ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bigg Boss Kannada 10: ಈ ಸೀಸನ್‌ನಲ್ಲಿ ಮನೆಗೆ ಭೇಟಿಯಿತ್ತ ಅತಿಥಿಗಳಿವರು...

Published 17 ಜನವರಿ 2024, 9:35 IST
Last Updated 17 ಜನವರಿ 2024, 9:43 IST
ಅಕ್ಷರ ಗಾತ್ರ

ಬೆಂಗಳೂರು: ಬಿಗ್‌ಬಾಸ್‌ ಸೀಸನ್‌ 10 ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ. 15ನೇ ವಾರಕ್ಕೆ ಕಾಲಿಟ್ಟಿರುವ ಬಿಗ್‌ಬಾಸ್‌ ಅನೇಕ ವಿಭಿನ್ನ ಕ್ಷಣಗಳಿಗೆ ಸಾಕ್ಷಿಯಾಗಿದೆ. ಸ್ಪರ್ಧಿಗಳ ನಗು, ಅಳುವಿನೊಂದಿಗೆ ಮನೆಗೆ ಭೇಟಿ ನೀಡಿದ ಒಂದಷ್ಟು ಅತಿಥಿಗಳು ಕಾರ್ಯಕ್ರಮದ ಮೆರುಗು ಹೆಚ್ಚಿಸಿದ್ದಾರೆ.

ಈ ಬಾರಿ ಈ ಹಿಂದಿನ ಸೀಸನ್‌ಗಳಿಗಿಂತಲೂ ಹೆಚ್ಚಿನ ಅತಿಥಿಗಳು ಬಿಗ್‌ಬಾಸ್‌ ಮನೆಗೆ ಬಂದು ಸ್ಪರ್ಧಿಗಳೊಂದಿಗೆ ಸಂವಾದ ನಡೆಸಿದ್ದಾರೆ, ಮನರಂಜನೆ ನೀಡಿದ್ದಾರೆ. 

ಎಂಎಲ್‌ಎ ಪ್ರದೀಪ್‌ ಈಶ್ವರ್‌

ಬಿಗ್‌ ಬಾಸ್‌ 10ರಲ್ಲಿ ಮೊದಲ ಅತಿಥಿಯಾಗಿ ಆಗಮಿಸಿದವರು ಚಿಕ್ಕಬಳ್ಳಾಪುರ ಎಂಎಲ್‌ಎ ಪ್ರದೀಪ್‌ ಈಶ್ವರ್‌. ಮನೆಯೊಳಗಿದ್ದ ಸದಸ್ಯರೊಂದಿಗೆ ಮಾತುಕತೆ ನಡೆಸಿ, ತಮ್ಮದೇ ರೀತಿಯಲ್ಲಿ ಸ್ಪೂರ್ತಿದಾಯಕ ಮಾತುಗಳನ್ನಾಡಿ ಸ್ಪರ್ಧಿಗಳಲ್ಲಿ ಆತ್ಮವಿಶ್ವಾಸ ತುಂಬಿದ್ದರು. 

ಪ್ರಥಮ್‌ ಭೇಟಿ

ಬಿಗ್‌ಬಾಸ್‌ ಸೀಸನ್‌ 4ರ ವಿನ್ನರ್‌ ಪ್ರಥಮ್‌ ಈ ಬಾರಿ ಬಿಗ್‌ಬಾಸ್‌ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭೇಟಿ ನೀಡಿದ್ದರು. ಮನೆಮಂದಿಯ ಎದುರು ಲಾರ್ಡ್‌ ಪ್ರಥಮ್‌ ಎಂದು ಹೇಳಿಕೊಂಡು ಸೇವೆ ಮಾಡಿಸಿಕೊಂಡು ಮನರಂಜನೆ ನೀಡಿದ್ದರು.

ದಸರೆಗೆ ಮನೆಗೆ ಬಂದಿದ್ದ ತಾರಾ

ಚಂದನವನದ ಚಂದದ ನಟಿ ತಾರಾ ಅನುರಾಧಾ ಅವರು ದಸರಾ ವೇಳೆ ಬಿಗ್‌ ಬಾಸ್‌ ಮನೆಗೆ ಬಂದು ಸ್ಪರ್ಧಿಗಳೊಂದಿಗೆ ಹಬ್ಬ ಆಚರಿಸಿದ್ದರು. ಪ್ರತಿ ಸದಸ್ಯರ ಬಳಿ ಕುಳಿತು ಮನದ ಮಾತನ್ನು ಆಲಿಸಿ, ಧೈರ್ಯ ತುಂಬಿದ್ದರು. ಪ್ರತಾಪ್‌ ಅವರಿಗಂತೂ ಅಮ್ಮನಂತೆ ಸಂತೈಸಿ ದುಃಖ ಮರೆಸಿದ್ದರು. ಮನೆಮಂದಿಯೊಂದಿಗೆ ಅದ್ಧೂರಿಯಾಗಿ ದಸರಾ ಹಬ್ಬ ಆಚರಿಸಿದ್ದರು. ಇದು ಬಿಗ್‌ ಬಾಸ್‌ ಸೀಸನ್‌ ಅತ್ಯುತ್ತಮ ಕ್ಷಣಗಳಲ್ಲಿ ಒಂದಾಗಿತ್ತು.

ಕಲರ್ಸ್‌ ಕನ್ನಡದ ‘ಭಾಗ್ಯಾ’ ಸುಷ್ಮಾ ಭೇಟಿ

ಹುಲಿ ಉಗುರಿನ ಪ್ರಕರಣ ಎದುರಿಸಿ ಮತ್ತೆ ಮನೆಯೊಳಗೆ ಬಂದಿದ್ದ ವರ್ತೂರು ಸಂತೋಷ್‌ಗೆ ಬೆಂಬಲ ನೀಡಿದ್ದು ಮನೆಗೆ ಬಂದಿದ್ದ ಭಾಗ್ಯ ಲಕ್ಷ್ಮಿ ಧಾರಾವಾಹಿಯ ಪಾತ್ರದಾರಿ ಸುಷ್ಮಾ ಅವರು. ಮನೆಯಿಂದ ಹೊರಹೋಗುವುದಾಗಿ ಪಟ್ಟು ಹಿಡಿದು ಕುಳಿತಿದ್ದ ವರ್ತೂರು ಸಂತೋಷ್‌ ಅವರಿಗೆ ಅಕ್ಕನಾಗಿ ಧೈರ್ಯ ತುಂಬಿದ್ದರು. ಟಾಸ್ಕ್‌ಗಳ ನಡುವೆ ಕಳೆದುಹೋಗಿದ್ದ ಸದಸ್ಯರಿಗೆ ಹೊಸ ಭರವಸೆ ಮೂಡಿಸಿದ್ದರು.

ಬ್ರಹ್ಮಾಂಡ ಗುರೂಜಿಯ ನಗೆ

ಬಿಗ್‌ ಬಾಸ್‌ ಸೀಸನ್‌1 ರಲ್ಲಿ ಸ್ಪರ್ಧಿಯಾಗಿ ಬಂದಿದ್ದಕ್ಕಿಂತಲೂ ಚಟುವಟಿಕೆಯಿಂದ ಸ್ಪರ್ಧಿಗಳೊಂದಿಗೆ ಬೆರೆತು ನಗೆ ಬುಗ್ಗೆ ಹರಿಸಿದವರು ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮಾ ಅವರು. ಮನೆಯ ಸದಸ್ಯರು ಗುರೂಜಿಯನ್ನು ಗೋಳಾಡಿಸಿದಷ್ಟೇ ಅವರೂ ಕೂಡ ಸ್ಪರ್ಧಿಗಳೊಂದಿಗೆ ತಮಾಷೆ ಮಾಡುತ್ತಾ ಸಾಕಪ್ಪ ಎನಿಸಿದ್ದರು. 

ಶ್ರುತಿ ನ್ಯಾಯ ಪಂಚಾಯತಿ

ಕಿಚ್ಚ ಸುದೀ‍ಪ್‌ ವಾರಾಂತ್ಯದಲ್ಲಿ ಬರದ ಕಾರಣ ಸೀಸನ್‌ 5ರ ಸ್ಪರ್ಧಿ ಹಾಗೂ ವಿಜೇತೆ ಶ್ರುತಿ ಅವರು ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟು ನ್ಯಾಯ ಪಂಚಾಯತಿ ನಡೆಸಿಕೊಟ್ಟಿದ್ದರು. ಸ್ಪರ್ಧಿಗಳ ಪರ ವಿರೋಧ ವಾದಗಳನ್ನು ಆಲಿಸಿದ್ದರು. ಅಕ್ಕನಾಗಿ, ಅಮ್ಮನಾಗಿ ಸ್ಪರ್ಧಿಗಳಲ್ಲಿ ಆತ್ಮವಿಶ್ವಾಸ ತುಂಬಿದ್ದರು.

ಶುಭಾ ಪೂಂಜಾ–ಶೈನ್‌ ಶೆಟ್ಟಿ

ಸೀಸನ್‌ 8ರಲ್ಲಿ ಸ್ಪರ್ಧಿಯಾಗಿದ್ದ ಶುಭಾ ಪೂಂಜಾ ಮತ್ತು ಸೀಸನ್‌ 7ರ ಸ್ಪರ್ಧಿಯಾಗಿದ್ದ ಶೈನ್‌ ಶೆಟ್ಟಿ ಬಿಗ್‌ ಬಾಸ್‌ ಮನೆಗೆ ಬಂದು ಟಾಸ್ಕ್‌ಗಳಲ್ಲಿ ಭಾಗಿಯಾಗಿದ್ದರು. ಶ್ರುತಿ ಭೇಟಿಯಿತ್ತ ಮರುದಿನ ಅಂದರೆ ಭಾನುವಾರವೂ ಸುದೀಪ್‌ ಬರದ ಕಾರಣ ಮನೆಮಂದಿಯೊಂದಿಗೆ ಸೇರಿ ಸಖತ್‌ ಮನರಂಜನೆ ನೀಡಿದ್ದರು.

ಸಪ್ತಮಿ ಗೌಡ ಸಾಮಾಜಿಕ ಜಾಗೃತಿ

ಕರ್ನಾಟಕ ಸರ್ಕಾರ ವಿತರಿಸುತ್ತಿರುವ ಮುಟ್ಟಿನ ಕಪ್ ಬಗ್ಗೆ ಜನತೆಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಜಿಯೋ ಸಿನಿಮಾದಲ್ಲಿ 24 ಗಂಟೆಗಳ ಕಾಲ ನೇರಪ್ರಸಾರವಾಗುವ ಬಿಗ್‌ಬಾಸ್‌ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದವರು ಕಾಂತಾರ ಬೆಡಗಿ ಸಪ್ತಮಿ ಗೌಡ. 

ಮನೆಯ ಮಹಿಳಾ ಮತ್ತು ಪುರುಷ ಸದಸ್ಯರೊಂದಿಗೆ ಮುಕ್ತವಾಗಿ ಸಂವಾದ ನಡೆಸಿದ ಅವರು ಜನತೆಗೆ ಮುಟ್ಟಿನ ಕಪ್‌ ಬಗ್ಗೆ ಅರಿವು ಮೂಡಿಸಿದರು.

ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಭೇಟಿ

ಕೆಲವರಿಗೆ ದಿಗಿಲು, ಕೆಲವರಿಗೆ ಖುಷಿ ನೀಡಿದ್ದು ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಅವರ ಭವಿಷ್ಯವಾಣಿ. ಹೊಸ ವರ್ಷಕ್ಕೆ ಮನೆಗೆ ಭೇಟಿ ನೀಡಿದ್ದ ಅವರು ಸ್ಪರ್ಧಿಗಳ ಭವಿಷ್ಯ ನುಡಿದಿದ್ದರು. ಹೊಸ ಭರವಸೆ, ಉತ್ಸಾಹ ತುಂಬಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT