ಬೆಂಗಳೂರಿನ ಸಂಚಾರ ದಟ್ಟಣೆ ಉದ್ಯಮಿಗಳು ಮತ್ತು ರಾಜ್ಯ ಸರ್ಕಾರದ ನಡುವೆ ವಾಗ್ವಾದಕ್ಕೆ ಕಾರಣವಾಗಿ ವಿವಾದ ಸೃಷ್ಟಿಸಿರುವಂತೆಯೇ, ಸಂಚಾರ ದಟ್ಟಣೆಗೆ ಪರಿಹಾರವಾಗಿ ಸರ್ಕಾರವು ರೂಪಿಸಿರುವ ಸುರಂಗ ಮಾರ್ಗ ಯೋಜನೆಯೂ ವಿವಾದಕ್ಕೆ ಕಾರಣವಾಗಿದೆ. 16.7 ಕಿ.ಮೀ.ಉದ್ದದ ಉತ್ತರ– ದಕ್ಷಿಣ ಕಾರಿಡಾರ್ನ ವಿಸ್ತೃತ ಯೋಜನಾ ವರದಿಯಲ್ಲಿನ (ಡಿಪಿಆರ್) ವಿವರಗಳು ಸಾರ್ವಜನಿಕರು, ಜನಪ್ರತಿನಿಧಿಗಳ ಆತಂಕಕ್ಕೆ ಕಾರಣವಾಗಿದೆ. ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಸರ್ಕಾರ ನೇಮಿಸಿದ್ದ ತಜ್ಞರ ಸಮಿತಿಯು ಉದ್ದೇಶಿತ ಯೋಜನೆಯ ರೂಪುರೇಷೆಯಲ್ಲಿ ಅನೇಕ ಲೋಪಗಳಿರುವುದನ್ನು ಬೊಟ್ಟು ಮಾಡಿದೆ. ಮುಖ್ಯವಾಗಿ, ನಗರದ ಜೀವನಾಡಿಯಾದ ಲಾಲ್ಬಾಗ್ಗೆ ಯೋಜನೆಯಿಂದ ಕಂಟಕವಾಗುವ ಸಾಧ್ಯತೆ ಇದೆ ಎಂದು ಸಮಿತಿ ಹೇಳಿದೆ. ಆದರೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸುರಂಗ ರಸ್ತೆ ಅಗತ್ಯ ಎಂದು ಬಲವಾಗಿ ಪ್ರತಿಪಾದಿಸುತ್ತಿದ್ದಾರೆ