ಯಾರೇ ಕೂಗಾಡಲಿ, ಊರೇ ಹೋರಾಡಲಿ ನಿನ್ನ ನೆಮ್ಮದಿಗೆ ಭಂಗವಿಲ್ಲ, ಎಮ್ಮೆ ನಿನಗೆ ಸಾಟಿಯಿಲ್ಲ ಬಿಸಿಲು ಮಳೆಗೆ ಬಿರುಗಾಳಿ ಚಳಿಗೆ ನೀ, ಅಳುಕದೆ ಮುಂದೇ ಸಾಗುವೆ ಅರೆ ವೈ ಅರೆ ವೈ ಅರೆ ವೈ ಟುರ್ರ್ ಬ್ಯಾ!
‘ಸಂಪತ್ತಿಗೆ ಸವಾಲ್’ ಚಿತ್ರದಲ್ಲಿ ಹೀಗೆ ಹಾಡುತ್ತ ರಾಜ್ಕುಮಾರ್ ಎಮ್ಮೆ ಮೇಲೆ ಕೂತು ಸವಾರಿ ಮಾಡುವ ದೃಶ್ಯ ನೋಡಿ ಮೆಚ್ಚಿಕೊಳ್ಳದವರು ವಿರಳ. ಚಿಕ್ಕಂದಿನಲ್ಲಿ ಹೀಗೆ ಎಮ್ಮೆ ಸವಾರಿ ಮಾಡಿದ ನೆನಪೂ ಹಳ್ಳಿಯಲ್ಲಿ ಬಾಲ್ಯ ಕಳೆದ ಹಲವರ ನೆನಪಿನ ಪುಸ್ತಕದಲ್ಲಿ ಉಳಿದಿರುತ್ತದೆ. ಈಗಲೂ ಊರುಗಳಲ್ಲಿ ಅಂಥ ದೃಶ್ಯಗಳನ್ನು ನೋಡಬಹುದು ಎಂಬುದಕ್ಕೆ ಈ ಚಿತ್ರವೇ ಸಾಕ್ಷಿ. ನಾನು ಏಕಾಂಗಿಯಾಗಿ ಹಂಪಿಗೆ ಪ್ರವಾಸಕ್ಕೆಂದು ಹೋಗಿದ್ದೆ. ಸೈಕ್ಲಿಂಗ್ ಮಾಡುತ್ತಾ ತುಂಗಭದ್ರಾ ನದಿಯ ಆಚೆ ದಡದಲ್ಲಿನ ವಿರುಪಾಪುರ ಗಡಿಯಲ್ಲಿ ತಿರುಗಾಡುತ್ತಿದ್ದೆ. ಆಗ ನನ್ನ ಸೈಕಲ್ ಸವಾರಿಗೆ ಎದುರಾಗಿ ಹೋಗುತ್ತಿದ್ದ ಎಮ್ಮೆಯ ಮೇಲೆ ಉಲ್ಟಾ ಕೂತು ಸವಾರಿ ಮಾಡುತ್ತಿದ್ದ ಈ ಪುಟಾಣಿ ಪೋರ ಕಂಡ. ನನ್ನ ಬಾಲ್ಯದ ಕಿತಾಪತಿಗಳನ್ನೂ ಮತ್ತೊಮ್ಮೆ ಮನಸಲ್ಲಿ ಮಗುಚಿಹಾಕಿದ ಈ ಹುಡುಗನ ಚಿತ್ರವನ್ನು ತಕ್ಷಣವೇ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದೆ.