ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ | ಸಿರಿ ಕನ್ನಡ: ಎರಡು ಪಠ್ಯ ಪುಸ್ತಕಗಳ ವ್ಯತ್ಯಾಸ

Last Updated 18 ಮೇ 2022, 19:45 IST
ಅಕ್ಷರ ಗಾತ್ರ

ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಭಾಷಾ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಸಿ.ಎಸ್‌. ರಾಮಚಂದ್ರ ನೇತೃತ್ವದ ಸಮಿತಿಯು 2010ರಲ್ಲಿ ಹತ್ತನೇ ತರಗತಿಯ ‘ಸಿರಿಕನ್ನಡ’ ಪಠ್ಯ ಪುಸ್ತಕವನ್ನುರಚಿಸಿತು. ಲೇಖಕ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯು ಈ ಪುಸ್ತಕವನ್ನು ಪರಿಷ್ಕರಣೆಗೆ ಒಳಪಡಿಸಿತು. ಈ ಪಠ್ಯಪುಸ್ತಕವನ್ನು 2017–18ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಯಿತು. ಈ ಪುಸ್ತಕವನ್ನು ಪುನರ್‌ ಪರಿಷ್ಕರಿಸಲು ರಾಜ್ಯ ಸರ್ಕಾರವು ರೋಹಿತ್‌ ಚಕ್ರತೀರ್ಥ ಅವರ ನೇತೃತ್ವದಲ್ಲಿ ಸಮಿತಿ ರಚಿಸಿದೆ. ಸಮಿತಿಯು ಈಗ ತನ್ನ ಶಿಫಾರಸುಗಳನ್ನು ಸಲ್ಲಿಸಿದೆ. ಈ ಶಿಫಾರಸುಗಳಲ್ಲಿ ಹಲವು ಬದಲಾವಣೆಗಳನ್ನು ಸೂಚಿಸಲಾಗಿದೆ ಮತ್ತು ಈ ಬಗ್ಗೆ ತೀವ್ರವಾದ ಚರ್ಚೆ ನಡೆಯುತ್ತಿದೆ. ಬರಗೂರು ರಾಮಚಂದ್ರಪ್ಪ ಅವರನ್ನೂ ಒಳಗೊಂಡಂತೆ ಹಲವರು ಬದಲಾವಣೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ನಮ್ಮ ಸಮಿತಿಗಳು ಮಾಡಿರುವುದು ಪಠ್ಯ ‍ಪುಸ್ತಕಗಳ ಪರಿಷ್ಕರಣೆಯೇ ಹೊರತು ಪಠ್ಯ ಪುಸ್ತಕಗಳ ಸಮಗ್ರ ರಚನೆ ಅಲ್ಲ. ಆದ್ದರಿಂದ ಈಗಾಗಲೇ ರಚನೆಯಾಗಿರುವ ಪಠ್ಯ ಪುಸ್ತಕಗಳ ಸ್ವರೂಪಕ್ಕೆ ಎಲ್ಲಿಯೂ ಧಕ್ಕೆ ಉಂಟು ಮಾಡಿಲ್ಲ. ಲಿಂಗತ್ವ ಸಮಾನತೆ, ಪ್ರಾದೇಶಿಕ ಪ್ರಾತಿನಿಧ್ಯ, ರಾಷ್ಟ್ರೀಯ ಸಮಗ್ರತೆ, ಸಮಾನತೆ, ಸಾಮಾಜಿಕ ಸಾಮರಸ್ಯಗಳ ಹಿನ್ನೆಲೆಯಲ್ಲಿ ಕೆಲವು ಪರಿಷ್ಕರಣೆಗಳು ನಡೆದಿವೆ. ಹೀಗೆಪರಿಷ್ಕರಿಸುವಾಗ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಮತ್ತು ರಾಜ್ಯ ಪಠ್ಯಕ್ರಮ ಚೌಕಟ್ಟುಗಳನ್ನು ಮೀರಿಲ್ಲವೆಂದುತಿಳಿಸಬಯಸುತ್ತೇವೆ, ಜೊತೆಗೆ ನಮ್ಮ ಸಂವಿಧಾನದ ಆಶಯಗಳನ್ನು ಅನುಸರಿಸಲಾಗಿದೆ. ಸಮಿತಿಗಳು ಮಾಡಿದಪರಿಷ್ಕರಣೆಯನ್ನು ಮತ್ತೊಮ್ಮೆ ಪರಿಶೀಲಿಸಲು ವಿಷಯವಾರು ಉನ್ನತ ಪರಿಶೀಲನ ಸಮಿತಿಗಳನ್ನು ರಚಿಸಿಅಭಿಪ್ರಾಯ
ಪಡೆದು ಅಳವಡಿಸಲಾಗಿದೆ’ ಎಂದು ಪರಿಷ್ಕರಣೆ ಕುರಿತ ಮುನ್ನುಡಿಯಲ್ಲಿ ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.

ರೋಹಿತ್‌ ಚಕ್ರತೀರ್ಥ ಅವರೂ ಪರಿಷ್ಕರಣೆಯ ಹಿಂದೆ ಇದ್ದ ಸಿದ್ಧಾಂತವೇನು ಎಂಬುದನ್ನು ಮುನ್ನುಡಿಯಲ್ಲಿ ಹೇಳಿಕೊಂಡಿದ್ದಾರೆ. ‘ವಿದ್ಯಾರ್ಥಿಗಳು ಓದುವ ಪಠ್ಯಗಳು ಆರೋಗ್ಯಕರ ಚಿಂತನೆಗಳನ್ನು ಒಳಗೊಂಡಿರಬೇಕು. ಸಮಾಜದ ವಿವಿಧವರ್ಗ-ಸಮುದಾಯಗಳಲ್ಲಿ ಪರಸ್ಪರ ಅಪನಂಬಿಕೆ, ದ್ವೇಷ, ತಾತ್ಸಾರಗಳನ್ನು ಹರಡುವಂತಿರಬಾರದು.ಅವರಲ್ಲಿ ರಾಷ್ಟ್ರೀಯತೆಯನ್ನೂ ದೇಶಪ್ರೇಮವನ್ನೂ ಉದ್ದೀಪಿಸುವಂತಿರಬೇಕು. ರಾಜ್ಯ, ದೇಶಗಳಲ್ಲಿಆಗಿಹೋದ ಸಂಗತಿಗಳ ಬಗ್ಗೆ ನಿಖರವಾದ, ವಸ್ತುನಿಷ್ಠವಾದ ಮಾಹಿತಿ ದೊರೆಯುವಂತಿರಬೇಕು.ಅವರಿಗೆ ಸ್ಥಳೀಯ ಸಂಸ್ಕೃತಿ, ಭಾಷೆ, ಜನಪದಗಳ ಪರಿಚಯವಾಗುವಂತಿರಬೇಕು. ಒಟ್ಟಾರೆಯಾಗಿ ಪಠ್ಯಗಳು ವಿದ್ಯಾರ್ಥಿಗಳನ್ನು ಉತ್ತಮ, ಜವಾಬ್ದಾರಿಯುತ, ಪ್ರಜ್ಞಾವಂತ, ಮುಕ್ತ ಮನಸ್ಸಿನ, ಸಭ್ಯನಾಗರಿಕರನ್ನಾಗಿ ಮಾಡಬೇಕು. ಆ ಜವಾಬ್ದಾರಿಯನ್ನು ಗಮನದಲ್ಲಿರಿಸಿಕೊಂಡು ಪಾಠಗಳನ್ನುಪರಿಷ್ಕರಣೆ ಮಾಡಬೇಕಾಯಿತು’ ಎಂಬ ಮಾತು ಮುನ್ನುಡಿಯಲ್ಲಿ ಇದೆ.

ಪರಿಷ್ಕೃತ ಪಠ್ಯದಲ್ಲಿದ್ದು, ಮರುಪರಿಷ್ಕರಣೆ ಶಿಫಾರಸಿನಲ್ಲಿ ಕೈಬಿಡಲಾದ ಪಾಠಗಳು
ಪರಿಷ್ಕೃತ ಪಠ್ಯದಲ್ಲಿದ್ದು, ಮರುಪರಿಷ್ಕರಣೆ ಶಿಫಾರಸಿನಲ್ಲಿ ಕೈಬಿಡಲಾದ ಪಾಠಗಳು

ಬರಗೂರು ನೇತೃತ್ವದ ಸಮಿತಿಯು ರಚಿಸಿದ 10ನೇ ತರಗತಿಯ ಕನ್ನಡ ಪಠ್ಯ ಪುಸ್ತಕ ಮತ್ತು ಚಕ್ರತೀರ್ಥ ನೇತೃತ್ವದ ಸಮಿತಿಯ ಮರುಪರಿಷ್ಕರಣೆಯ ಶಿಫಾರಸುಗಳ ನಡುವೆ ಹಲವು ವ್ಯತ್ಯಾಸಗಳು ಇವೆ. ಪಠ್ಯದಲ್ಲಿ ಗದ್ಯ, ಪದ್ಯ ಮತ್ತು ಪಠ್ಯಪೂರಕ ಅಧ್ಯಯನ ಎಂಬ ಮೂರು ಭಾಗಗಳಿವೆ. ಪಠ್ಯ ಪುಸ್ತಕದಲ್ಲಿರುವ ಮೊದಲನೆಯ ಗದ್ಯ ಭಾಗದಿಂದ ಮೂರು ಪಾಠಗಳನ್ನು ಕೈಬಿಡಲು ಮತ್ತು ಮೂರು ಪಾಠಗಳನ್ನು ಸೇರಿಸಲು ಮರುಪರಿಷ್ಕರಣೆ ಸಮಿತಿ ಶಿಫಾರಸು ಮಾಡಿದೆ.

ಮೊದಲ ಬಾರಿ ಪರಿಷ್ಕರಣೆಗೊಂಡ ‍ಪಠ್ಯ ಪುಸ್ತಕದ ಮೊದಲ ಪಾಠವಾಗಿ ಸಾರಾ ಅಬೂಬಕ್ಕರ್‌ ಅವರ ‘ಯುದ್ಧ’ ಕತೆ ಇತ್ತು. ಇದು ಮುಸ್ಲಿಂ ಪಾತ್ರಗಳೇ ಹೆಚ್ಚು ಇರುವ ಮುಸ್ಲಿಂ ಹಿನ್ನೆಲೆಯ ಕತೆ. ಈ ಕತೆಯನ್ನು ಕೈಬಿಡುವಂತೆ ಮರುಪರಿಷ್ಕರಣೆ ಸಮತಿ ಶಿಫಾರಸು ಮಾಡಿದೆ.

ನಾಸ್ತಿಕವಾದಿಯಾಗಿದ್ದ ಎ.ಎನ್‌. ಮೂರ್ತಿರಾವ್‌ ಅವರು ಬರೆದ ವಿಡಂಬನೆಯನ್ನೊಳಗೊಂಡ ಲಲಿತಪ್ರಬಂಧ ‘ವ್ಯಾಘ್ರ ಗೀತೆ’ ಏಳನೆಯ ಪಾಠವಾಗಿ ಪರಿಷ್ಕೃತ ಪಠ್ಯ ಪುಸ್ತಕದಲ್ಲಿ ಇತ್ತು. ಆದರೆ, ಮರುಪರಿಷ್ಕರಣೆ ಶಿಫಾರಸಿನಲ್ಲಿ ಈ ಪ್ರಬಂಧಕ್ಕೆ ಜಾಗ ಸಿಕ್ಕಿಲ್ಲ. ಕನ್ನಡದ ಮೊದಲ ಗದ್ಯ ಕೃತಿಕಾರ ಎಂಬ ಹೆಗ್ಗಳಿಕೆ ಹೊಂದಿರುವ ಶಿವಕೋಟ್ಯಾಚಾರ್ಯ ಅವರ ‘ವಡ್ಡಾರಾಧನೆ’ಯಿಂದ ಆಯ್ದ ‘ಸುಕುಮಾರ ಸ್ವಾಮಿಯ ಕತೆ’ಯು ಪರಿಷ್ಕೃತ ಪಠ್ಯಪುಸ್ತಕದಲ್ಲಿ ಇತ್ತು. ಆದರೆ, ಮರುಪರಿಷ್ಕರಣೆ ಶಿಫಾರಸು ಈ ಪಾಠವನ್ನು ಕೈಬಿಡಲು ಸಲಹೆ ಕೊಟ್ಟಿದೆ.

ಡಾ. ಬನ್ನಂಜೆ ಗೋವಿಂದಾಚಾರ್ಯ ಅವರ ‘ಶುಕನಾಸನ ಉಪದೇಶ’, ಕೇಶವ ಬಲಿರಾಮ ಹೆಡಗೇವಾರ್‌ ಅವರ ‘ನಿಜವಾದ ಆದರ್ಶ ಪುರುಷ ಯಾರಾಗಬೇಕು’ ಮತ್ತು ಶತಾವಧಾನಿ ಡಾ. ಆರ್‌. ಗಣೇಶ್‌ ಅವರ ‘ಶ್ರೇಷ್ಠ ಭಾರತೀಯ ಚಿಂತನೆಗಳು’ ಪಾಠಗಳನ್ನು ಸೇರಿಸುವಂತೆ ಚಕ್ರತೀರ್ಥ ನೇತೃತ್ವದ ಸಮಿತಿಯು ಶಿಫಾರಸು ಮಾಡಿದೆ.

ಪದ್ಯಭಾಗದಲ್ಲಿ ಯಾವುದೇ ಬದಲಾವಣೆಗೆ ಮರುಪರಿಷ್ಕರಣೆ ಸಮಿತಿಯು ಸಲಹೆ ಕೊಟ್ಟಿಲ್ಲ.

‘ಪಠ್ಯ ಪೂರಕ ಅಧ್ಯಯನ’ ವಿಭಾಗದಲ್ಲಿ ಮೂರು ಬದಲಾವಣೆಗಳನ್ನು ಮಾಡುವಂತೆ ಮರುಪರಿಷ್ಕರಣೆ ಸಮಿತಿಯು ಶಿಫಾರಸು ಮಾಡಿದೆ.

ಪರಿಷ್ಕೃತ ಪಠ್ಯ‍ಪುಸ್ತಕದಲ್ಲಿ ಇದ್ದ, ಎಡಪಂಥೀಯ ಡಾ.ಜಿ. ರಾಮಕೃಷ್ಣ ಅವರು ಬರೆದ ‘ಭಗತ್‌ ಸಿಂಗ್‌’ ಜೀವನ ಚರಿತ್ರೆಯಿಂದ ಆಯ್ದ ‘ಭಗತ್‌ ಸಿಂಗ್’ ಎಂಬ ಪಾಠವನ್ನು ಕೈಬಿಡುವಂತೆ ಚಕ್ರತೀರ್ಥ ನೇತೃತ್ವದ ಸಮಿತಿ ಹೇಳಿದೆ. ‘ಬ್ಯೂಟಿ ಎಂಡ್‌ ದಿ ಬೀಸ್ಟ್‌’ ಕತೆಯ ಕನ್ನಡ ಅನುವಾದ ‘ಮೃಗ ಮತ್ತು ಸುಂದರಿ’ಯನ್ನೂ ಮರುಪರಿಷ್ಕೃತ ಪಠ್ಯಪುಸ್ತಕಕ್ಕೆ ಸೇರಿಸಬಾರದು ಎಂದು ಸಮಿತಿಯು ಶಿಫಾರಸು ಮಾಡಿದೆ.

ಹೊಸದಾಗಿ ಸೇರಿಸಲು ಮರುಪರಿಷ್ಕರಣೆ ಸಮಿತಿಯು ಶಿಫಾರಸು ಮಾಡಿದ ಪಾಠಗಳು
ಹೊಸದಾಗಿ ಸೇರಿಸಲು ಮರುಪರಿಷ್ಕರಣೆ ಸಮಿತಿಯು ಶಿಫಾರಸು ಮಾಡಿದ ಪಾಠಗಳು

ಕೋಮುಸಹಿಷ್ಣತೆ ಚಿಂತನೆಗೆ ಕೊಕ್

ಮೊದಲ ಪರಿಷ್ಕರಣೆಯ ಪಠ್ಯಪುಸ್ತಕದಲ್ಲಿ ಸ್ವಾಮಿ ವಿವೇಕಾನಂದರಿಗೆ ಸಂಬಂಧಿಸಿದ ಪಠ್ಯದಲ್ಲಿಧರ್ಮಸಹಿಷ್ಣುತೆ, ಕೋಮುಸಹಿಷ್ಣುತೆ ಮತ್ತು ಜಾತ್ಯತೀತ ತತ್ವಗಳನ್ನು ಬೋಧಿಸುವ ಅಂಶಗಳನ್ನು ಸೇರಿಸಲಾಗಿತ್ತು. ಆದರೆ ಮರುಪರಿಷ್ಕರಣೆಯಲ್ಲಿ ಶಿಫಾರಸು ಮಾಡಲಾದ ಪಠ್ಯಪುಸ್ತಕದಲ್ಲಿ ಈ ಎಲ್ಲಾ ಅಂಶಗಳನ್ನು ಕೈಬಿಡಲಾಗಿದೆ. ಬದಲಿಗೆ ದೇಶದ ಭಾಷೆ, ಸಂಸ್ಕೃತಿ, ವೇದಾಂತಗಳನ್ನು ಪ್ರತಿಯೊಬ್ಬರಿಗೂ ಸಾರಿ ಎಂದು ವಿವೇಕಾನಂದರು ಹೇಳಿದ್ದರು ಎಂಬ ಅಂಶಗಳನ್ನು ಸೇರಿಸಲಾಗಿದೆ.

ಪಠ್ಯಪೂರಕ ಅಧ್ಯಯನ ವಿಭಾಗದಲ್ಲಿ ಮೊದಲ ಪಠ್ಯವಾಗಿ ‘ಸ್ವಾಮಿ ವಿವೇಕಾನಂದರ ಚಿಂತನೆಗಳು’ ಎಂಬ ಪಾಠವನ್ನು ನೀಡಲಾಗಿತ್ತು. ಈ ಪಾಠದಲ್ಲಿ, ವಿವೇಕಾನಂದರು ಜಾತ್ಯತೀತವಾದಿಗಳಾಗಿದ್ದರು ಮತ್ತು ಅವರು ಧಾರ್ಮಿಕ ಮೂಲಭೂತವಾದದ ಪರವಾಗಿ ಇರಲಿಲ್ಲ ಎಂದು ಚಿತ್ರಿಸಲಾಗಿತ್ತು.

‘ವಿವೇಕಾನಂದರು ಏಕಸಂಸ್ಕೃತಿ ಮತ್ತು ಏಕ ಧರ್ಮ ವಿಸ್ತರಣೆಗಳ ಪರವಾಗಿ ಇರಲಿಲ್ಲ. ಅದು ಹಿಂದೂ ಧರ್ಮವಿರಲಿ, ಕ್ರೈಸ್ತ ಧರ್ಮವಿರಲಿ, ಇಸ್ಲಾಂ ಧರ್ಮವಿರಲಿ, ಏಕಧರ್ಮ ಶ್ರೇಷ್ಠತೆಯು ಮತ್ತು ವಿಸ್ತರಣೆಯು ಜೀವವಿರೋಧವೆಂದು ಅವರು ಭಾವಿಸಿದ್ದರು. 1893ರ ಷಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ವಿವೇಕಾನಂದರು, ‘ಸ್ವಮತಾಭಿಮಾನ, ಅನ್ಯ ಮತದ್ವೇಷ ಮತ್ತು ಇವುಗಳಿಂದ ಉತ್ಪನ್ನವಾದಘೋರ ಧಾರ್ಮಿಕ ದುರಭಿಮಾನಗಳು ಈ ಸುಂದರ ಜಗತ್ತನ್ನು ಆವರಿಸಿಕೊಂಡಿವೆ. ಇಂತಹಉಗ್ರ ಧರ್ಮಾಂಧತೆಯ ದೈತ್ಯರಿಲ್ಲದೆ ಇದ್ದರೆ ಮಾನವ ಜನಾಂಗ ಇಂದಿಗಿಂತ ಎಷ್ಟೋಮುಂದುವರೆಯುತ್ತಿತ್ತು.ಪ್ರತಿಯೊಬ್ಬರೂ ಒಂದೇ ಮಾರ್ಗವನ್ನು ಅನುಸರಿಸುವ ದುರ್ದಿನ ಪ್ರಪಂಚಕ್ಕೆ ಬಾರದಿರಲಿ. ವೈವಿಧ್ಯವೇ ಜೀವನದ ರಹಸ್ಯ. ನಾವು ಎಲ್ಲ ಧರ್ಮಗಳಿಗೂ ಗೌರವವನ್ನು ತೋರಬೇಕು’ ಎಂದು ಹೇಳಿದ್ದರು ಎಂಬ ಅಂಶಗಳನ್ನು ಈ ಪಾಠವು ಒಳಗೊಂಡಿತ್ತು.ಜತೆಗೆ ಅವರು ‘ಎಲ್ಲಾ ಹಸಿವುಗಳಿಗಿಂತ, ದೇಹದ ಹಸಿವನ್ನು ಹಿಂಗಿಸುವುದು ಮೊದಲ ಆದ್ಯತೆ’ಯಾಗಿ ಪರಿಗಣಿಸಿದ್ದರು ಎಂದು ಪಾಠದಲ್ಲಿ ವಿವರಿಸಲಾಗಿತ್ತು.

10ನೇ ತರಗತಿಯ ಕನ್ನಡ ಭಾಷಾ ಪಠ್ಯಪುಸ್ತಕದಲ್ಲಿ ಪಠ್ಯಪೂರಕ ಅಧ್ಯಯನ ಎಂಬ ವಿಭಾಗವನ್ನು ಉಳಿಸಿಕೊಳ್ಳಲು ಚಕ್ರತೀರ್ಥ ನೇತೃತ್ವದ ಸಮಿತಿ ಶಿಫಾರಸು ಮಾಡಿದೆ. ಆದರೆ ‘ಸ್ವಾಮಿ ವಿವೇಕಾನಂದರ ಚಿಂತನೆಗಳು’ ಪಾಠದ ಬದಲಿಗೆ, ‘ಉದಾತ್ತ ಚಿಂತನೆಗಳು’ ಎಂಬ ಸಂಗ್ರಹ ಬರಹಗಳ ಪಾಠವನ್ನು ನೀಡಲು ಸೂಚಿಸಿದೆ. ಇದರಲ್ಲಿ ಡಾ.ಬಿ.ಆರ್.ಅಂಬೇಡ್ಕರರಿಗೆ ಸಂಬಂಧಿಸಿದ ಒಂದು ಬರಹ, ಮಹಾತ್ಮ ಗಾಂಧಿ ಅವರಿಗೆ ಸಂಬಂಧಿಸಿದ ಒಂದು ಬರಹ ಮತ್ತು ಸ್ವಾಮಿ ವಿವೇಕಾನಂದರಿಗೆ ಸಂಬಂಧಿಸಿದ ಒಂದು ಬರಹ ಸೇರಿಸಲು ಸಲಹೆ ನೀಡಿದೆ.ಮರುಪರಿಷ್ಕರಣೆ ಸಮಿತಿ ಶಿಫಾರಸು ಮಾಡಿರುವ ಪಠ್ಯಪುಸ್ತಕದಲ್ಲೂ ಸ್ವಾಮಿ ವಿವೇಕಾನಂದರ ಚಿಂತನೆಗೆ ಸಂಬಂಧಿಸಿದ ಪಠ್ಯವನ್ನು ಸೇರಿಸಲಾಗಿದೆ. ಆದರೆ, ‘ವೇದಾಂತದ ಹಸಿವೇ ಮುಖ್ಯ’ ಎಂದು ಈ ಪಠ್ಯದಲ್ಲಿ ಹೇಳಲಾಗಿದೆ. ಜತೆಗೆ ದೇಶದ ಭಾಷೆಯಲ್ಲಿ ಜನರಿಗೆ ಭಾವನೆಗಳನ್ನು ನೀಡಬೇಕು, ಸಂಸ್ಕೃತಿಯನ್ನು ನೀಡಬೇಕು. ಜ್ಞಾನ ಸಂಪತ್ತು ಪಡೆದವರು ಕಾಡುಜನರಂತೆ ಇದ್ದಾರೆ ಎಂದು ವಿವೇಕಾನಂದರು ಹೇಳಿದ್ದರು’ ಎಂದುಹೇಳಲಾಗಿದೆ.

‘ಸಂಸ್ಕೃತಿ ಮಾತ್ರ ಆಘಾತವನ್ನು ಸಹಿಸಬಲ್ಲದು. ಕೇವಲ ಜ್ಞಾನರಾಶಿಗೆ ಅದನ್ನು ಎದುರಿಸುವ ಶಕ್ತಿ ಇಲ್ಲ. ಜಗತ್ತಿಗೆ ಜ್ಞಾನರಾಶಿಯನ್ನೇ ಕೊಡಬಹುದು. ಆದರೆ ಅದರಿಂದ ಹೆಚ್ಚು ಪ್ರಯೋಜನವಿಲ್ಲ. ಸಂಸ್ಕೃತಿಯು ರಕ್ತದಲ್ಲಿ ಹರಿಯಬೇಕು. ಆಧುನಿಕ ಕಾಲದಲ್ಲಿ ಬೇಕಾದಷ್ಟು ಜ್ಞಾನಸಂಪತ್ತನ್ನು ಪಡೆದ ದೇಶಗಳನ್ನು ನೋಡಿರುವೆವು. ಆದರೆ ಅದರಿಂದ ಏನು ಪ್ರಯೋಜನ? ಅವರು ಕಾಡುಜನರಂತೆ ಇರುವರು. ಅವರಲ್ಲಿ ಸಂಸ್ಕೃತಿ ಇಲ್ಲ. ನಮ್ಮ ಶಾಸ್ತ್ರಗಳಲ್ಲಿ ಹುದುಗಿರುವ, ಮಠ ಮತ್ತು ಅರಣ್ಯಗಳಲ್ಲಿ ಅಡಗಿರುವ ಕೆಲವೇ ವ್ಯಕ್ತಿಗಳ ಸ್ವತ್ತಾಗಿರುವ ಆಧ್ಯಾತ್ಮಿಕರತ್ನಗಳನ್ನು ದೇಶ ಭಾಷೆಗಳ ಮೂಲಕ ಜನರಿಗೆ ಪ್ರಚಾರ ಮಾಡಬೇಕು’ ಎಂಬ ವಿವರಣೆಯನ್ನು ಈ ಪಠ್ಯದಲ್ಲಿ ನೀಡಲಾಗಿದೆ.

‘ಎದೆಗೆ ಬಿದ್ದ ಅಕ್ಷರ’ ಸೇರಿಸಿದ್ದು ಯಾರು?

ದೇವನೂರ ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ’ ಲೇಖನವನ್ನು ಮರುಪರಿಷ್ಕರಿಸಿದ ಪಠ್ಯಪುಸ್ತಕದಲ್ಲಿ ಸೇರಿಸಲಾಗಿದೆ ಎಂದು ರೋಹಿತ್‌ ಚಕ್ರತೀರ್ಥ ಅವರು ಹೇಳಿದ್ದಾಗಿ ಇತ್ತೀಚೆಗೆ ವರದಿ ಆಗಿತ್ತು. ಈ ಹೇಳಿಕೆಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ತಪ್ಪು ಮಾಹಿತಿ ಎಂದಿದ್ದಾರೆ. ಏಕೆಂದರೆ, ಬರಗೂರು ನೇತೃತ್ವದ ಸಮಿತಿ ಪರಿಷ್ಕರಿಸಿದ ಪಠ್ಯಪುಸ್ತಕದಲ್ಲಿಯೇ ‘ಎದೆಗೆ ಬಿದ್ದ ಅಕ್ಷರ’ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT