಯಾಂಬರ ನಾಟಕಗಳಲ್ಲಿ ‘ದ್ರೌಪದಿ‘ ಪಾತ್ರ, ಚಿತ್ರಾಂಗದಾ ನಾಟಕದಲ್ಲಿನ ‘ಚಿತ್ರಾಂಗದಾ‘ ಪಾತ್ರ ಹೆಸರು ತಂದುಕೊಟ್ಟವು.