ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ-ಅಗಲ: ಸಹಕಾರ ಕಾಯ್ದೆಗೆ ತಿದ್ದುಪಡಿ; ಆಕ್ಷೇಪಗಳನ್ನು ಬದಿಗೊತ್ತಿ ಮಸೂದೆ ಅಂಗೀಕಾರ
ಆಳ-ಅಗಲ: ಸಹಕಾರ ಕಾಯ್ದೆಗೆ ತಿದ್ದುಪಡಿ; ಆಕ್ಷೇಪಗಳನ್ನು ಬದಿಗೊತ್ತಿ ಮಸೂದೆ ಅಂಗೀಕಾರ
Published 2 ಆಗಸ್ಟ್ 2023, 23:28 IST
Last Updated 2 ಆಗಸ್ಟ್ 2023, 23:28 IST
ಅಕ್ಷರ ಗಾತ್ರ

ದೇಶದ ಬೇರೆ–ಬೇರೆ ರಾಜ್ಯಗಳ ಸಹಕಾರ ಸಂಘಗಳನ್ನು ಬಹುರಾಜ್ಯ ಸಹಕಾರ ಸಂಘಗಳ ಜತೆಗೆ ವಿಲೀನ ಮಾಡಲು ಅವಕಾಶ ಮಾಡಿಕೊಡುವ ಬಹುರಾಜ್ಯ ಸಹಕಾರ ಸಂಘ (ತಿದ್ದುಪಡಿ) ಮಸೂದೆ–2022ಕ್ಕೆ ರಾಜ್ಯಸಭೆ ಈಚೆಗೆ ಅನುಮೋದನೆ ನೀಡಿದೆ. ಲೋಕಸಭೆಯಲ್ಲಿ ಈ ಮಸೂದೆಗೆ ಮಾರ್ಚ್‌ನಲ್ಲಿಯೇ ಅನುಮೋದನೆ ದೊರೆತ್ತಿತ್ತು. ಆದರೆ ಅದಕ್ಕೂ ಮುನ್ನ ಮಸೂದೆ ಮೇಲೆ ವಿಸ್ತೃತ ಚರ್ಚೆ ನಡೆದು, ಮಸೂದೆಯಲ್ಲೇ ಹಲವು ಬದಲಾವಣೆಗಳಿಗೆ ವಿರೋಧ ಪಕ್ಷಗಳು ಪಟ್ಟುಹಿಡಿದಿದ್ದವು. ಅದರ ಬೆನ್ನಲ್ಲೇ ಮಸೂದೆಯನ್ನು ಜಂಟಿ ಸದನ ಸಮಿತಿಗೆ ನೀಡಲಾಗಿತ್ತು. ಸದನ ಸಮಿತಿಯ ಸಭೆಯ ವೇಳೆ ಬಂದ ಆಕ್ಷೇಪಗಳನ್ನು ಬದಿಗೊತ್ತಿ, ಮಸೂದೆಯನ್ನು ಹೆಚ್ಚಿನ ಬದಲಾವಣೆ ಇಲ್ಲದೆ ಮಂಡಿಸಲು ಸಮಿತಿ ಶಿಫಾರಸು ಮಾಡಿತ್ತು

‘ಸಹಕಾರ ಕ್ಷೇತ್ರದಲ್ಲಿ ಶಿಸ್ತು ಮತ್ತು ಪಾರದರ್ಶಕತೆ ತರುತ್ತೇವೆ. ಇದಕ್ಕಾಗಿ ಸಹಕಾರ ಸಚಿವಾಲಯವನ್ನು ರಚಿಸಲಾಗುತ್ತಿದೆ’ ಎಂದು ಕೇಂದ್ರ ಸರ್ಕಾರವು ಈ ಹಿಂದೆ ಘೋಷಿಸಿತ್ತು. ಆ ಪ್ರಕಾರವಾಗಿ ಸಹಕಾರ ಸಚಿವಾಲಯವನ್ನು ಕೇಂದ್ರ ಸರ್ಕಾರ ರಚಿಸಿತ್ತು. ಅಮಿತ್ ಶಾ ಅವರು ಮೊದಲ ಸಹಕಾರ ಸಚಿವರಾದರು. ಅದರ ಬೆನ್ನಲ್ಲೇ ಸಹಕಾರ ಕ್ಷೇತ್ರದಲ್ಲಿ ವ್ಯಾಪಕ ಬದಲಾವಣೆ ತರಲು ಸಹಕಾರ ಸಚಿವಾಲಯವು ಮುಂದಾಯಿತು ಮತ್ತು ಅದಕ್ಕಾಗಿ ‘ಬಹುರಾಜ್ಯ ಸಹಕಾರ ಸಂಘ (ತಿದ್ದುಪಡಿ) ಮಸೂದೆ–2022’ನ್ನು ಲೋಕಸಭೆಯಲ್ಲಿ ಮಂಡಿಸಿತ್ತು. ಮಸೂದೆಯಲ್ಲಿದ್ದ ಹಲವು ಅಂಶಗಳಿಗೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿತ್ತು. 

ಸಹಕಾರವು ರಾಜ್ಯಪಟ್ಟಿಯಲ್ಲಿ ಬರುವ ವಿಚಾರ. ಅಂದರೆ, ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಾಜ್ಯಗಳಿಗೇ ಹೆಚ್ಚು ಅಧಿಕಾರವಿದೆ. ಆದರೆ ಕೇಂದ್ರದ ಮಟ್ಟದಲ್ಲಿ ಸಹಕಾರ ಸಚಿವಾಲಯವನ್ನು ರಚಿಸಿದ್ದು ಮತ್ತು ನಂತರ ಸಹಕಾರ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿದ್ದು, ರಾಜ್ಯಗಳ ಅಧಿಕಾರವನ್ನು ಕಸಿದುಕೊಳ್ಳುವ ಹುನ್ನಾರ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ ಆರೋಪಿಸಿತ್ತು. ಭಾರಿ ಗದ್ದಲದ ನಂತರ ಮಸೂದೆಯನ್ನು ಜಂಟಿ ಸದನ ಸಮಿತಿಯ ಪರಾಮರ್ಶೆಗೆ ನೀಡಲು ಕೇಂದ್ರ ಸರ್ಕಾರವು ಒಪ್ಪಿಕೊಂಡಿತ್ತು.

ಮೂಲ ಕಾಯ್ದೆ ಮತ್ತು ತಿದ್ದುಪಡಿ ಮಸೂದೆಯನ್ನು ಪರಿಶೀಲಿಸಿದ್ದ ಸಮಿತಿಯು ಸಂಬಂಧಿತ ಪ್ರಾಧಿಕಾರಗಳು, ಸಹಕಾರ ಸಂಘಗಳ ಅಭಿಪ್ರಾಯವನ್ನೂ ಕೇಳಿತ್ತು. ಮಸೂದೆಯಲ್ಲಿನ ಹಲವು ಅಂಶಗಳ ಬಗ್ಗೆ ಬಹುರಾಜ್ಯ ಸಹಕಾರ ಸಂಘಗಳು, ಬಹುರಾಜ್ಯ ಸಹಕಾರ ಬ್ಯಾಂಕ್‌ಗಳು ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ ಸಹ ಆಕ್ಷೇಪ ದಾಖಲಿಸಿದ್ದವು. ಜತೆಗೆ ಆ ಅಂಶಗಳನ್ನು ಕೈಬಿಡುವಂತೆ ಅಥವಾ ಬದಲಿಸುವಂತೆ ಒತ್ತಾಯಿಸಿದ್ದವು. ಆದರೆ, ಸಹಕಾರ ಸಚಿವಾಲಯವು ಆ ಎಲ್ಲಾ ಅಂಶಗಳು ಸರಿಯಾಗಿಯೇ ಇವೆ ಎಂದು ಪ್ರತಿಪಾದಿಸಿತ್ತು. ಆ ಆಕ್ಷೇಪಗಳನ್ನು ಪರಿಗಣಿಸದ ಜಂಟಿ ಸದನ ಸಮಿತಿಯು, ಸಚಿವಾಲಯದ ಪ್ರತಿಪಾದನೆಯನ್ನು ಅನುಮೋದಿಸಿತ್ತು. ಮಸೂದೆಯ ಹಲವು ಅಂಶಗಳು ಸಹಕಾರ ತತ್ವಗಳಿಗೆ ವಿರುದ್ಧವಾಗಿವೆ ಎಂದು ಹೇಳಿದ್ದ ಆಕ್ಷೇಪಗಳನ್ನೂ ಸಮಿತಿಯು ನಿರಾಕರಿಸಿತ್ತು. ಈಗ ಸಂಸತ್ತಿನ ಎರಡೂ ಸದನಗಳಲ್ಲಿ ಅನುಮೋದನೆ ಪಡೆದಿರುವ ಮಸೂದೆಗೆ, ರಾಷ್ಟ್ರಪತಿಯ ಅಂಕಿತ ದೊರೆಯುವುದಷ್ಟೇ ಉಳಿದಿದೆ. 

ಚುನಾವಣಾ ಪ್ರಾಧಿಕಾರ ರಚನೆ

ಮೂಲ ಕಾಯ್ದೆಯ 45ನೇ ಸೆಕ್ಷನ್‌: ಬಹುರಾಜ್ಯ ಸಹಕಾರ ಸಂಘಗಳ ಆಡಳಿತ ಮಂಡಳಿಗೆ ಚುನಾವಣೆ ನಡೆಸುವುದು, ಹಾಲಿ ಆಡಳಿತ ಮಂಡಳಿಯದ್ದೇ ಜವಾಬ್ದಾರಿ ಎಂದು ಮೂಲ ಕಾಯ್ದೆಯ 45ನೇ ಸೆಕ್ಷನ್‌ನಲ್ಲಿ ವಿವರಿಸಲಾಗಿದೆ. ಚುನಾವಣೆ ಹೇಗೆ ನಡೆಯಬೇಕು, ಚುನಾವಣೆ ನಡೆಸುವಲ್ಲಿ ಆಡಳಿತ ಮಂಡಳಿಯ ಜವಾಬ್ದಾರಿಗಳೇನು, ಇದಕ್ಕೆ ಸಂಬಂಧಿಸಿದ ಬೈಲಾಗಳ ವ್ಯಾಪ್ತಿ ಏನು ಎಂಬುದನ್ನು ಈ ಸೆಕ್ಷನ್‌ನಲ್ಲಿ ವಿವರಿಸಲಾಗಿದೆ.

ತಿದ್ದುಪಡಿ ಮಸೂದೆಯ 45ನೇ ಸೆಕ್ಷನ್‌: ಮೂಲ ಕಾಯ್ದೆಯ 45ನೇ ಸೆಕ್ಷನ್‌ ಅನ್ನು ತಿದ್ದುಪಡಿ ಮಸೂದೆಯಲ್ಲಿ ಸಂಪೂರ್ಣವಾಗಿ ಕೈಬಿಡಲಾಗಿದೆ. ಬದಲಿಗೆ 45, 45ಎ, 45ಬಿ, 45ಸಿ, 45ಡಿ, 45ಇ, 45ಎಫ್‌, 45ಜಿ, 45ಎಚ್‌, 45ಐ, 45ಜೆ, 45ಕೆ ಮತ್ತು 45ಎಲ್‌ ಎಂಬ 13 ಸೆಕ್ಷನ್‌ಗಳನ್ನು ಹೊಸದಾಗಿ ಸೇರಿಸಲಾಗಿದೆ.

ಈ ಎಲ್ಲಾ ಸೆಕ್ಷನ್‌ಗಳ ಪ್ರಕಾರ ಬಹುರಾಜ್ಯ ಸಹಕಾರ ಸಂಘಗಳ ಆಡಳಿತ ಮಂಡಳಿಗೆ ಚುನಾವಣೆ ನಡೆಸಲು ಕೇಂದ್ರ ಸರ್ಕಾರವು ರಾಷ್ಟ್ರಮಟ್ಟದಲ್ಲಿ ‘ಸಹಕಾರ ಚುನಾವಣಾ ಪ್ರಾಧಿಕಾರ’ವನ್ನು ಸ್ಥಾಪಿಸುವ ಅಧಿಕಾರ ಪಡೆಯುತ್ತದೆ. ಈ ಪ್ರಾಧಿಕಾರಕ್ಕೆ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಗರಿಷ್ಠ ಮೂವರು ಸದಸ್ಯರನ್ನು ನೇಮಕ ಮಾಡುವ ಅಧಿಕಾರ ಹಾಗೂ ಈ ಹುದ್ದೆಗಳಿಗೆ ಯಾರನ್ನು ನೇಮಕ ಮಾಡಬೇಕು ಎಂಬ ನಿಯಮಗಳನ್ನು ರೂಪಿಸುವ ಅಧಿಕಾರವೂ ಕೇಂದ್ರ ಸರ್ಕಾರಕ್ಕೆ ದೊರೆಯಲಿದೆ.

ಆಕ್ಷೇಪಗಳು: ಬಹುರಾಜ್ಯ ಸಹಕಾರ ಸಂಘಗಳ ಆಡಳಿತ ಮಂಡಳಿಗೆ, ಮಂಡಳಿಯೇ ಚುನಾವಣೆ ನಡೆಸಬೇಕು. ಅದರಲ್ಲಿ ಸರ್ಕಾರದ ಆಕ್ಷೇಪ ಇರಬಾರದು ಎಂಬುದು ಸಹಕಾರ ತತ್ವ. ಈಗ ಇದಕ್ಕಾಗಿ ಚುನಾವಣಾ ಪ್ರಾಧಿಕಾರವನ್ನು ರಚಿಸಿ, ಅದರ ಸಂಪೂರ್ಣ ಅಧಿಕಾರವನ್ನು ಕೇಂದ್ರ ಸರ್ಕಾರವು ತನ್ನಲ್ಲಿ ಇರಿಸಿಕೊಳ್ಳುವುದು ಸಹಕಾರ ತತ್ವ ಮತ್ತು ಮೌಲ್ಯಗಳಿಗೆ ವಿರುದ್ಧವಾದುದು. 45 ಮತ್ತು ಅದರ ಉಪಸೆಕ್ಷನ್‌ಗಳು ಯಾವ ಆಯಾಮದಲ್ಲೂ ಸಹಕಾರ ತತ್ವಕ್ಕೆ ಪೂರಕವಾಗಿ ಇಲ್ಲ. ಹೀಗಾಗಿ ತಿದ್ದುಪಡಿ ಮಸೂದೆಯಲ್ಲಿರುವ 45ನೇ ಸೆಕ್ಷನ್‌ ಮತ್ತು ಅದರ 12 ಉಪಸೆಕ್ಷನ್‌ಗಳನ್ನು ತೆಗೆದುಹಾಕಬೇಕು. ಮೂಲ ಕಾಯ್ದೆಯಲ್ಲಿ ಇರುವ ಅಂಶಗಳನ್ನೇ ಉಳಿಸಿಕೊಳ್ಳಬೇಕು ಎಂದು ರಾಜ್ಯ ಸಹಕಾರ ಬ್ಯಾಂಕ್‌ಗಳ ರಾಷ್ಟ್ರೀಯ ಒಕ್ಕೂಟವು ಜಂಟಿ ಸದನ ಸಮಿತಿಗೆ ಆಕ್ಷೇಪ ಸಲ್ಲಿಸಿತ್ತು.

*ಈ ಆಕ್ಷೇಪವನ್ನು ನಿರಾಕರಿಸಿದ್ದ ಸದನ ಸಮಿತಿಯು, ತಿದ್ದುಪಡಿಯು ಸಮಂಜಸವಾಗಿದೆ. ಹೀಗಾಗಿ ತಿದ್ದುಪಡಿಯನ್ನು ಹಾಗೇ ಉಳಿಸಿಕೊಳ್ಳಬೇಕು ಎಂದು ಶಿಫಾರಸು ಮಾಡಿತ್ತು.

ನೇಮಕಾತಿಗೆ ಏಕರೂಪತೆ ಮತ್ತು ಕೇಂದ್ರಕ್ಕೆ ಅಧಿಕಾರ

ಮೂಲ ಕಾಯ್ದೆಯ 49ನೇ ಸೆಕ್ಷನ್‌: ಬಹುರಾಜ್ಯ ಸಹಕಾರ ಸಂಘಗಳ ಆಡಳಿತ ಮಂಡಳಿಗಳು, ತಮ್ಮ ಸಂಘಕ್ಕೆ ಅಗತ್ಯವಿರುವ ನೌಕರರನ್ನು ನೇಮಕ ಮಾಡಿಕೊಳ್ಳುವ ಅಧಿಕಾರ ಹೊಂದಿವೆ. ನೇಮಕಾತಿಗೆ ಸಂಬಂಧಿಸಿದ ನಿಯಮಗಳು, ನೇಮಕಾತಿ ಪ್ರಕ್ರಿಯೆಗಳನ್ನು ಆಡಳಿತ ಮಂಡಳಿಗಳೇ ರೂಪಿಸಿಕೊಳ್ಳಬಹುದು ಎಂದು ಮೂಲ ಕಾಯ್ದೆಯ 49ನೇ ಸೆಕ್ಷನ್‌ ಮತ್ತು ಅದರ ಉಪಸೆಕ್ಷನ್‌ಗಳಲ್ಲಿ ವಿವರಿಸಲಾಗಿದೆ.

ತಿದ್ದುಪಡಿ ಮಸೂದೆ: ಬಹುರಾಜ್ಯ ಸಹಕಾರ ಸಂಘಗಳ ನೇಮಕಾತಿಗೆ ಸಂಬಂಧಿಸಿದ ನಿಯಮಗಳು ಮತ್ತು ಪ್ರಕ್ರಿಯೆಗಳನ್ನು ಕೇಂದ್ರ ಸಹಕಾರ ಸಚಿವಾಲಯವು ರೂಪಿಸಲಿದೆ. ಆ ನಿಯಮಾವಳಿಗಳ ಪ್ರಕಾರವೇ ನೇಮಕಾತಿ ನಡೆಯಬೇಕು ಎಂದು ತಿದ್ದುಪಡಿ ಮಸೂದೆಯ 49(ಇ) ಸೆಕ್ಷನ್‌ನಲ್ಲಿ ವಿವರಿಸಲಾಗಿದೆ.

‘ಬಹುರಾಜ್ಯ ಸಹಕಾರ ಸಂಘಗಳಲ್ಲಿ ಆಡಳಿತ ಮಂಡಳಿ ಸದಸ್ಯರು ತಮ್ಮ ಸಂಬಂಧಿಗಳು ಅಥವಾ ತಮಗೆ ಬೇಕಾದವರನ್ನು ನೇಮಕಾತಿ ಮಾಡಿಕೊಳ್ಳುವುದನ್ನು ತಪ್ಪಿಸಲು ಮತ್ತು ನೇಮಕಾತಿಯಲ್ಲಿ ಪಾರದರ್ಶಕತೆಯನ್ನು ತರಲು ಈ ತಿದ್ದುಪಡಿಯನ್ನು ತರಲಾಗುತ್ತಿದೆ’ ಎಂದು ಕೇಂದ್ರ ಸಹಕಾರ ಸಚಿವಾಲಯವು ಪ್ರತಿಪಾದಿಸಿತ್ತು.

ಆಕ್ಷೇಪಗಳು: ‘ಸಹಕಾರ ಸಂಘಗಳಿಗೆ ನೇಮಕಾತಿ ಹೇಗೆ ನಡೆಯಬೇಕು ಎಂಬುದನ್ನು ಕೇಂದ್ರ ಸರ್ಕಾರವು ನಿರ್ಧರಿಸಬೇಕು ಎಂಬ ತಿದ್ದುಪಡಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದು ಸಹಕಾರ ತತ್ವಗಳಿಗೆ ವಿರುದ್ಧವಾದುದು ಮತ್ತು ಸಹಕಾರ ಸಂಘಗಳ ಅಧಿಕಾರ, ಸ್ವಾತಂತ್ರ್ಯ ಮತ್ತು ಸ್ವಾಯತ್ತೆಗೆ ಧಕ್ಕೆ ತರುವಂತಹ ನಡೆ. ಹೀಗಾಗಿ ಈ ತಿದ್ದುಪಡಿಯನ್ನು ಕೈಬಿಡಬೇಕು. ಸಹಕಾರ ಸಂಘಗಳು ತಮ್ಮ ಸೇವಾ ನಿಯಮಗಳ ಪ್ರಕಾರವೇ ನೇಮಕಾತಿ ನಡೆಸಲು ಅವಕಾಶ ಮಾಡಿಕೊಡಬೇಕು’ ಎಂದು ಭಾರತೀಯ ರಾಷ್ಟ್ರೀಯ ಸಹಕಾರ ಒಕ್ಕೂಟ ಆಕ್ಷೇಪ ದಾಖಲಿಸಿತ್ತು. ನಾಫೆಡ್‌ ಮತ್ತು ರಾಷ್ಟ್ರೀಯ ನಗರ ಸಹಕಾರ ಬ್ಯಾಂಕ್‌ಗಳ ಒಕ್ಕೂಟ ಸಹ ಇದೇ ಆಕ್ಷೇಪವನ್ನು ದಾಖಲಿಸಿದ್ದವು. ‘ನಗರ ಸಹಕಾರ ಬ್ಯಾಂಕ್‌ಗಳಿಗೆ ಇಂತಹ ನಿಯಮವನ್ನು ಹೇರಲು ಬರುವುದಿಲ್ಲ. ಹೀಗಾಗಿ ಈ ಸೆಕ್ಷನ್‌ನ ವ್ಯಾಪ್ತಿಯಿಂದ ನಗರ ಸಹಕಾರ ಬ್ಯಾಂಕ್‌ಗಳನ್ನು ಹೊರಗಿಡಬೇಕು’ ಎಂದು ರಾಷ್ಟ್ರೀಯ ನಗರ ಸಹಕಾರ ಬ್ಯಾಂಕ್‌ಗಳ ಒಕ್ಕೂಟ ಕೋರಿತ್ತು.

*ಈ ಆಕ್ಷೇಪಗಳನ್ನು ನಿರಾಕರಿಸಿದ ಜಂಟಿ ಸದನ ಸಮಿತಿಯು, ಸಹಕಾರ ಸಚಿವಾಲಯದ ಪ್ರತಿಪಾದನೆ ಸರಿಯಾಗಿದೆ. ಹೀಗಾಗಿ ಈ ತಿದ್ದುಪಡಿಗಳನ್ನು ಉಳಿಸಿಕೊಳ್ಳಬೇಕು ಎಂದು ಶಿಫಾರಸು ಮಾಡಿತ್ತು.

ಸಿಇಒ ಆಗಲು 21 ವರ್ಷವಾಗಿದ್ದರೆ ಸಾಕು

ಮೂಲ ಕಾಯ್ದೆಯ 51ನೇ ಸೆಕ್ಷನ್‌: ಬಹುರಾಜ್ಯ ಸಹಕಾರ ಸಂಘಗಳಿಗೆ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯನ್ನು (ಸಿಇಒ) ಆಡಳಿತ ಮಂಡಳಿಯೇ ನೇಮಿಸಬಹುದು ಎಂದು ಮೂಲ ಕಾಯ್ದೆಯ 51ನೇ ಸೆಕ್ಷನ್‌ ಹೇಳುತ್ತದೆ. ಆದರೆ, ಇಲ್ಲಿ ಸಿಇಒ ಆಗಿ ನೇಮಕ ಆಗುವವರ ಕನಿಷ್ಠ ಮತ್ತು ಗರಿಷ್ಠ ವಯೋಮಿತಿಯನ್ನು ವಿವರಿಸಿಲ್ಲ. ಆದರೆ, ಬಹುರಾಜ್ಯ ಸಹಕಾರ ಸಂಘಗಳ ಸೇವಾ ನಿಯಮಗಳ ಪ್ರಕಾರ ಸಿಇಒ ನೇಮಕಾತಿ ನಡೆಯುತ್ತಿದೆ.

ತಿದ್ದುಪಡಿ ಮಸೂದೆ: ‘ಬಹುರಾಜ್ಯ ಸಹಕಾರ ಸಂಘಗಳಿಗೆ ಸಿಇಒ ಆಗಿ ನೇಮಕವಾಗುವ ವ್ಯಕ್ತಿಗೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು. ಸಿಇಒ ಆಗಿ ನೇಮಕ ಮಾಡುವ ವ್ಯಕ್ತಿಯನ್ನು ಏಕೆ ಆಯ್ಕೆ ಮಾಡಲಾಗಿದೆ ಎಂಬುದನ್ನು ಸಮರ್ಥಿಸುವ ಕಾರಣಗಳು ಇರುವ ವರದಿಯನ್ನು ಆಡಳಿತ ಮಂಡಳಿ ಪ್ರಕಟಿಸಬೇಕು’ ಎಂದು ತಿದ್ದುಪಡಿ ಮಸೂದೆಯ 51(ಎ) ಸೆಕ್ಷನ್‌ನಲ್ಲಿ ವಿವರಿಸಲಾಗಿದೆ.

ಆಕ್ಷೇಪಗಳು: ‘21 ವರ್ಷ ವಯಸ್ಸಿನ ವ್ಯಕ್ತಿಯು ಬಹುರಾಷ್ಟ್ರ ಸಹಕಾರ ಸಂಘವೊಂದನ್ನು ಮುನ್ನಡೆಸುವಷ್ಟು ಪ್ರಬುದ್ಧತೆ ಹೊಂದಿರುವ ಸಾಧ್ಯತೆ ತೀರಾ ಕಡಿಮೆ. ಹೀಗಾಗಿ ಸಿಇಒ ಆಗಲು ಸೂಚಿಸಿರುವ ಕನಿಷ್ಠ ವಯೋಮಿತಿಯನ್ನು 35 ವರ್ಷಕ್ಕೆ ಏರಿಕೆ ಮಾಡಬೇಕು’ ಎಂದು ರಾಜ್ಯ ಸಹಕಾರ ಬ್ಯಾಂಕ್‌ಗಳ ರಾಷ್ಟ್ರೀಯ ಒಕ್ಕೂಟವು ತನ್ನ ಆಕ್ಷೇಪದಲ್ಲಿ ವಿವರಿಸಿತ್ತು. ಭಾರತೀಯ ರಾಷ್ಟ್ರೀಯ ಸಹಕಾರ ಒಕ್ಕೂಟ ಸಹ ಇದನ್ನೇ ಹೇಳಿತ್ತು.

ಭಾರತೀಯ ರಿಸರ್ವ್‌ ಬ್ಯಾಂಕ್‌, ‘ಬ್ಯಾಂಕಿಂಗ್‌ ನಿಯಂತ್ರಣ ಕಾಯ್ದೆಯ ಪ್ರಕಾರ ಸಿಇಒ ಆಗಲು ಕನಿಷ್ಠ ವಯೋಮಿತಿಯನ್ನು 35 ವರ್ಷಗಳಿಗೆ ನಿಗದಿ ಮಾಡಬೇಕು ಎಂಬ ನಿಯಮ ಜಾರಿಯಲ್ಲಿದೆ. ಸಿಇಒ ಆಗುವವರಿಗೆ ಜ್ಞಾನದ ಜತೆಗೆ ಅನುಭವವೂ ಇರಬೇಕು’ ಎಂದು ಆಕ್ಷೇಪ ಸಲ್ಲಿಸಿತ್ತು.

*ಈ ಎಲ್ಲಾ ಆಕ್ಷೇಪಗಳನ್ನು ನಿರಾಕರಿಸಿದ್ದ ಜಂಟಿ ಸದನ ಸಮಿತಿಯು, ತಿದ್ದುಪಡಿ ಅಂಶಗಳು ಸಮಂಜಸವಾಗಿವೆ. ಅವನ್ನು ಹಾಗೆಯೇ ಉಳಿಸಿಕೊಳ್ಳಬಹುದು ಎಂದು ಶಿಫಾರಸು ಮಾಡಿತ್ತು.

ಆಧಾರ: ಸಹಕಾರ ಸಂಘಗಳ ಕಾಯ್ದೆ–2002, ಸಹಕಾರ ಸಂಘಗಳ (ತಿದ್ದುಪಡಿ) ಮಸೂದೆ–2022, ಸಹಕಾರ ಸಂಘಗಳ (ತಿದ್ದುಪಡಿ) ಮಸೂದೆ–2022ರ ಮೇಲಿನ ಜಂಟಿ ಸದನ ಸಮಿತಿಯ ವರದಿ, ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT