ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಆಳ–ಅಗಲ | ಹಣ ಅಕ್ರಮ ವರ್ಗಾವಣೆ: ಇ.ಡಿ. ಕಣ್ಣಿಡುವುದು ಹೇಗೆ?

ಹಣ ಅಕ್ರಮ ವರ್ಗಾವಣೆ ಆರೋಪದ ಸಂಬಂಧ ಸಾವಿರಾರು ಪ್ರಕರಣಗಳ ತನಿಖೆ
Published : 1 ಅಕ್ಟೋಬರ್ 2024, 23:33 IST
Last Updated : 1 ಅಕ್ಟೋಬರ್ 2024, 23:33 IST
ಫಾಲೋ ಮಾಡಿ
Comments
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಜಾರಿ ನಿರ್ದೇಶನಾಲಯವು (ಇ.ಡಿ) ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಸಿಐಆರ್ ದಾಖಲಿಸಿದೆ. ಅದರ ಬೆನ್ನಲ್ಲೇ, ಮುಡಾ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆ ನಡೆದಿಲ್ಲ ಹಾಗೂ ಅದು ಇ.ಡಿ ವ್ಯಾಪ್ತಿಗೆ ಬರುವುದಿಲ್ಲ ಎನ್ನುವಂಥ ಮಾತುಗಳು ಕೇಳಿಬಂದಿವೆ. ಹಣ ಅಕ್ರಮ ವರ್ಗಾವಣೆ ವಿಚಾರದಲ್ಲಿ ಇ.ಡಿ ಅಧಿಕಾರ ವ್ಯಾಪ್ತಿ, ಅದು ಎಲ್ಲಿಂದ ಅಕ್ರಮದ ಮಾಹಿತಿ ಪಡೆಯುತ್ತದೆ ಎನ್ನುವುದು ಸೇರಿದಂತೆ ಅದರ ಕಾರ್ಯನಿರ್ವಹಣೆಯ ಬಗ್ಗೆ ಇಲ್ಲಿದೆ ಮಾಹಿತಿ...
ಸರ್ಕಾರಿ ಸಂಸ್ಥೆಗಳ ದತ್ತಾಂಶ:
ಇ.ಡಿ.ಯು ಪ್ರಕರಣಗಳನ್ನು ದಾಖಲಿಸಲು ವಿವಿಧ ಮೂಲಗಳಿಂದ ಮಾಹಿತಿ ಪಡೆಯುತ್ತದೆ. ಅವುಗಳಲ್ಲಿ, ಸರ್ಕಾರದ ವಿವಿಧ ಸಂಸ್ಥೆಗಳು ಪೂರೈಸುವ ಹಣಕಾಸು ದತ್ತಾಂಶವೂ ಒಂದು ಮೂಲವಾಗಿದೆ. ಉದಾಹರಣೆಗೆ, ಶಂಕಿತ ಹಣಕಾಸು ವ್ಯವಹಾರಗಳನ್ನು ಪತ್ತೆ ಹಚ್ಚುವ ಹಣಕಾಸು ಇಲಾಖೆಯ ಆರ್ಥಿಕ ಗುಪ್ತಚರ ವಿಭಾಗವು (ಎಫ್‌ಐಯು) ಇ.ಡಿ.ಯೊಂದಿಗೆ ತನ್ನ ದತ್ತಾಂಶವನ್ನು ಹಂಚಿಕೊಳ್ಳುತ್ತದೆ. ಆದರೆ, ಈ ರೀತಿ ಇ.ಡಿ.ಯಲ್ಲಿ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆ ಅತಿ ಕಡಿಮೆ. ಏಪ್ರಿಲ್ 2018ರಿಂದ ಅಕ್ಟೋಬರ್ 2023ರವರೆಗೆ, ಎಫ್‌ಐಯು ನೀಡಿದ ದತ್ತಾಂಶದ ಆಧಾರದ ಮೇಲೆ ಇ.ಡಿ ದಾಖಲಿಸಿದ್ದು 23 (ಶೇ 0.6) ಪ್ರಕರಣಗಳನ್ನು ಮಾತ್ರ.
ಸಾರ್ವಜನಿಕರ ದೂರುಗಳು, ಮಾಧ್ಯಮಗಳ ವರದಿ:
ಅಪರಾಧ ಚಟುವಟಿಕೆಗಾಗಿ ಹಣ ಅಕ್ರಮವಾಗಿ ಸಂಗ್ರಹಿಸುವುದರ (predcate offences) ಬಗ್ಗೆ ನಿಗಾ ವಹಿಸುವುದು ಇ.ಡಿ.ಯ ಬಹುಮುಖ್ಯ ಜವಾಬ್ದಾರಿಗಳಲ್ಲಿ ಒಂದು. ಮಾದಕ ವಸ್ತು ಕಳ್ಳಸಾಗಣೆಯಂಥ ದಂಧೆಗಳಲ್ಲಿ ದೊಡ್ಡ ಮೊತ್ತದ ಹಣ ಚಲಾವಣೆಯಾಗುತ್ತದೆ. ಅದು ಮೂರು ಹಂತಗಳಲ್ಲಿ ನಡೆಯುತ್ತದೆ.
ಶಿಕ್ಷೆಯಾದ ಪ್ರಕರಣಗಳು ಕಡಿಮೆ
ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ ಅಡಿಯಲ್ಲಿ ಇ.ಡಿ ದಾಖಲಿಸಿಕೊಳ್ಳು ತ್ತಿರುವ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಹೆಚ್ಚಾಗುತ್ತಿದ್ದರೂ ಪ್ರಾಸಿಕ್ಯೂಷನ್‌ಗೆ ದೂರು ಸಲ್ಲಿಸಿರುವ ಪ್ರಕರಣಗಳು, ಆರೋಪ ಸಾಬೀತಾದ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ. 2018ರಿಂದ 2023ರ ಅಕ್ಟೋಬರ್‌ ತಿಂಗಳ ನಡುವೆ, ಇ.ಡಿ ದಾಖಲಿಸಿರುವ 4,163 ಪ್ರಕರಣಗಳಲ್ಲಿ ವಿಚಾರಣೆ ಆರಂಭವಾದ ಪ್ರಕರಣಗಳ ಪ್ರಮಾಣ ಶೇ 20ರಷ್ಟು ಮಾತ್ರ (864) ಇದೆ. 28 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ. ಒಂದು ಪ್ರಕರಣ ಖುಲಾಸೆಗೊಂಡಿದೆ.
ಕೇಂದ್ರದ ಕೈಗೊಂಬೆಯೇ?
ಕೇಂದ್ರದ ಎನ್‌ಡಿಎ ಸರ್ಕಾರವು ವಿರೋಧ ಪಕ್ಷಗಳ ನಾಯಕರನ್ನು ಹಣಿಯಲು ಜಾರಿ ನಿರ್ದೇಶನಾಲಯವನ್ನು ಬಳಸಿಕೊಳ್ಳುತ್ತಿದೆ ಎಂಬ ಆರೋಪವನ್ನು ವಿರೋಧ ಪಕ್ಷಗಳ ಮುಖಂಡರು ಮಾಡುತ್ತಲೇ ಬಂದಿದ್ದಾರೆ. ಸ್ವಾಯತ್ತ ತನಿಖಾ ಸಂಸ್ಥೆಗಳಾದ ಇ.ಡಿ, ಸಿಬಿಐಗಳನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡುತ್ತಿದೆ ಎಂದು ಆರೋಪಿಸಿ 14 ರಾಜಕೀಯ ಪಕ್ಷಗಳು ಸುಪ್ರೀಂ ಕೋರ್ಟ್‌ನ ಕದವನ್ನೂ ತಟ್ಟಿದ್ದವು. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿರೋಧ ಪಕ್ಷಗಳ ಹಲವು ನಾಯಕರ ವಿರುದ್ಧ ಇ.ಡಿ ಪ್ರಕರಣ ದಾಖಲಿಸಿಕೊಂಡಿದೆ. ಕೆಲವರನ್ನು ಬಂಧಿಸಿದೆ. ಇದಕ್ಕೆ ಇತ್ತೀಚಿನ ಉದಾಹರಣೆ ದೆಹಲಿಯ ಮಾಜಿ ಮುಖ್ಯಮಂತ್ರಿ, ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌. ಇ.ಡಿ ಪ್ರಕರಣ ಎದುರಿಸಿದ ಮತ್ತು ಬಂಧನಕ್ಕೆ ಒಳಗಾದ ಬಿಜೆಪಿ/ಎನ್‌ಡಿಎ ನಾಯಕರ ಸಂಖ್ಯೆ ವಿರಳ. ವಿರೋಧ ಪಕ್ಷದಲ್ಲಿದ್ದುಕೊಂಡು ಇ.ಡಿ ಪ್ರಕರಣದಲ್ಲಿ ಸಿಲುಕಿದ ನಾಯಕರು, ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡ ನಂತರ ಅವರ ವಿರುದ್ಧದ ಪ್ರಕರಣಗಳ ತನಿಖೆ ಮೊಟಕುಗೊಂಡಿರುವುದಕ್ಕೆ ಹಲವು ಉದಾಹರಣೆಗಳು ಸಿಗುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT