ಬೆಂಗಳೂರು: ಕೊನೆಯ ವಾರ ನಿಮ್ಮ ಈಡೇರದ ಆಸೆ ಪೂರೈಸುವುದಾಗಿ ಬಿಗ್ ಬಾಸ್ ಹೇಳಿದ್ದೇ ತಡ. ಸ್ಪರ್ಧಿಗಳು ತಮ್ಮ ಮನದಾಳದ ಹೆಬ್ಬಯಕೆಯನ್ನು ಹೊರಗಿಟ್ಟಿದ್ದಾರೆ.
ಕಿಚ್ಚ ಸುದೀಪ್ ಅವರು ತಯಾರಿಸಿದ ಊಟವನ್ನು ಮನೆಯ ಸದಸ್ಯರೆಲ್ಲರೂ ಸೇವಿಸಬೇಕೆಂಬ ದಿವ್ಯಾ ಉರುಡುಗ ಅವರ ಬೇಡಿಕೆ ಈಡೇರಿದೆ. ಈಗಿರುವುದು ಮಂಜು ಪಾವಗಡ ಅವರ ಅಪರೂಪದ ಬೇಡಿಕೆ.
ಶಿವಣ್ಣನ ಆಶೀರ್ವಾದ ಬೇಕು: ‘ಬಿಗ್ ಬಾಸ್, ಶಿವಣ್ಣ ನನ್ನ ಫೇವರೇಟ್ ಹೀರೊ. ಫಿನಾಲೆಗೆ ಮುನ್ನ ನನಗೆ ಅವರ ಆಶೀರ್ವಾದ ಬೇಕು. ದಯವಿಟ್ಟು ನನ್ನ ಆಸೆ ಪೂರೈಸಿ. ಅವರ ಎರಡು ಮಾತುಗಳ ಧ್ವನಿ ಕೇಳಿಸಿ’ ಎಂದು ಮನೆಯ ಟಾಪ್ ಸ್ಪರ್ಧಿಗಳಲ್ಲಿ ಒಬ್ಬರಾದ ಮಂಜು ಪಾವಗಡ ಕೇಳಿದ್ದಾರೆ. ಹೀಗಾಗಿ, ಬಿಗ್ ಬಾಸ್ ಮನೆಯ ಸ್ಪರ್ಧಿಯ ಈ ಆಸೆಯನ್ನು ಶಿವಣ್ಣ ಪೂರೈಸುತ್ತಾರಾ? ಎಂಬ ಕುತೂಹಲ ಮನೆ ಮಾಡಿದೆ. ನಿರೂಪಕರಾದ ಸುದೀಪ್ ಇದಕ್ಕಾಗಿ ಏನು ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಪ್ರಶಾಂತ್ ಸಂಬರಗಿ ಆಸೆಯೂ ವಿಚಿತ್ರ: ಇನ್ನೂ, ಮತ್ತೊಬ್ಬ ಸ್ಪರ್ಧಿ ಪ್ರಶಾಂತ್ ಸಂಬರಗಿಯವರು ನಾನು ಈ ಮನೆಯಲ್ಲಿರುವಾಗ ನನ್ನ ಪತ್ನಿ, ಮಕ್ಕಳು ನೇರವಾಗಿ ಇಲ್ಲಿ ಬಂದು ನನ್ನನ್ನು ನೋಡಬೇಕು ಎಂದು ಕೇಳಿಕೊಂಡಿದ್ದಾರೆ. ಇಲ್ಲಿಯವರೆಗೆ ಯಾವುದೇ ಸೀಸನ್ನಲ್ಲಿ ಸ್ಪರ್ಧಿಗಳು ಈ ರೀತಿಯ ಬೇಡಿಕೆ ಇಟ್ಟ ಉದಾಹರಣೆಗಳಿಲ್ಲ. ಸಂಬರಗಿಯ ಈ ಕುತೂಹಲಕಾರಿ ಆಸೆ ಈಡೇರುತ್ತದೆಯೇ ಎಂಬುದಕ್ಕೆ ಈ ವಾರಾಂತ್ಯದ ಒಳಗೆ ಉತ್ತರ ಸಿಗಲಿದೆ.
ಮಂಜುಗೆ ಶುಭಾಶಯ ತಿಳಿಸಲು ಕೇಕ್ ಕೇಳಿದ ದಿವ್ಯಾ ಸುರೇಶ್: ಮನೆಯ ಟಾಪ್ ಕಂಟೆಂಡರ್ಗಳ ಸಾಲಿನಲ್ಲಿ ನಿಲ್ಲುವ ದಿವ್ಯಾ ಸುರೇಶ್ ಅವರು, ತಮಗೆ ಅತ್ಯಂತ ಆಪ್ತರಾದ ಮಂಜು ಪಾವಗಡ ಅವರಿಗೆ ಫ್ರೆಂಡ್ಶಿಪ್ ಡೇ ಶುಭಾಶಯ ಹೇಳಲು ಕೇಕ್ ಮತ್ತು ಬಲೂನ್ಗಳನ್ನು ಕೇಳಿದ್ದಾರೆ. ಇದು ನಿಜಕ್ಕೂ ಮಂಜು ಅವರಿಗೆ ಸರ್ಪ್ರೈಸ್ ಆಗುವುದರಲ್ಲಿ ಎರಡು ಮಾತಿಲ್ಲ.
ಇದನ್ನೂ ಓದಿ.. Bigg Boss 8 : ಮನೆಗೆ ಬಂದಿತು ಕಿಚ್ಚ ಸುದೀಪ್ ಮಾಡಿದ ಅಡುಗೆ
ಒಟ್ಟಿನಲ್ಲಿ ವಾರಪೂರ್ತಿ ವೀಕ್ಷಕರಿಗೂ ಬಿಗ್ ಬಾಸ್ ಕಡೆಯಿಂದ ಸರ್ಪ್ರೈಸ್ಗಳು ಬರುತ್ತಲೇ ಇರಲಿವೆ. ಈ ಸರ್ಪ್ರೈಸ್ಗಳ ಸಾಲಿನಲ್ಲಿ ಒಬ್ಬ ಸ್ಪರ್ಧಿಯ ಎಲಿಮಿನೇಶನ್ ಸಹ ಇರಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.