ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ಆಳ–ಅಗಲ | ಕರ್ನಾಟಕದ ಕ್ರಿಕೆಟ್ ಕಿರೀಟಕ್ಕೆ ಸುವರ್ಣ ಸಂಭ್ರಮ
ಆಳ–ಅಗಲ | ಕರ್ನಾಟಕದ ಕ್ರಿಕೆಟ್ ಕಿರೀಟಕ್ಕೆ ಸುವರ್ಣ ಸಂಭ್ರಮ
Published 22 ಮಾರ್ಚ್ 2024, 23:31 IST
Last Updated 22 ಮಾರ್ಚ್ 2024, 23:31 IST
ಅಕ್ಷರ ಗಾತ್ರ
ಆ ಕಾಲದಲ್ಲಿ ಕ್ರಿಕೆಟ್ ಆಡುವವರು ಮತ್ತು ನೋಡುವವರಿಬ್ಬರಿಗೂ ಇದ್ದುದು ಒಂದೇ ಭಾವ– ಅದು ಪ್ರೀತಿಯಷ್ಟೇ. ಅಂತಹ ಕಾಲಘಟ್ಟದಲ್ಲಿ ಎರ‍್ರಪಳ್ಳಿ ಪ್ರಸನ್ನ ನಾಯಕತ್ವದ ತಂಡವು ಕರ್ನಾಟಕಕ್ಕೆ ಮೊಟ್ಟಮೊದಲ ರಣಜಿ ಟ್ರೋಫಿ ಗೆದ್ದುಕೊಟ್ಟ ಸಾಧನೆಗೆ ಈಗ ಚಿನ್ನದ ಸಂಭ್ರಮ. 1974 ಮಾರ್ಚ್ 23ರಿಂದ 27ರವರೆಗೆ ರಾಜಸ್ಥಾನದ ಎದುರು ಜೈಪುರದಲ್ಲಿ ನಡೆದ ಫೈನಲ್‌ನಲ್ಲಿ ತಂಡವು ಅಮೋಘ ಜಯ ಸಾಧಿಸಿತ್ತು. ಭಾರತ ತಂಡದಲ್ಲಿ ಆಡುತ್ತಿದ್ದ ಐವರು ಖ್ಯಾತನಾಮರೊಂದಿಗೆ ಇದ್ದ ಇನ್ನುಳಿದ ಪ್ರತಿಭಾವಂತರೂ ಈ ಜಯಕ್ಕೆ ತಮ್ಮದೇ ಆದ ಕಾಣಿಕೆ ನೀಡಿದ್ದರು. ಎಲ್ಲರೂ ತಂಡವಾಗಿ ಆಡಿದ ಫಲವಾಗಿ ಪ್ರಶಸ್ತಿ ದಕ್ಕಿತು.

‘ಜಯ–ವಿಜಯ ಜತೆಯಾಟ’

ಆ ದಿನವನ್ನು ಮರೆಯಲಾಗದು. ಜೈಪುರದಲ್ಲಿ ರಣಜಿ ಟ್ರೋಫಿ ಜಯಿಸಿದ ನಂತರ ರೈಲಿನಲ್ಲಿ ದೀರ್ಘ ಪ್ರಯಾಣ ಮಾಡಿ ಬೆಂಗಳೂರು ರೈಲು ನಿಲ್ದಾಣಕ್ಕೆ ತಲುಪಿದಾಗ ಜನ ಕಿಕ್ಕಿರಿದು ಸೇರಿದ್ದರು. ಆ ಜನರ ನಡುವೆ ಇದ್ದ ನನ್ನ ಕುಟುಂಬದ ಸದಸ್ಯರನ್ನು ಭೇಟಿಯಾಗಲೂ ಸಾಧ್ಯವಾಗಲಿಲ್ಲ. ಮೇಯರ್ ನಾಗಣ್ಣ ಅವರು ಬಂದು ನಮ್ಮನ್ನು ಗೌರವಿಸಿದ್ದರು. ಕೆಎಸ್‌ಸಿಎ, ಮೈಸೂರು ಸೇರಿದಂತೆ ಹಲವೆಡೆ ಪಾರ್ಟಿಗಳು ಇದ್ದವು. ಮೂರು ದಿನಗಳ ನಂತರವೇ ಮನೆಯವರೊಂದಿಗೆ ಮಾತನಾಡಲು ಸಾಧ್ಯವಾಗಿದ್ದು.

ರಣಜಿ ಟ್ರೋಫಿ ಟೂರ್ನಿ ಶುರುವಾಗಿ ನಾಲ್ಕು ದಶಕಗಳ ನಂತರ ಮೊದಲ ಬಾರಿಗೆ ಜಯಿಸಿದ್ದ ಟ್ರೋಫಿ ಅದಾಗಿದ್ದರಿಂದ ಈ ರೀತಿಯ ಉತ್ಸವ ಮನೆ ಮಾಡಿತ್ತು. ಅಲ್ಲದೇ ಆ ಟೂರ್ನಿಯೂ ನಮಗೆ ವಿಶೇಷವಾದದ್ದು. ಎಲ್ಲಕ್ಕಿಂತ ಮುಖ್ಯವಾಗಿ ಸೆಮಿಫೈನಲ್‌ನಲ್ಲಿ ಬಲಾಢ್ಯ ಬಾಂಬೆ (ಮುಂಬೈ) ತಂಡವನ್ನು ಮಣಿಸಿದ್ದು ಮತ್ತು ಫೈನಲ್‌ನಲ್ಲಿ ರಾಜಸ್ಥಾನವನ್ನು ಮಣಿಸಿದ್ದು ಸಾಹಸಗಾಥೆಗಳೇ ಆಗಿವೆ.

ವೈಯಕ್ತಿಕವಾಗಿ ನನಗೆ ರಾಜಸ್ಥಾನ ಎದುರಿನ ಫೈನಲ್‌ನಲ್ಲಿ ಎರಡೂ ಇನಿಂಗ್ಸ್‌ಗಳಲ್ಲಿ ಅರ್ಧಶತಕ ಗಳಿಸಿದ್ದು ಹೆಮ್ಮೆಯ ಸಂಗತಿ. ಫೈನಲ್‌ಗೂ ಮುನ್ನ ರಾಜಸ್ಥಾನದ ಸ್ಪಿನ್ನರ್ ಸಲೀಂ ದುರಾನಿ ಅವರು ಗಾಯಗೊಂಡಿದ್ದರು. ಆದರೂ ಅವರನ್ನು ನಾಯಕ ಹನುಮಂತ್ ಸಿಂಗ್ ಅವರು ಆಡಿಸಿದರು. ಅಲ್ಲದೇ ವಿಶಿ (ಜಿ.ಆರ್.ವಿಶ್ವನಾಥ್) ಹಾಗೂ ಬೃಜೇಶ್ ವಿಕೆಟ್‌ಗಳನ್ನು ಗಳಿಸಿಕೊಡುವ ಹೊಣೆಯನ್ನೂ ಅವರಿಗೆ ನೀಡಿದ್ದರು. ಇಡೀ ಟೂರ್ನಿಯಲ್ಲಿ ವಿಶಿ ಮತ್ತು ಬೃಜೇಶ್ ಅವರಿಬ್ಬರೂ ಬೌಲರ್‌ಗಳಿಗೆ ಸಿಂಹಸ್ವಪ್ನರಾಗಿದ್ದರು. ದುರಾನಿ ಅವರು ವಿಶಿಯ ವಿಕೆಟ್‌ ಬೇಗನೆ ಗಳಿಸುವಲ್ಲಿ ಯಶಸ್ವಿಯಾಗಿದ್ದರು. ಬೃಜೇಶ್ ಅವರನ್ನೂ ಸಿ.ಜಿ. ಜೋಶಿ ಔಟ್ ಮಾಡಿದರು. ವಿ.ಎಸ್. ವಿಜಯಕುಮಾರ್ (66 ರನ್) ಅರ್ಧಶತಕ ಗಳಿಸಿದ್ದರು. ಆದರೂ ತಂಡವು 99 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ಆಗ ನಾನು ಮತ್ತು ವಿಜಯಕೃಷ್ಣ ಜೊತೆಯಾಟದಲ್ಲಿ 76 ರನ್ ಸೇರಿಸಿದೆವು. ಆಗ ಪ್ರಜಾವಾಣಿ ಪತ್ರಿಕೆಯಲ್ಲಿ ‘ಜಯ–ವಿಜಯ ಜೊತೆಯಾಟ’ ಎಂಬ ಶೀರ್ಷಿಕೆಯಲ್ಲಿ ವರದಿ ಬಂದಿತ್ತು. ಶಾಲೆಯ ದಿನಗಳಿಂದಲೂ ನಾನು–ವಿಜಯಕೃಷ್ಣ ಜೊತೆಯಾಗಿ ಕೂಡಿ, ಆಡಿ ಬೆಳೆದವರು. ತಂಡವು 256 ರನ್ ಗಳಿಸಿತು. ಆ ದಿನಗಳಲ್ಲಿ ಅತ್ಯಂತ ಬಲಿಷ್ಠ ಬೌಲಿಂಗ್ ವಿಭಾಗ ನಮ್ಮದಾಗಿತ್ತು. ವಿ.ಎಸ್. ವಿಜಯಕುಮಾರ್ (4ವಿಕೆಟ್), ಪ್ರಸನ್ನ (4) ಹಾಗೂ ಚಂದ್ರಾ (2) ಮಿಂಚಿದರು. ಇದರಿಂದಾಗಿ ರಾಜಸ್ಥಾನ ತಂಡವು ದೊಡ್ಡ ಹಿನ್ನಡೆ ಅನುಭವಿಸಿತು. ಆದರೆ ಎರಡನೇ ಇನಿಂಗ್ಸ್‌ನಲ್ಲಿ ಮರುಹೋರಾಟಕ್ಕೆ ನಿಂತ ಆತಿಥೇಯ ತಂಡದಬೌಲಿಂಗ್‌ಗೆ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಬೇಗನೇ ಔಟಾದರು. ಈ ಹಂತದಲ್ಲಿ ನಾನು ಮತ್ತು ಕಿರ್ಮಾನಿ ಸೇರಿ 114 ರನ್‌ಗಳ ಜೊತೆಯಾಟವಾಡಿದರು. ಇದರಿಂದಾಗಿ ರಾಜಸ್ಥಾನಕ್ಕೆ ದೊಡ್ಡ ಗೆಲುವಿನ ಗುರಿ (313 ರನ್) ನೀಡಿದೆವು.

ನಂತರ ಚಂದ್ರ ಮತ್ತು ಪ್ರಸನ್ನ ಜೋಡಿಯ ಸ್ಪಿನ್ ಮೋಡಿಯ ಮುಂದೆ ರಾಜಸ್ಥಾನದ ಬ್ಯಾಟರ್‌ಗಳ ಅಟ ನಡೆಯಲಿಲ್ಲ. ತಂಡದಲ್ಲಿ ಪರಸ್ಪರ ವಿಶ್ವಾಸ, ಪ್ರೀತಿ ಮತ್ತು ಹೊಂದಾಣಿಕೆಯ ಗುಣಗಳಿಗೆ ಅಂದು ಯಶಸ್ಸು ಒಲಿದಿತ್ತು. ಕಳೆದ ಐವತ್ತು ವರ್ಷಗಳಲ್ಲಿ ಕ್ರಿಕೆಟ್ ಬಹಳಷ್ಟು ಬದಲಾಗಿದೆ. ಆಗ ನಾವು ತಂಡಕ್ಕೆ ಆಡುತ್ತಿದ್ದೆವು. ಈಗ ದುಡ್ಡಿಗೆ ಮಹತ್ವ ಇದೆ. ಆಟಗಾರರಿಗೆ ಉತ್ತಮ ದುಡ್ಡು ಸಿಗುತ್ತಿದೆ. ನಾವು ಕೆಲವು ಬಾರಿ ₹10 ಸಂಭಾವನೆ ಪಡೆದದ್ದೂ ಇದೆ.

ಕರ್ನಾಟಕವು ಒಟ್ಟು ಮೂರು ಬಾರಿ ರಣಜಿ ಟ್ರೋಫಿ ಜಯಿಸಿದಾಗಲೂ ನಾನು ಆಡಿದ್ದೆ. ಅದು ತೃಪ್ತಿದಾಯಕ.

– ಎ.ವಿ. ಜಯಪ್ರಕಾಶ್

‘ಮುಂಬೈ ಓಟಕ್ಕೆ ಪ್ರಸನ್ನ ಕಡಿವಾಣ’

ಸತತ 15 ವರ್ಷಗಳವರೆಗೆ ರಣಜಿ ಟ್ರೋಫಿ ಜಯಿಸಿದ್ದ ಬಾಂಬೆ (ಮುಂಬೈ) ತಂಡದ ಓಟಕ್ಕೆ ತಡೆ ಬಿದ್ದಿದ್ದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ. ಸುನಿಲ್ ಗಾವಸ್ಕರ್, ಅಜಿತ್ ವಾಡೇಕರ್, ಏಕನಾಥ್ ಸೋಳ್ಕರ್ ಅವರಂತಹ ಖ್ಯಾತನಾಮ ಆಟಗಾರರು ಇದ್ದ ತಂಡವನ್ನು ಸೋಲಿಸುವುದು ಹೇಗೆಂದು ತೋರಿಸಿಕೊಟ್ಟ ಶ್ರೇಯ ಎರ‍್ರಪಳ್ಳಿ ಪ್ರಸನ್ನ ಅವರ ಬಳಗಕ್ಕೇ ಸಲ್ಲಬೇಕು. 

ಅದರಲ್ಲೂ ಗಾವಸ್ಕರ್ ಅವರನ್ನು ಔಟ್ ಮಾಡಿದ ಪ್ರಸನ್ನ ಅವರ ‘ಮ್ಯಾಜಿಕ್ ಬಾಲ್’ ಹಾಗೂ ಅಜಿತ್ ವಾಡೇಕರ್ ಅವರ ರನೌಟ್‌ಗೆ ಕಾರಣವಾದ ಸುಧಾಕರ್ ರಾವ್‌ ಅವರ ಫೀಲ್ಡಿಂಗ್ ಎಂದೆಂದಿಗೂ ನೆನಪಿನಲ್ಲಿ ಉಳಿಯುತ್ತವೆ. ಅಲ್ಲದೇ ಎರಡು ಜೊತೆಯಾಟಗಳು ಹಾಗೂ ಎರಡು ಶತಕಗಳೂ ಪ್ರಮುಖವಾಗಿವೆ. 

2ನೇ ವಿಕೆಟ್ ಜೊತೆಯಾಟದಲ್ಲಿ ಜಿ. ಆರ್. ವಿಶ್ವನಾಥ್ (162) ಹಾಗೂ ಸಂಜಯ್ ದೇಸಾಯಿ 105 ರನ್ ಸೇರಿಸಿದರು. ಮೂರನೇ ವಿಕೆಟ್ ಪಾಲುದಾರಿಕೆಯಲ್ಲಿ ವಿಶ್ವನಾಥ್ ಮತ್ತು ಪಟೇಲ್ (106) ಅವರು 166 ರನ್‌ಗಳನ್ನು ಸೇರಿಸಿದರು. ಬಾಂಬೆ ತಂಡವು ಬಹಳ ಎಚ್ಚರಿಕೆಯಿಂದ ಇನಿಂಗ್ಸ್ ಆರಂಭಿಸಿತು. 30 ರನ್ ಗಳಿಸಿದ್ದ ಗಾವಸ್ಕರ್ ಅವರು, ಪ್ರಸನ್ನ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಆ ಎಸೆತಕ್ಕೆ ಸ್ವತಃ ಗಾವಸ್ಕರ್ ಅವರೇ ಅಚ್ಚರಿಗೊಂಡಿದ್ದರು. ಈ ಎಸೆತವನ್ನು ಹೈದರಾಬಾದ್ ಆಫ್‌ಸ್ಪಿನ್ನರ್ ವೆಂಕಟರಾಮನ್ ರಾಮನಾರಾಯಣ ಅವರು, ‘ಮ್ಯಾಜಿಕ್ ಬಾಲ್‘ ಎಂದು ಬಣ್ಣಿಸಿದ್ದರು. ಸ್ವತಃ ಗಾವಸ್ಕರ್ ಅವರೇ ಮೈದಾನದಿಂದ ಹೊರನಡೆಯುವಾಗ ತಮ್ಮ ಒಂದು ಕೈಯಿಂದ ಬ್ಯಾಟ್‌ ತಟ್ಟುತ್ತ (ಚಪ್ಪಾಳೆ) ಮೆಚ್ಚುಗೆ ವ್ಯಕ್ತಪಡಿಸಿದ್ದರಂತೆ. ಮೂರನೇ ವಿಕೆಟ್ ಜೊತೆಯಾಟದಲ್ಲಿ ವಾಡೇಕರ್ ಮತ್ತು ಮಂಕಡ್ 121 ರನ್ ಸೇರಿಸಿದ್ದರು. 62 ರನ್ ಗಳಿಸಿದ್ದ ವಾಡೇಕರ್ ಅವರನ್ನು ರನ್‌ಔಟ್ ಮಾಡುವಲ್ಲಿ ಸುಧಾಕರ್ ರಾವ್ ಚುರುಕುತನ ತೋರಿದ್ದು ಪಂದ್ಯಕ್ಕೆ ತಿರುವು ನೀಡಿತು. ಪ್ರಸನ್ನ ಅವರ ಇನ್ನೊಂದು ಓವರ್‌ನಲ್ಲಿ ಮಂಕಡ್ ಸ್ವೀಪ್ ಮಾಡಿದ ಚೆಂಡನ್ನು ಎ.ವಿ. ಜಯಪ್ರಕಾಶ್ ಕ್ಯಾಚ್ ಮಾಡಿದರು. ಮುಂಬೈ 307ಕ್ಕೆ ಎಲ್ಲ ವಿಕೆಟ್ ಕಳೆದುಕೊಂಡು ಇನಿಂಗ್ಸ್ ಹಿನ್ನಡೆ ಅನುಭವಿಸಿತು. ಪ್ರಸನ್ನ ಐದು ಮತ್ತು ಚಂದ್ರಶೇಖರ್ 4 ವಿಕೆಟ್ ಗಳಿಸಿದರು. ಎರಡನೇ ಇನಿಂಗ್ಸ್‌ನಲ್ಲಿ ಬೃಜೇಶ್ ಮತ್ತು ಸುಧಾಕರ್ ತಲಾ ಅರ್ಧಶತಕ ಗಳಿಸಿದರು. ಕರ್ನಾಟಕವು 8 ವಿಕೆಟ್‌ಗಳಿಗೆ 279 ರನ್ ಗಳಿಸಿತು. ಮುಂಬೈಗೆ 358 ರನ್‌ಗಳ ಕಠಿಣ ಗುರಿಯೊಡ್ಡಿತು.  ವಿಕೆಟ್ ನಷ್ಟವಿಲ್ಲದೇ 84 ರನ್ ಗಳಿಸಿದ ಮುಂಬೈ ರಣಜಿ ಟೂರ್ನಿಯಿಂದ ಹೊರಬಿತ್ತು. ಪಂದ್ಯ ಡ್ರಾ ಆಯಿತು.

– ಎಚ್‌.ಆರ್. ಗೋಪಾಲಕೃಷ್ಣ, (ಕ್ರಿಕೆಟ್ ಅಂಕಿಅಂಶ ತಜ್ಞರು)

‘ಅವಿಸ್ಮರಣೀಯ’

ಸೆಮಿಫೈನಲ್‌ನಲ್ಲಿ ಪ್ರಸನ್ನ ಅವರದ್ದು ಗಾವಸ್ಕರ್ ಔಟ್ ಮಾಡಿದ ಎಸೆತವಷ್ಟೇ ಅಲ್ಲ. ಅವರ ಒಂದು ಸ್ಪೆಲ್ ಇಡೀ ಪಂದ್ಯವನ್ನೇ ಬದಲಿಸಿಬಿಟ್ಟಿತ್ತು. ಅದ್ಭುತ ನಾಯಕತ್ವ ಮತ್ತು ಅಮೋಘ ಬೌಲಿಂಗ್‌ ಅವರದ್ದು.  ತಂಡವಾಗಿ ಆಡುವ ಗುಣ ಎಲ್ಲರಲ್ಲಿಯೂ ಇತ್ತು. ಹಣ, ಟಿವಿ ಪ್ರಸಾರ ಇರದ ದಿನಗಳು ಅವು. ರೈಲಿನಲ್ಲಿ ಪ್ರಯಾಣ ಮಾಡಬೇಕಿತ್ತು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ನನ್ನ ಆರಂಭದ ದಿನಗಳಾಗಿದ್ದವು. ದಿಗ್ಗಜ ಆಟಗಾರರೊಂದಿಗೆ ಆಡಿದ್ದು ಅವಿಸ್ಮರಣೀಯ.

– ಸಂಜಯ್ ದೇಸಾಯಿ

‘ಅದ್ವಿತೀಯ ತಂಡ’

50 ವರ್ಷಗಳು ಕಳೆದುಹೋಗಿದ್ದೇ ಗೊತ್ತಾಗಲಿಲ್ಲ. ನಾನು 12ನೇ ಆಟಗಾರನಾಗಿದ್ದೆ. ನಮ್ಮ ತಂಡದಲ್ಲಿದ್ದವರ ಪೈಕಿ ವಿಜಯಕೃಷ್ಣ, ವಿಜಯಕುಮಾರ್ ಹಾಗೂ ಕೆ. ಲಕ್ಷ್ಮಣ ನಮ್ಮೊಂದಿಗೆ ಇಲ್ಲ ಇವತ್ತು. ಬಳಗದಲ್ಲಿ ಐದು ಜನ ಭಾರತದ ಆಟಗಾರರು ತಂಡದಲ್ಲಿದ್ದರು. ಉಳಿದವರೂ ಪ್ರತಿಭಾವಂತರು. ಪಿಚ್‌ ನೋಡಲು ಯಾರೂ ಹೋಗು ತ್ತಿರಲಿಲ್ಲ. ಮೂರು ಓವರ್ ಆಡ್ರಿ, ಆಮೇಲೆ ಗೊತ್ತಾಗುತ್ತೆ ಪಿಚ್ ಹೇಗಿದೆ ಎಂದು ನಾಯಕ ಪ್ರಸನ್ನ ಹೇಳುತ್ತಿದ್ದರು. ಅವರವರ ಹೊಣೆಯನ್ನು ಎಲ್ಲರೂ ಅರಿತಿದ್ದರು. ಗುಂಟೂರು ಪಂದ್ಯ ಆಡಿದಾಗ ನನಗೆ ₹50 ಸಂಭಾವನೆ ಸಿಕ್ಕಿತ್ತು. ಸಿದ್ಧರಾಮ

– ಸಿದ್ದರಾಮು

‘ಪ್ರಸನ್ನ ಎಸೆತ ಮರೆಯಲಾಗದು’

ನಾನು 11ರ ಬಳಗದಲ್ಲಿ ಆಡಲಿಲ್ಲ. ಆದರೆ ಪ್ರಸನ್ನ ಅವರು ಸೆಮಿಫೈನಲ್‌ನಲ್ಲಿ ಗಾವಸ್ಕರ್ ಅವರನ್ನು ಔಟ್ ಮಾಡಿದ್ದು ಕಣ್ಣಿಗೆ ಕಟ್ಟಿದ ಹಾಗೆ ಇದೆ. ಅದೊಂದು ಅಮೋಘವಾದ ಎಸೆತ. ಬಾಂಬೆ ಮೇಲೆ ಗೆದ್ದಾಗ ಟ್ರೋಫಿ ಜಯಿಸಿದಷ್ಠೇ ಖುಷಿ. ನಾನು ಆಗಷ್ಟೇ ತಂಡದಲ್ಲಿ ಸ್ಥಾನ ಪಡೆದಿದ್ದೆ. ಎಂತಹ ದೊಡ್ಡ ಸಂಭ್ರಮಾಚರಣೆ ನಡೆದಿತ್ತು ಎಂದರೆ, ಹೇಳಲು ಪದಗಳು ಸಾಲದು ಅಂಥ ದೊಡ್ಡ ಸಾಧನೆ. ಫೈನಲ್‌ನಲ್ಲಿಯೂ ಅಷ್ಟೇ. ತಂಡವು ಅಮೋಘ ಆಟವಾಡಿತ್ತು. 

– ಎಸ್‌. ವಿಜಯಪ್ರಕಾಶ್(ಮೈಸೂರು)

‘ಅಜಿತ್ ರನೌಟ್’

ನಾಯಕ ಪ್ರಸನ್ನ ಅವರು ನನ್ನನ್ನು ಪಾಯಿಂಟ್ ಬಳಿ ಫೀಲ್ಡಿಂಗ್‌ಗೆ ನಿಯೋಜಿಸಿದ್ದರು. ವಾಡೇಕರ್ ಮತ್ತು ಮಂಕಡ್ ಬ್ಯಾಟಿಂಗ್ ಮಾಡುತ್ತಿದ್ದರು. ಪಾಲುದಾರಿಕೆ ಬೆಳೆಯುತ್ತಲೇ ಇತ್ತು. ನಾವು ಒಂದು ಅವಕಾಶಕ್ಕಾಗಿ ಕಾಯುತ್ತಿದ್ದೆವು. ವಾಡೇಕರ್ ಒಂದು ರನ್ ಪಡೆಯಲು ಧಾವಿಸಿದರು. ಆ ಸಂದರ್ಭದಲ್ಲಿ  ನಾನು ರಭಸದಿಂದ ಧಾವಿಸಿದೆ. ಚೆಂಡನ್ನು ತಡೆದು ಎತ್ತಿಕೊಂಡೆ. ವಾಡೇಕರ್ ರನ್‌ಔಟ್‌ ಮಾಡಲು ಕಾರಣನಾದೆ. ಪಂದ್ಯಕ್ಕೆ ತಿರುವು ನೀಡುವಲ್ಲಿ ಅದು ಪ್ರಮುಖವಾಯಿತೆಂಬುದೇ ಹೆಮ್ಮೆ.  

– ಸುಧಾಕರ್ ರಾವ್

‘ಜಯ ತಂದ ಪ್ರಗತಿ’

ಆ ಟೂರ್ನಿಯ ಮೊದಲ ಪಂದ್ಯ ಕೇರಳದ ವಿರುದ್ಧ ನಡೆದಿತ್ತು. ಅದರಲ್ಲಿ ಆಡಿದ್ದೆ. ಟೈಫಾಯ್ಡ್ ಆಗಿದ್ದರಿಂದ ಫೈನಲ್‌ಗೆ ಹೋಗಲಿಲ್ಲ. ಆದರೆ ಆ ಟ್ರೋಫಿ ಜಯದಿಂದಾಗಿ ಕರ್ನಾಟಕ ಕ್ರಿಕೆಟ್ ಬಹಳ ದೊಡ್ಡ ಉನ್ನತಿ ಕಂಡಿತು. ವಯೋಮಿತಿಯ ಕ್ರಿಕೆಟ್ ಆರಂಭವಾಯಿತು. ರಾಜ್ಯದಲ್ಲಿ ದೊಡ್ಡ ದೊಡ್ಡ ಟರ್ಫ್ ಮೈದಾನಗಳು ನಿರ್ಮಾಣವಾಗಿವೆ. ಭಾರತ ತಂಡವನ್ನು ನಿರಂತರವಾಗಿ ರಾಜ್ಯದಿಂದ ಒಬ್ಬರಾದರೂ ಪ್ರತಿನಿಧಿಸುತ್ತಿದ್ದಾರೆ. ನಾನು ಆಯ್ಕೆಗಾರನಾಗಿ, ಕೋಚ್ ಆಗಿ ಸೇವೆ ಸಲ್ಲಿಸಿದೆ. 

– ಅರುಣಕುಮಾರ್

‘ಪಿಚ್‌ಗೆ ಕಾವಲು’

ಆ ಟೂರ್ನಿಯ ಸೆಮಿಫೈನಲ್‌ನಲ್ಲಿ ಬಲಿಷ್ಠ ಮುಂಬೈ ತಂಡವನ್ನು ಸೋಲಿಸಿದ್ದ ಕರ್ನಾಟಕವು ರಣಜಿ ಟ್ರೋಫಿ ಗೆದ್ದೇ ಗೆಲ್ಲುತ್ತದೆಂಬ ವಿಶ್ವಾಸ ನಮ್ಮದಾಗಿತ್ತು. ನಾನು,  ವಿ.ವೈ. ರಾಮನರಸಿಂಹ, ರಾಜಾರಾವ್, ಕುಮಾರಿ, ರಾಮಕೃಷ್ಣ ಹಾಗೂ ಶಂಕರ್ ಸೇರಿ ಜೈಪುರಕ್ಕೆ ಹೋಗಿದ್ದೆವು. ಪಂದ್ಯದ ಹಿಂದಿನ ದಿನ ಅಲ್ಲಿ ಗಾಳಿ ಜೋರಾಗಿತ್ತು. ಕ್ರೀಡಾಂಗಣದಲ್ಲಿ ಸಿದ್ಧವಾಗಿದ್ದ ಪಿಚ್‌ ಗುಣಮಟ್ಟವನ್ನು ಬದಲಿಸುವ ಅನುಮಾನ ಬಲವಾಗಿತ್ತು. ನಾವು ಇಡೀ ರಾತ್ರಿ ಮೈದಾನದಲ್ಲಿಯೇ  ಕುಳಿತು ಪಿಚ್‌ ಕಾದಿದ್ದೆವು.

– ಟಿ. ಸುರೇಶ್, ಅಭಿಮಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT