ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಸಮಗ್ರ ಮಾಹಿತಿ: ಏನಿದು ಅವಿಶ್ವಾಸ ಗೊತ್ತುವಳಿ? ಮಂಡನೆ ಹೇಗೆ, ಮುಂದೇನಾಗುತ್ತದೆ?
ಸಮಗ್ರ ಮಾಹಿತಿ: ಏನಿದು ಅವಿಶ್ವಾಸ ಗೊತ್ತುವಳಿ? ಮಂಡನೆ ಹೇಗೆ, ಮುಂದೇನಾಗುತ್ತದೆ?
Published 27 ಜುಲೈ 2023, 6:56 IST
Last Updated 27 ಜುಲೈ 2023, 7:27 IST
ಅಕ್ಷರ ಗಾತ್ರ

ನವದೆಹಲಿ: ಮಣಿಪುರದಲ್ಲಿನ ಕ್ಷೋಭೆಯ ಕುರಿತು ಸಂಸತ್ತಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿಕೆ ನೀಡಬೇಕು ಎಂಬ ಆಗ್ರಹವು ಸಂಸತ್ತಿನ ಮುಂಗಾರು ಅಧಿವೇಶನ ಸುಗಮವಾಗಿ ನಡೆಯುವುದಕ್ಕೆ ಅಡ್ಡಿಯಾಗಿದೆ. ಭಾರತ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಮೈತ್ರಿಕೂಟಕ್ಕೆ (I.N.D.I.A) ಸೇರಿದ ವಿಪಕ್ಷಗಳು ಕಲಾಪ ನಡೆಯಲು ಅವಕಾಶ ಮಾಡಿಕೊಡುತ್ತಿಲ್ಲ. ಇದರೊಂದಿಗೆ ಬುಧವಾರ ಸಂಸತ್ತಿನಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಪ್ರಸ್ತಾಪವನ್ನು ಸ್ಪೀಕರ್‌ಗೆ ಒಪ್ಪಿಸಲಾಗಿದೆ. ಲೋಕಸಭಾಧ್ಯಕ್ಷರು ಅದನ್ನು ಸ್ವೀಕರಿಸಿ, ಚರ್ಚೆಗೆ ದಿನಾಂಕ ನಿಗದಿಪಡಿಸುವುದಾಗಿಯೂ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಅವಿಶ್ವಾಸ ನಿರ್ಣಯ ಅಥವಾ ಗೊತ್ತುವಳಿ - ಈ ಕುರಿತು ನೀವು ತಿಳಿದುಕೊಳ್ಳಲೇಬೇಕಾದ ವಿಚಾರಗಳು ಇಲ್ಲಿವೆ:

ಅವಿಶ್ವಾಸ ನಿರ್ಣಯ ಅಥವಾ ಅವಿಶ್ವಾಸ ಗೊತ್ತುವಳಿ ಎಂದರೇನು?
ಸರ್ಕಾರಕ್ಕೆ ಬಹುಮತವನ್ನು ಹಾಗೂ ಆಡಳಿತ ನಡೆಸುವ ಸಾಮರ್ಥ್ಯವನ್ನು ಪ್ರಶ್ನಿಸಲು ವಿಪಕ್ಷಕ್ಕೆ ಅವಕಾಶವಿರುವ ಸಂಸದೀಯ ಪ್ರಕ್ರಿಯೆಯೇ ಅವಿಶ್ವಾಸ ಗೊತ್ತುವಳಿ. ಈ ಗೊತ್ತುವಳಿಯನ್ನು ಸದನಗಳು ಬಹುಮತದಿಂದ ಅಂಗೀಕರಿಸಿದರೆ, ಸರ್ಕಾರವು ರಾಜೀನಾಮೆ ನೀಡಬೇಕಾಗುತ್ತದೆ.
ಅವಿಶ್ವಾಸ ಗೊತ್ತುವಳಿಯನ್ನು ಯಾರು ಸಲ್ಲಿಸಬಹುದು?
ಲೋಕಸಭೆಯ ಯಾವುದೇ ಸದಸ್ಯ ಕೂಡ ಅವಿಶ್ವಾಸ ಗೊತ್ತುವಳಿ ಮಂಡಿಸಬಹುದು. ಆದರೆ ಈ ಗೊತ್ತುವಳಿಗೆ ಸದನದಲ್ಲಿರುವ ಕನಿಷ್ಠ 50 ಮಂದಿ ಬೆಂಬಲಿಸಬೇಕಾಗುತ್ತದೆ.
ಅವಿಶ್ವಾಸ ಗೊತ್ತುವಳಿ ಹೇಗೆ ಮಂಡಿಸಲಾಗುತ್ತದೆ?
ಅವಿಶ್ವಾಸ ಗೊತ್ತುವಳಿಯು ಲಿಖಿತ ರೂಪದಲ್ಲಿರಬೇಕು ಮತ್ತು ಅದನ್ನು ಮಂಡಿಸುವವರು ಸಹಿ ಹಾಕಿರಬೇಕು. ಸದನದ ಕಲಾಪವಿರುವ ಯಾವುದೇ ದಿನ, ಈ ಗೊತ್ತುವಳಿಯನ್ನು ಸ್ಪೀಕರ್ ಅಥವಾ ಸಭಾಧ್ಯಕ್ಷರಿಗೆ ಸಲ್ಲಿಸಬೇಕಾಗುತ್ತದೆ.
ಅವಿಶ್ವಾಸ ಗೊತ್ತುವಳಿಯನ್ನು ಸಲ್ಲಿಸಿದ ಬಳಿಕ ಏನಾಗುತ್ತದೆ?
ಈ ಅವಿಶ್ವಾಸ ಗೊತ್ತುವಳಿಯನ್ನು ಚರ್ಚೆಗೆ ಸದನದ ಮುಂದಿಡಬೇಕೇ ಅಥವಾ ಬೇಡವೇ ಎಂಬುದನ್ನು ಸ್ಪೀಕರ್ ನಿರ್ಣಯಿಸುತ್ತಾರೆ. ಗೊತ್ತುವಳಿಯನ್ನು ಸ್ವೀಕರಿಸಿದರೆ, ಇದರ ಕುರಿತ ಚರ್ಚೆಗಾಗಿ ದಿನಾಂಕ ಮತ್ತು ಸಮಯವನ್ನು ಸ್ಪೀಕರ್ ನಿರ್ಧರಿಸುತ್ತಾರೆ. ಸಂಸದೀಯ ನಿಯಮಾವಳಿಯ ಅನುಸಾರ ಸ್ಪೀಕರ್ ಅವರು ಸಮಯಾವಕಾಶವನ್ನು ನೀಡಬಹುದಾಗಿದೆ.
ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆ ಹೇಗೆ ನಡೆಯುತ್ತದೆ?
ಅವಿಶ್ವಾಸ ನಿರ್ಣಯದ ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ. ಲೋಕಸಭಾ ಸದಸ್ಯ ಇದನ್ನು ಮಂಡಿಸುತ್ತಾರೆ ಮತ್ತು ಸರ್ಕಾರವು ಇದಕ್ಕೆ ಪ್ರತಿಕ್ರಿಯೆ ನೀಡುತ್ತದೆ. ಈ ಗೊತ್ತುವಳಿ ಕುರಿತು ವಿಪಕ್ಷ ಸದಸ್ಯರಿಗೆ ಮಾತನಾಡುವುದಕ್ಕೆ ಅವಕಾಶ ನೀಡಲಾಗುತ್ತದೆ.
ಅವಿಶ್ವಾಸ ಗೊತ್ತುವಳಿಯ ಮೇಲಿನ ಮತದಾನ ಹೇಗೆ?
ಸಮಗ್ರವಾಗಿ ಚರ್ಚೆ ನಡೆದ ಬಳಿಕ, ಅವಿಶ್ವಾಸ ಗೊತ್ತುವಳಿಯನ್ನು ಲೋಕಸಭೆಯಲ್ಲಿ ಮತಕ್ಕೆ ಹಾಕಲಾಗುತ್ತದೆ. ಸದನದಲ್ಲಿರುವವರಲ್ಲಿ ಬಹುಮತದ ಬೆಂಬಲ ದೊರೆತರೆ ಅವಿಶ್ವಾಸ ನಿರ್ಣಯಕ್ಕೆ ಜಯವಾಗುತ್ತದೆ.
ಅವಿಶ್ವಾಸ ಗೊತ್ತುವಳಿಗೆ ಮತದಾನದಲ್ಲಿ ಬಹುಮತ ದೊರೆತರೆ ಏನಾಗುತ್ತದೆ?
ಅವಿಶ್ವಾಸ ನಿರ್ಣಯಕ್ಕೆ ಜಯ ದೊರೆತರೆ ಅಧಿಕಾರದಲ್ಲಿರುವ ಸರ್ಕಾರವು ಬಹುಮತ ಕಳೆದುಕೊಂಡಂತೆ ಹಾಗೂ ತಕ್ಷಣ ರಾಜೀನಾಮೆ ನೀಡಬೇಕಾಗುತ್ತದೆ.
ಅವಿಶ್ವಾಸ ನಿರ್ಣಯಕ್ಕೆ ಸೋಲಾದರೆ, (ಸರ್ಕಾರಕ್ಕೆ ಜಯವಾದರೆ) ಏನಾಗುತ್ತದೆ?
ಅವಿಶ್ವಾಸ ನಿರ್ಣಯದ ಮತದಾನದಲ್ಲಿ ಈ ಗೊತ್ತುವಳಿ ತಿರಸ್ಕೃತವಾದರೆ, ಸರ್ಕಾರ ಗೆದ್ದಂತೆ. ಸಂಸತ್ತಿಗೆ ಸರ್ಕಾರದ ಮೇಲೆ ವಿಶ್ವಾಸ ಇದೆ ಎಂದರ್ಥವಾಗಿದ್ದು, ಅದು ಅಧಿಕಾರದಲ್ಲಿ ಮುಂದುವರಿಯಬಹುದಾಗಿದೆ.

ಹಿಂದಿನ ಅವಿಶ್ವಾಸ ನಿರ್ಣಯಗಳ ಬಗ್ಗೆ ಒಂದು ಹಿನ್ನೋಟ

  • 1999ರ ಏಪ್ರಿಲ್ ತಿಂಗಳಲ್ಲಿ ಎನ್‌ಡಿಎ ಸರ್ಕಾರದ ನೇತೃತ್ವ ವಹಿಸಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಒಂದು ಮತದ ಅಂತರದಿಂದ (269-270) ಸೋತು, ಅವರ ಸರ್ಕಾರ ರಾಜೀನಾಮೆ ನೀಡಬೇಕಾಯಿತು.

  • 2018ರಲ್ಲಿಯೂ ವಿಪಕ್ಷಗಳು ನರೇಂದ್ರ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದವು ಮತ್ತು ಅದಕ್ಕೆ ಸೋಲಾಗಿತ್ತು.

  • ಸ್ವಾತಂತ್ರ್ಯ ಬಂದಂದಿನಿಂದ ಇದುವರೆಗೆ 27 ಬಾರಿ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲಾಗಿತ್ತು. 1963ರಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ವಿರುದ್ಧ ಮೊದಲ ಬಾರಿ ಅವಿಶ್ವಾಸ ನಿರ್ಣಯ ಮಂಡಿಸಲಾಗಿತ್ತು.

  • ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅತ್ಯಧಿಕ ಅವಿಶ್ವಾಸ ಗೊತ್ತುವಳಿ ಎದುರಿಸಿದವರು. ಅವರು 15 ಬಾರಿ ಎದುರಿಸಿದ್ದರೆ, ಲಾಲ್ ಬಹಾದುರ್ ಶಾಸ್ತ್ರಿ ಮತ್ತು ಪಿ.ವಿ.ನರಸಿಂಹ ರಾವ್ ತಲಾ ಮೂರು ಬಾರಿ ಅವಿಶ್ವಾಸ ಗೊತ್ತುವಳಿ ಎದುರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT