ಕುಕನೂರು : ಅರಣ್ಯವನ್ನು ಮರು ಸೃಷ್ಟಿಸುವ ನಿಟ್ಟಿನಲ್ಲಿ ಇಲಾಖೆ ದಿಟ್ಟ ಹೆಜ್ಜೆ ಇಟ್ಟಿದೆ. ಕಾಡು ಸಸ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಬೀಜ ಸಂಗ್ರಹಿಸಿ, ಸಸಿ ಬೆಳೆಸಿ ಖಾಲಿ ಪ್ರದೇಶದಲ್ಲಿ ನೆಡುವ ಕಾಯಕಕ್ಕೆ ಮುಂಗಾರು ಹಂಗಾಮಿನಲ್ಲಿ ಅರಣ್ಯ ಇಲಾಖೆ ಮುಂದಾಗಿದೆ.
ರಸ್ತೆಗಳ ವಿಸ್ತರಣೆಯಿಂದ ಸುಮಾರು 5 ತಿಂಗಳಿನಿಂದ ಶ್ರಮವಹಿಸಿ ಬೆಳೆಸಿದ ಗಿಡಗಳನ್ನು ಮರ ಕಡಿತಲೆಗೊಂಡ ಖಾಲಿ ಪ್ರದೇಶದಲ್ಲಿ ನೆಡಲು ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
ಕಡಿತಗೊಂಡ ಪ್ರದೇಶದಲ್ಲಿ ಕಾಡನ್ನು ಮರು ನಿರ್ಮಿಸುವ ಗುರಿಯನ್ನು ಹೊಂದಿರುವ ಅರಣ್ಯ ಇಲಾಖೆ ಈಗಾಗಲೇ ಸುಮಾರು 10,000 ಸಸಿಗಳನ್ನು ಬೆಳೆಸಿದೆ. ಸ್ವಯಂಪ್ರೇರಿತರಾಗಿ ನಿಗದಿ ಮಾಡಿದ್ದಕ್ಕಿಂತ 2000 ಗಿಡಗಳನ್ನು ಹೆಚ್ಚುವರಿಯಾಗಿ ಬೆಳೆಸಿ ಸಾರ್ವಜನಿಕರಿಗೆ ಹಂಚಲು ಅರಣ್ಯ ಇಲಾಖೆ ಮುಂದಾಗಿದೆ.
2021-22 ನೇ ಸಾಲಿನಲ್ಲಿ ಚೆಂಡುರು ಸಸ್ಯ ಪಾಲನಾ ಕ್ಷೇತ್ರದಲ್ಲಿ ಮಹಾಗನಿ, ಹೊನ್ನೆ, ಚೆರ್ರಿ ಕಾಡು ಜಾತಿಸಸಿ , ಮಾವು, ಬೇವು, ಜಾಲಿ, ಬಿದಿರು, ನೇರಳೆ, ತಪಸಿ, ಸಾಗೋನಿ, ಬದಾಮಿ, ಅಶೋಕ, ಹೊಳೆಮತ್ತಿ, ಹೊಂಗೆ, ಬೆಳಾಲೆ, ಶಿವಣೆ, ಸಿಮರುಬ, ಕಾಡುಬಾದಾಮಿ ಸಸಿಗಳನ್ನು ಆರೋಗ್ಯಪೂರ್ಣವಾಗಿ ಬೆಳೆಸಲಾಗಿದೆ.
ಇನ್ನೇನು ಕೆಲವೇ ದಿನಗಳಲ್ಲಿ ಇದೇ ಜಾಗೆಯಲ್ಲಿ ಸರ್ಕಾರ ಸಾಲುಮರದ ತಿಮ್ಮಕ್ಕ ಎಂಬ ಉದ್ಯಾನವನವನ್ನು ಪ್ರಾರಂಭಿಸಲಿದೆ.
ಪ್ರತಿ ಗಿಡ ಬೆಳೆಸಲು ಕನಿಷ್ಠ ₹25ಕ್ಕೂ ಹೆಚ್ಚು ಹಣವನ್ನುಇಲಾಖೆ ವ್ಯಯಿಸಿದೆ. ಸಸ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಎಲ್ಲ ಬಗೆಯ ಕಾಡಿನ ಸಸ್ಯಗಳನ್ನು ಒಂದೊಂದು ಕಡೆ ಬೆಳೆಸಿ ಸಾಲಾಗಿ ಇಟ್ಟಿದ್ದಾರೆ.
ಖಾಲಿ ಇರುವ ಅರಣ್ಯ ಪ್ರದೇಶದಲ್ಲಿ ಗಿಡಗಳನ್ನು ನೆಡಲು ಪೂರ್ವ ಸಿದ್ಧತೆ ನಡೆಸಿದ್ದಾರೆ. ಅರಣ್ಯವನ್ನು ಮರುಸೃಷ್ಟಿಸಲು ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ನಾಗರಾಜ್ ಹಾಗೂ ಸಿಬ್ಬಂದಿ ಕಾಳಜಿ ವಹಿಸಿದ್ದಾರೆ.
ಕೃಷಿ ಅರಣ್ಯ ಪ್ರೋತ್ಸಾಹ ಧನದಲ್ಲಿ ಸಾರ್ವಜನಿಕರಿಗೆ ಗಿಡಗಳನ್ನು ನೀಡಲು ಅವಕಾಶವಿದೆ. ಈ ಯೋಜನೆಯ ಮೂಲಕ ಫಲಾನುಭವಿಗಳಿಗೆ ಗಿಡಗಳನ್ನು ನೀಡಲು ಇಲಾಖೆ ಮುಂದಾಗಿದೆ.