ಸಾಹಿತ್ಯ ತತ್ವ ಮತ್ತು ಜೀವನ ತತ್ವ ಹೊಂದಿರುವ ಇಬ್ಬರು ವ್ಯಕ್ತಿಗಳು ಕಾಲೇಜಿನ ಸ್ಟಾಫ್ರೂಮಿನಲ್ಲಿ ಕುಳಿತು ಒಬ್ಬರನೊಬ್ಬರು ಕೆಣಕುತ್ತ, ಗೇಲಿ ಮಾಡಿಕೊಳ್ಳುತ್ತ, ಟೀಕಿಸುತ್ತ ಹಾಗೂ ಪ್ರೀತಿಸುತ್ತ ಹಂಚಿಕೊಳ್ಳುವ ಕತೆ ರಂಗದ ಮೇಲೆ ಗಾಢವಾದ ಅನುಭವವನ್ನು ಕಟ್ಟಿಕೊಡುತ್ತದೆ. ಒಬ್ಬ ಇಂಗ್ಲಿಷ್ ಅಧ್ಯಾಪಕ, ಕತೆಗಾರನೂ ಆದ ಮೂರ್ತಿ, ಮತ್ತೊಬ್ಬ ಕನ್ನಡ ಅಧ್ಯಾಪಕ, ತಾನು ಹೇಳುತ್ತಿರುವುದು ಕತೆಯಲ್ಲ: ಜೀವನ ಎಂದು ವಾದಿಸುವ ಪಾಂಡುರಂಗ ಡಿಗಸ್ಕರ್. ಕುಣಕಾಲ ಹುಡುಗಿಯ ಜೀವಂತ ಸಂಗತಿಯನ್ನು ಕಣ್ಣಿಗೆ ಕಟ್ಟುವ ಹಾಗೆ ವಿವರಿಸುವ ಡಿಗಸ್ಕರ್ ಭಾಷೆ ಜವಾರಿಯದ್ದಾಗಿದೆ. ಹಿಂದುಸ್ಥಾನಿ ಭಾಷೆಯಲ್ಲಿ ದಾಸ್ತಾಂಗೋಯಿ ಎಂಬ ಕತೆ ಹೇಳುವ ಪರಂಪರೆಯೊಂದಿದೆ ಆ ಮಾದರಿಯಲ್ಲಿ ಇಲ್ಲಿನ ಎರಡು ಪಾತ್ರಗಳು ನಿರೂಪಣಾ ಸರಣಿಯನ್ನು ರಂಗದ ಮೇಲೆ ಸೃಷ್ಟಿಸುತ್ತವೆ.